ಸ್ಯಾಂಡಲ್ ವುಡ್ ಸ್ಟಾರ್ ದಿಗಂತ್ ಇತ್ತೀಚೆಗೆ ಗೋವಾದಲ್ಲಿ ಸಾಹಸ ಕ್ರೀಡೆ ಆಡುವ ವೇಳೆ ಬಿದ್ದು ಕುತ್ತಿಗೆಗೆ ತೀವ್ರ ಪೆಟ್ಟು ಮಾಡಿಕೊಂಡಿದ್ದರು.. ಅವರನ್ನ ಏರ್ ಆಂಬ್ಯುಲೆನ್ಸ್ ಮೂಲಕ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಲಾಗಿದೆ..
ದಿಗಂತ್ ಗೆ ನಿನ್ನೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಗೋವಾಕ್ಕೆ ಪತ್ನಿ ಹಾಗೂ ಆಪ್ತರೊಂದಿಗೆ ಪ್ರವಾಸಕ್ಕೆ ತೆರಳಿದ್ದ ದಿಗಂತ್ ಅಲ್ಲಿ ಟ್ರಾಂಪೊಲಿನ್ ಮೇಲೆ ಆಟ ಆಡುವಾಗ ತಲೆ ಕೆಳಗಾಗಿ ಬಿದ್ದ ಪರಿಣಾಮ ಕುತ್ತಿಗೆ ಮೂಳೆಗೆ ಬಲವಾದ ಪೆಟ್ಟು ಬಿದ್ದಿತ್ತು.
ಒಂದು ದಿನ ಗೋವಾದಲ್ಲಿಯೇ ಚಿಕಿತ್ಸೆ ಪಡೆದ ದಿಗಂತ್ ಅವರನ್ನು ನಿನ್ನೆ ಮಧ್ಯಾಹ್ನದ ವೇಳೆಗೆ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಕರೆತರಲಾಯಿತು. ಮಣಿಪಾಲ್ ಆಸ್ಪತ್ರೆಗೆ ದಿಗಂತ್ ರನ್ನು ಕರೆತಂದ ಕೂಡಲೇ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಸತತ ಮೂರು ಗಂಟೆಗಳ ಕಾಲ ಈ ಶಸ್ತ್ರಚಿಕಿತ್ಸೆ ನಡೆದಿದ್ದು, ದಿಗಂತ್ ಈಗ ಆರಾಮವಾಗಿದ್ದಾರೆ ಎನ್ನಲಾಗಿದೆ.
ಶಸ್ತ್ರಚಿಕಿತ್ಸೆ ಬಳಿಕ ದಿಗಂತ್ ರ ಚಿತ್ರವೊಂದನ್ನು ಹೊರಬಿಡಲಾಗಿದ್ದು, ಅದರಲ್ಲಿ ನಗುತ್ತಾ, ವಿಕ್ಟರಿ ಸಿಂಬಲ್ ತೋರಿಸಿದ್ದಾರೆ. ಶಸ್ತ್ರಚಿಕಿತ್ಸೆ ಬಳಿಕ ದಿಗಂತ್ ಅವರನ್ನು ಅಬ್ಸರ್ವೇಶನ್ ನಲ್ಲಿ ಇಡಲಾಗಿದೆ. ಇಂದು ಬೆಳಿಗ್ಗೆ 11 ಗಂಟೆ ವರೆಗೆ ಅವರು ಐಸಿಯುವಿನಲ್ಲಿಯೇ ಇರಲಿದ್ದಾರೆ. ಆ ಬಳಿಕ ಅವರನ್ನು ಜನರಲ್ ವಾರ್ಡ್ಗೆ ಶಿಫ್ಟ್ ಮಾಡಲಾಗುತ್ತದೆ.
ದಿಗಂತ್ ರ ತಂದೆ ಕೃಷ್ಣಮೂರ್ತಿ ಅವರು ಈ ಬಗ್ಗೆ ಮಾತನಾಡಿದ್ದು , ದಿಗಂತ್ ಸದಾ ಸಕ್ರಿಯವಾಗಿರುವ ವ್ಯಕ್ತಿ. ದೇಹಾರೋಗ್ಯಕ್ಕಾಗಿ ಹಲವು ಆಟಗಳನ್ನು ಆಡುತ್ತಿರುತ್ತಾನೆ. ಹಾಗೆಯೇ ಆಟ ಆಡುವಾಗ ಬಿದ್ದು ಪೆಟ್ಟು ಮಾಡಿಕೊಂಡಿದ್ದಾನೆ. ಇದೊಂದು ಸಣ್ಣ ಗಾಯವಷ್ಟೆ. ದಿಗಂತ್ ಗೆ ಬೆನ್ನು ಮೂಳೆ ಮುರಿದಿದೆ, ಅವನಿಗೆ ಇನ್ನು ನಡೆಯಲು ಆಗುವುದಿಲ್ಲ, ನಿಲ್ಲಲು ಆಗುವುದಿಲ್ಲ ಎಂಬುದೆಲ್ಲ ಸುಳ್ಳು ಎಂದು ವದಂತಿಗಳಿಗೆ ತೆರೆ ಎಳೆದಿದ್ದಾರೆ.