ಡಿಕೆ ಬ್ರದರ್ಸ್ಗಳಿಗೆ ಅಭದ್ರತೆ ಕಾಡುತ್ತಿದೆ : ಅಶ್ವಥ್ ನಾರಾಯಣ್ Ashwath Narayan saaksha tv
ಬೆಂಗಳೂರು : ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಹೇಳಿರುವಂತೆ ಡಿಕೆ ಬ್ರದರ್ಸ್ಗಳಿಗೆ ಅಭದ್ರತೆ ಕಾಡುತ್ತಿದೆ ಎಂದು ಸಚಿವ ಅಶ್ವಥ್ ನಾರಾಯಣ್ ಕಿಡಿಕಾರಿದ್ದಾರೆ.
ನಿನ್ನೆ ರಾಮನಗರದಲ್ಲಿ ಡಿ.ಕೆ.ಸುರೇಶ್ ವರ್ತನೆ ಮತ್ತು ಡಿ.ಕೆ.ಶಿವಕುಮಾರ್ ಸಮರ್ಥನೆ ಬಗ್ಗೆ ಕೂ ನಲ್ಲಿ ಪ್ರತಿಕ್ರಿಯೆ ನೀಡಿರುವ ಅಶ್ವಥ್ ನಾರಾಯಣ್, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಹೇಳಿರುವಂತೆ ಡಿಕೆ ಬ್ರದರ್ಸ್ಗಳಿಗೆ ಅಭದ್ರತೆ ಕಾಡುತ್ತಿದೆ. ಗೂಂಡಾಗಳನ್ನು ಕಟ್ಟಿ ಮೆರೆದವರನ್ನು ಮರೆಯಾಗಿಸುವ ಕಲೆ ನಮ್ಮ ರಾಮನಗರದ ಜನತೆಗೆ ಗೊತ್ತಿದೆ. ಇಲ್ಲಿ ಅಭಿವೃದ್ಧಿಗೆ ಮಾತ್ರ ಬೆಲೆ. ಹಾದಿ ತಪ್ಪಿದ ರಾಜಕಾರಣಿಗಳಿಂದ ಜಿಲ್ಲೆಯ ಘನತೆಗೆ ಧಕ್ಕೆ ಉಂಟಾಗುವುದು ಬೇಡ.
ಕಾರ್ಯಕ್ರಮದಲ್ಲಿ ಡಿಕೆ ಸುರೇಶ್ ಮತ್ತವರ ಗ್ಯಾಂಗ್ ತೋರಿದ ಗೂಂಡಾ ವರ್ತನೆ ಹಾಗೂ ಅದನ್ನು ಡಿಕೆ ಶಿವಕುಮಾರ್ ಸಮರ್ಥಿಸಿಕೊಂಡ ರೀತಿ ಕಾಂಗ್ರೆಸ್ ಸಂಸ್ಕೃತಿಗೆ ಹಿಡಿದ ಕೈಗನ್ನಡಿಯಾಗಿದೆ. ಈ ರೀತಿಯ ಪುಂಡಾಟಿಕೆ ಡಿಕೆ ಬ್ರದರ್ಸ್ಗಳು ಕಲಿತು ಬಂದ ಕಲೆ. ರಾಮನಗರದಲ್ಲಿ ನಮ್ಮ ಸರ್ಕಾರ ಮಾಡಿರುವ ಜನಪರ ಕೆಲಸಗಳ ಬಗ್ಗೆ ಮಾತನಾಡಿದ್ದೇನೆ.
ವೇದಿಕೆಯ ಮೇಲೆ ಮಾತನಾಡಿರುವ ವಿಷಯಕ್ಕೆ ವೇದಿಕೆಯಲ್ಲೇ ಉತ್ತರ ನೀಡುವ ಅವಕಾಶ ಅವರಿಗಿತ್ತು. ಆದರೆ, ಕುಂಬಳ ಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡಂತೆ ವರ್ತಿಸಿದ್ದಾರೆ.
ಹೆಚ್ ಡಿ ಕುಮಾರಸ್ವಾಮಿ ಅವರು ರಾಮನಗರ ಜಿಲ್ಲೆಗಾಗಿ ಮಾಡಿರುವ ಕೆಲಸಗಳನ್ನು ನಾವು ಅಲ್ಲಗಳೆಯುತ್ತಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ಇದನ್ನು ಮೀರಿ ಕೃಷಿ, ಕೈಗಾರಿಕೆ, ಶಿಕ್ಷಣ, ಉದ್ಯೋಗಕ್ಕೆ ಸಂಬಂಧಿಸಿದಂತೆ ಮಹತ್ತರ ಬದಲಾವಣೆ ತಂದಿದ್ದೇವೆ ಎಂದು ತಿಳಿಸಿದ್ದಾರೆ.