ನವದೆಹಲಿ: ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರ ಹಂಚಿಕೆಯ ಬಿಕ್ಕಟ್ಟು ಮತ್ತು ಹೈಕಮಾಂಡ್ ನಾಯಕರ ನಡೆಯ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರ ಬೇಸರಗೊಂಡಂತೆ ಕಾಣುತ್ತಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಅವರು ನೀಡಿರುವ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ. ತಮಗೆ ಉಪ ಮುಖ್ಯಮಂತ್ರಿ ಹುದ್ದೆಗಿಂತಲೂ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಇರುವುದರಲ್ಲೇ ಹೆಚ್ಚು ಖುಷಿ ಇದೆ ಎಂದು ಹೇಳುವ ಮೂಲಕ, ತಮ್ಮ ಅಸಮಾಧಾನವನ್ನು ಪರೋಕ್ಷವಾಗಿ ಆದರೆ ಅತ್ಯಂತ ಸ್ಪಷ್ಟವಾಗಿ ಹೈಕಮಾಂಡ್ಗೆ ರವಾನಿಸಿದ್ದಾರೆ.
ದೆಹಲಿ ಪ್ರವಾಸದಲ್ಲಿರುವ ಡಿ.ಕೆ. ಶಿವಕುಮಾರ್ ಅವರು ಇಂದು ನಡೆಸಿದ ಸುದ್ದಿಗೋಷ್ಠಿಯಲ್ಲಿ, ಮೇಲ್ನೋಟಕ್ಕೆ ಹೈಕಮಾಂಡ್ ವಿರುದ್ಧ ಯಾವುದೇ ಬಹಿರಂಗ ಬಂಡಾಯ ಸಾರದೆ, ತಮ್ಮ ಎಂದಿನ ಶೈಲಿಯಲ್ಲಿಯೇ ಮಾರ್ಮಿಕವಾಗಿ ಅಸಮಾಧಾನ ಹೊರಹಾಕಿದ್ದಾರೆ. ಸದ್ಯದ ಬೆಳವಣಿಗೆಗಳನ್ನು ಗಮನಿಸಿದರೆ, ಹೈಕಮಾಂಡ್ ನಾಯಕರು ಸಿಎಂ ಸಿದ್ದರಾಮಯ್ಯ ಮತ್ತು ತಮಗೆ ಮುಕ್ತ ಅವಕಾಶ ನೀಡಿದ್ದಾರೆ ಎಂದು ಹೇಳುತ್ತಲೇ, ಒಳಗೆ ಕುದಿಯುತ್ತಿರುವ ಅಸಮಾಧಾನವನ್ನು ಹೊರಗೆಡಹಿದ್ದಾರೆ.
ಖಾಯಂ ಹುದ್ದೆ ಕಾರ್ಯಕರ್ತ ಮಾತ್ರ
ತಮ್ಮ ರಾಜಕೀಯ ಜೀವನದ ಬಗ್ಗೆ ಮಾತನಾಡಿದ ಡಿಕೆಶಿ, ನನಗೆ ಐದು ವರ್ಷವೂ ಉಪಮುಖ್ಯಮಂತ್ರಿಯಾಗಿರಬೇಕು ಎಂಬ ಹಂಬಲವೇನೂ ಇಲ್ಲ. 1980ರಿಂದಲೂ ನಾನು ಈ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದೇನೆ. ಅದುವೇ ನನ್ನ ಶಾಶ್ವತ ಹುದ್ದೆ. ಅಧಿಕಾರಗಳು ಬರುತ್ತವೆ, ಹೋಗುತ್ತವೆ. ಆದರೆ ಸಾಮಾನ್ಯ ಕಾರ್ಯಕರ್ತನಾಗಿ ಜನಸೇವೆ ಮಾಡುವುದು ನನಗೆ ಅಧಿಕಾರಕ್ಕಿಂತ ಹೆಚ್ಚು ತೃಪ್ತಿ ನೀಡುತ್ತದೆ ಎಂದು ಹೇಳುವ ಮೂಲಕ, ಅಧಿಕಾರ ಹಂಚಿಕೆಯ ಸೂತ್ರದ ಬಗ್ಗೆ ಹೈಕಮಾಂಡ್ ಮೌನವಹಿಸಿರುವುದಕ್ಕೆ ಟಾಂಗ್ ನೀಡಿದರು.
ಹೈಕಮಾಂಡ್ ಭೇಟಿಗೆ ನಿರಾಕರಣೆ?
ವಿಶೇಷವೆಂದರೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರು ದೆಹಲಿಯಲ್ಲೇ ಲಭ್ಯವಿದ್ದರೂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ನನ್ನ ಈ ಪ್ರವಾಸ ಕೇವಲ ಕೇಂದ್ರ ಸಚಿವರ ಭೇಟಿ ಮತ್ತು ರಾಜ್ಯದ ಅಭಿವೃದ್ಧಿ ಯೋಜನೆಗಳ ಚರ್ಚೆಗೆ ಸೀಮಿತವಾಗಿದೆ. ರಾಹುಲ್ ಗಾಂಧಿ ಈಗಷ್ಟೇ ವಿದೇಶ ಪ್ರವಾಸದಿಂದ ಬಂದಿದ್ದಾರೆ, ಅವರಿಗೆ ತೊಂದರೆ ಕೊಡಲು ಬಯಸುವುದಿಲ್ಲ. ಉಳಿದ ನಾಯಕರು ಲಭ್ಯವಿಲ್ಲ” ಎಂದು ಸಬೂಬು ನೀಡುವ ಮೂಲಕ, ವರಿಷ್ಠರ ಮೇಲಿನ ಮುನಿಸನ್ನು ಪ್ರದರ್ಶಿಸಿದರು.
ಒಪ್ಪಂದದ ಬಗ್ಗೆ ಮೌನ ಮತ್ತು ಕೆ.ಎನ್. ರಾಜಣ್ಣಗೆ ತಿರುಗೇಟು:
ಎರಡೂವರೆ ವರ್ಷಗಳ ಅಧಿಕಾರ ಹಂಚಿಕೆಯ ಒಪ್ಪಂದದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಡಿಕೆಶಿ, ಆಂತರಿಕ ಚರ್ಚೆಗಳನ್ನು ಬಹಿರಂಗಪಡಿಸುವುದಿಲ್ಲ, ಜನರಿಗೆ ನೀಡಿದ ಭರವಸೆ ಈಡೇರಿಸುವುದೇ ನಮ್ಮ ಆದ್ಯತೆ ಎಂದರು.
ಇದೇ ವೇಳೆ, ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರ ಹೇಳಿಕೆಗಳಿಗೆ ಡಿ.ಕೆ. ಶಿವಕುಮಾರ್ ಖಾರವಾಗಿ ಪ್ರತಿಕ್ರಿಯಿಸಿದರು. ಎಸ್.ಎಂ. ಕೃಷ್ಣ ಕಾಲದಲ್ಲಿ ಡಿಕೆಶಿಗೆ ಅವಕಾಶ ಸಿಕ್ಕಿತ್ತು ಎಂಬ ರಾಜಣ್ಣ ಅವರ ಹೇಳಿಕೆಗೆ ವ್ಯಂಗ್ಯವಾಗಿ ಉತ್ತರಿಸಿದ ಅವರು, “ಎಸ್.ಎಂ. ಕೃಷ್ಣ ಅವರು ಈಗ ನಮ್ಮೊಂದಿಗಿಲ್ಲ. ನಾವು ದೇವರ ಬಳಿ ಹೋಗಿ ಸತ್ಯವೇನೆಂದು ಅವರನ್ನೇ ಕೇಳಿಕೊಂಡು ಬರಬೇಕಷ್ಟೆ. ರಾಜಣ್ಣ ಹಿರಿಯರು, ನನಗೆ ಅನುಭವ ಕಡಿಮೆ, ಅವರಿಂದ ತರಬೇತಿ ಪಡೆಯುತ್ತೇನೆ” ಎಂದು ಚುಚ್ಚು ಮಾತುಗಳನ್ನಾಡಿದರು.
ರಾಹುಲ್ ಗಾಂಧಿ ನಾಯಕತ್ವಕ್ಕೆ ಸಂಪೂರ್ಣ ಬೆಂಬಲ
ಇದೇ ಸಂದರ್ಭದಲ್ಲಿ, ಪ್ರಿಯಾಂಕಾ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಬೇಕೆಂಬ ಚರ್ಚೆಗಳಿಗೆ ತೆರೆ ಎಳೆದ ಡಿ.ಕೆ. ಶಿವಕುಮಾರ್, ರಾಹುಲ್ ಗಾಂಧಿ ಅವರ ನಾಯಕತ್ವವನ್ನೇ ಬಲವಾಗಿ ಸಮರ್ಥಿಸಿಕೊಂಡರು. “ರಾಹುಲ್ ಗಾಂಧಿ ದೇಶದಾದ್ಯಂತ ಪಾದಯಾತ್ರೆ ಮಾಡಿ, ವಿರೋಧ ಪಕ್ಷದ ನಾಯಕರಾಗಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸ್ವತಃ ಪ್ರಿಯಾಂಕಾ ಗಾಂಧಿ ಅವರೇ ರಾಹುಲ್ ಗಾಂಧಿಯನ್ನು ಪ್ರಧಾನಿಯಾಗಿ ನೋಡಲು ಬಯಸುತ್ತಾರೆ. ಅನಗತ್ಯವಾಗಿ ಗೊಂದಲ ಸೃಷ್ಟಿಸುವುದು ಬೇಡ, ಪಕ್ಷದಲ್ಲಿ ಶಿಸ್ತು ಮುಖ್ಯ” ಎಂದು ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದರು.
ದೆಹಲಿಯಲ್ಲಿ ಡಿ.ಕೆ. ಶಿವಕುಮಾರ್ ಆಡಿರುವ ಮಾತುಗಳು, ರಾಜ್ಯ ಕಾಂಗ್ರೆಸ್ನಲ್ಲಿ “ಎಲ್ಲವೂ ಸರಿಯಿಲ್ಲ” ಎಂಬುದನ್ನು ಮತ್ತೆ ಸಾಬೀತುಪಡಿಸಿದ್ದು, ಮುಂಬರುವ ದಿನಗಳಲ್ಲಿ ಅಧಿಕಾರ ಹಂಚಿಕೆಯ ಬಿಕ್ಕಟ್ಟು ಮತ್ತಷ್ಟು ತೀವ್ರಗೊಳ್ಳುವ ಮುನ್ಸೂಚನೆ ನೀಡಿದೆ.








