“ಜನ ಪ್ರಾಣಕ್ಕಾಗಿ ಭಿಕ್ಷೆ ಬೇಡಿದ್ರೆ, ಕೇಂದ್ರ, ರಾಜ್ಯ ಅಧಿಕ್ಕಾಗಿ ಭಿಕ್ಷೆ ಬೇಡುತ್ತಿವೆ”
ಹಾಸನ : ಕೊರೊನಾ ಸಂದರ್ಭದಲ್ಲಿ ದೇಶದ ಜನ ಆಮ್ಲಜನಕಕ್ಕಾಗಿ, ಔಷಧಿಗಾಗಿ, ಪ್ರಾಣಕ್ಕಾಗಿ ಭಿಕ್ಷೆ ಬೇಡಿದರೆ, ರಾಜ್ಯ ಮತ್ತು ಕೇಂದ್ರ ಸರ್ಕಾರ ನಮಗೆ ಅಧಿಕಾರಕ್ಕಾಗಿ ಅವಕಾಶ ಕೊಡಿ ಎಂದು ಭಿಕ್ಷೆ ಬೇಡುತ್ತಿವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊರೊನಾ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ.
ಹಾಗಾಗಿ ನಾನು ಇಡೀ ರಾಜ್ಯದಲ್ಲಿ ಪ್ರವಾಸ ಮಾಡಿ ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡಲು ಹೊರಟಿದ್ದೇನೆ.
ನಾನು ಹಾಸನಕ್ಕೆ ರಾಜಕೀಯ ಮಾಡಲು ಬಂದಿಲ್ಲ. ಮಾನವೀಯತೆ ದೃಷ್ಟಿಯಿಂದ ಜನಪರ ಕೆಲಸ ಮಾಡಲು ಬಂದಿದ್ದೇನೆ ಎಂದು ತಿಳಿಸಿದರು.
ಹಾಸನದ ಸಾವಿರಾರು ರೈತರ ಪರವಾಗಿ ಕೆಲ ರೈತರು ನನಗೆ ಕರೆ ಮಾಡಿದ್ರು. ವಾರದಲ್ಲಿ 4 ದಿನ ಮಾರಾಟಕ್ಕೆ ಅವಕಾಶ ನೀಡಿದ್ದಾರೆ.
ನಾವು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ಸಾಧ್ಯವಾಗದೆ ಇವತ್ತು ಬೆಳೆಗಳು ಗೊಬ್ಬರವಾಗುತ್ತಿವೆ ಎಂಬ ಅಳಲನ್ನು ತೋಡಿಕೊಂಡ್ರು. ಹೀಗಾಗಿ ರೈತರಿಗೆ ನೀವು ಬೆಂಬಲ ಬೆಲೆ ಕೊಡುವುದು ಬೇಡ.
ರೈತರ ಬಗ್ಗೆ ಕಾಳಜಿ ಇದ್ರೆ ಅವರು ಬೆಳೆದ ಬೆಳೆಗಳನ್ನು ಸರ್ಕಾರವೇ ಖರೀದಿ ಮಾಡಿ ಎಷ್ಟಕ್ಕಾದರೂ ಮಾರಿಕೊಳ್ಳಲಿ. ಆದರೆ ಮಾರಿದ ನಂತರ ಅವರಿಗೆ ಅರ್ಧ ಹಣವನ್ನು ಪಾವತಿಸಿ ರೈತರ ರಕ್ಷಣೆಗೆ ಬರಬೇಕು ಎಂದು ಒತ್ತಾಯಿಸಿದರು.