ಕೊರೊನಾ ಬಗ್ಗೆ ಡಾ.ಗಿರಿಧರ ಕಜೆ ಅವರ ಮಾತು
ಬೆಂಗಳೂರು, ಜುಲೈ 9: ಕೊರೊನಾ ಎಂಬ ಮಹಾಮಾರಿಯಿಂದ ಮನುಕುಲಕ್ಕೆ ಕಂಗಾಲಾಗಿರುವ ಈ ಸಮಯದಲ್ಲಿ ವಿಶ್ವದ ಅತ್ಯಂತ ಪುರಾತನವಾದ ಆರೋಗ್ಯ ಸಂರಕ್ಷಣೆಯ ವ್ಯವಸ್ಥೆ ಆಯುರ್ವೇದದಿಂದ ಪರಿಹಾರ ಸಾಧ್ಯವೆಂದು ತೋರಿಸಿಕೊಟ್ಟವರು ಮೂಲತಃ ದಕ್ಷಿಣ ಕನ್ನಡದ ಪುತ್ತೂರು ಮೂಲದ, ಬೆಂಗಳೂರಿನ ಪ್ರಶಾಂತಿ ಆಯುರ್ವೇದಿಕ್ ಸೆಂಟರ್ ನ ಖ್ಯಾತ ಆಯುರ್ವೇದ ವೈದ್ಯ ಡಾ.ಗಿರಿಧರ ಕಜೆ ಮತ್ತು ತಂಡ.
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಜೂನ್ 7ರಿಂದ ಜೂನ್ 25ರ ನಡುವೆ ನಡೆಸಿದ ವೈದ್ಯಕೀಯ ಪ್ರಯೋಗದಲ್ಲಿ ಅವರು ಕೊರೋನಾ ಸೋಂಕಿತರಿಗೆ ನೀಡಿದ ಚಿಕಿತ್ಸೆ ಯಶಸ್ವಿಯಾಗಿದೆ. ರೋಗಲಕ್ಷಣಗಳಿಗೆ ಅನುಗುಣವಾಗಿ ಹತ್ತು ವಿಭಿನ್ನ ರೀತಿಯ ಕೊರೋನಾ ಸೋಂಕಿತರನ್ನು ಆಯ್ಕೆ ಮಾಡಿ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಅವರ ಮೇಲೆ ನಡೆಸಿದ್ದ ಪ್ರಯೋಗ ಯಶಸ್ವಿಯಾಗಿದ್ದು, ಆ ಹತ್ತೂ ಜನರು ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ.
ಡಾ.ಗಿರಿಧರ ಕಜೆ ಅವರು ಹೇಳುವ ಪ್ರಕಾರ ನಮ್ಮಲ್ಲಿ ರೋಗ ನಿರೋಧಕ ಶಕ್ತಿಯಿದ್ದರೆ ಹೊರಗಡೆಯಿಂದ ಬರುವ ವೈರಾಣುವನ್ನು ನಡೆಯಲು ಸಾಧ್ಯ. ಕೊರೊನಾ ವೈರಸ್ ಎಂಬುವುದು ಒಂದು ದುರ್ಬಲ ವೈರಸ್ ಆಗಿದ್ದು, ರೋಗ ನಿರೋಧಕ ಶಕ್ತಿ ಹೆಚ್ಚು ಇರುವವರನ್ನು ಅದು ಬಾಧಿಸಿಲ್ಲ. ಆದರೆ ಹೆಚ್ಚಿನ ಸಂಖ್ಯೆಯ ಜನರಿಗೆ ಸೋಂಕು ತಗುಲಿರುವ ಹಿನ್ನೆಲೆಯಿಂದ ಕೊರೊನಾ ಒಂದು ಭಯಾನಕ ಕಾಯಿಲೆ ಎಂಬ ಭೀತಿಗೆ ಕಾರಣವಾಗಿದೆ.
ಚಿಕನ್ ಗುನ್ಯಾ, ಡೆಂಗ್ಯೂ ನಂತಹ ಸಾಂಕ್ರಾಮಿಕ ರೋಗಗಳು ಆರೋಗ್ಯವಂತರಿಗೂ ತೊಂದರೆಯನ್ನು ನೀಡಿತ್ತು. ಡೆಂಗ್ಯೂನಿಂದಾಗಿ ಜನರು ಸಾವನ್ನಪ್ಪಿದ ಪ್ರಮಾಣದಲ್ಲೇ ಕೊರೋನಾದಿಂದಲೂ ಜನರು ಸಾವನ್ನಪ್ಪುತ್ತಿದ್ದಾರೆ. ಆದರೆ ಕೊರೊನಾಗೆ ಹರಡುವ ಶಕ್ತಿ ಜಾಸ್ತಿ ಇದೆ, ಪ್ರಾಣ ತೆಗೆಯುವ ಶಕ್ತಿ ಕಮ್ಮಿ ಎಂದು ಡಾ.ಗಿರಿಧರ ಕಜೆ ಹೇಳಿದ್ದಾರೆ.
ಕೊರೊನಾ ವೈರಸ್ ಹರಡುವುದನ್ನು ತಪ್ಪಿಸಲು ಸರಕಾರ ಸೂಚಿಸಿರುವ ಮಾರ್ಗಸೂಚಿಯಂತೆ ನಡೆದುಕೊಳ್ಳುವುದು ಮತ್ತು ಮಾನಸಿಕ ಸ್ಥೈರ್ಯ, ಧೈರ್ಯ ಹೆಚ್ಚಿಸಿಕೊಳ್ಳುವುದು ಮುಖ್ಯ ಎಂದಿರುವ ಡಾ.ಕಜೆ, ಈ ಮೊದಲೇ ನಾನು ಹೇಳಿದಂತೆ ಕೊರೊನಾ ಸೋಂಕಿನಿಂದ ದೂರವಿರಲು ಮುಂಜಾಗ್ರತಾ ಕ್ರಮವಾಗಿ,
1. ಕುದಿಯುವ ನೀರಿಗೆ 5-6 ತುಳಸಿ ಎಲೆಯನ್ನು ಹಾಕಿ ಕುಡಿಯುವುದು.
2. ಕುದಿಸಿದ ಹಾಲಿಗೆ ಒಂದು ಚಮಚ ಅರಶಿಣ ಹಾಕಿ ಮತ್ತೆ ಕುದಿಸಿ ಕುಡಿಯುವುದು.
3. ನೆಲನೆಲ್ಲಿ, ಭದ್ರಮುಷ್ಠಿ ಗೆಡ್ಡೆ ಅಥವಾ ಅಮೃತಬಳ್ಳಿ ಕಷಾಯವನ್ನು ಕುಡಿಯುವುದರಿಂದ ನಮ್ಮಲ್ಲಿನ ರೋಗ ನಿರೋಧಕ ಶಕ್ತಿಯನ್ನು ವೃದ್ದಿಸಿಕೊಳ್ಳಬಹುದು ಎಂದು ಹೇಳಿದರು.