ರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಅವರನ್ನ ಆಯ್ಕೆ ಮಾಡಿದ NDA
ದೇಶದ ಮುಂದಿನ ರಾಷ್ಟ್ರಪತಿ ಹುದ್ದೆಗೆ ಜಾರ್ಖಂಡ್ನ ಮಾಜಿ ರಾಜ್ಯಪಾಲ ದ್ರೌಪದಿ ಮುರ್ಮು ಅವರ ಹೆಸರನ್ನು ಎನ್ಡಿಎ ಅನುಮೋದಿಸಿದೆ. ಮಂಗಳವಾರ ಸಂಜೆ ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯ ನಂತರ ಅವರ ಹೆಸರನ್ನ ಅಧಿಕೃತಗೊಳಿಸಲಾಯಿತು. ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಪಕ್ಷದ ಎಲ್ಲಾ ಪ್ರಮುಖ ನಾಯಕರು ಉಪಸ್ಥಿತರಿದ್ದರು. ದ್ರೌಪದಿ ಮುರ್ಮು ಜೂನ್ 25 ರಂದು ನಾಮಪತ್ರ ಸಲ್ಲಿಸಲಿದ್ದಾರೆ.
ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ 20 ಹೆಸರುಗಳನ್ನು ಚರ್ಚಿಸಲಾಗಿದೆ ಎಂದು ಸಭೆಯ ನಂತರ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಹೇಳಿದರು. ಈ ಬಾರಿ ಪೂರ್ವ ಭಾರತದಿಂದ ದಲಿತ ಮಹಿಳೆಯನ್ನು ರಾಷ್ಟ್ರಪತಿ ಅಭ್ಯರ್ಥಿಗೆ ಆಯ್ಕೆ ಮಾಡಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಇದಾದ ನಂತರ ಮುರ್ಮು ಅವರ ಹೆಸರನ್ನು ಅಂಗೀಕರಿಸಲಾಯಿತು. ದ್ರೌಪದಿ ಮುರ್ಮು ಅವರನ್ನ ಅಭಿನಂದಿಸಿ ಮಾತನಾಡಿದ ಪ್ರಧಾನಿ ಮೋದಿ – ಅವರು ಶ್ರೇಷ್ಠ ರಾಷ್ಟ್ರಪತಿಯಾಗುತ್ತಾರೆ ಎಂದು ನನಗೆ ಖಾತ್ರಿಯಿದೆ ಎಂದು ಹೇಳಿದರು.
ದ್ರೌಪದಿ ಮುರ್ಮು
ಜಾರ್ಖಂಡ್ನ ಒಂಬತ್ತನೇ ಗವರ್ನರ್ ಆಗಿದ್ದ 64 ವರ್ಷದ ದ್ರೌಪದಿ ಮುರ್ಮು ಒಡಿಶಾದ ಮಯೂರ್ಭಂಜ್ನವರು. ಒಡಿಶಾದ ರೈರಂಗಪುರದಿಂದ ಶಾಸಕರಾಗಿದ್ದಾರೆ. ರಾಜ್ಯಪಾಲರಾಗಿ ನೇಮಕಗೊಂಡ ಮೊದಲ ಒಡಿಯಾ ನಾಯಕರಾಗಿದ್ದಾರೆ. ಇದಕ್ಕೂ ಮೊದಲು ಅವರು 2002 ರಿಂದ 2004 ರವರೆಗೆ ಬಿಜೆಪಿ-ಬಿಜೆಡಿ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದರು. ಮುರ್ಮು ಜಾರ್ಖಂಡ್ನ ಮೊದಲ ಬುಡಕಟ್ಟು ಮಹಿಳಾ ಗವರ್ನರ್ ಕೂಡ ಆಗಿದ್ದಾರೆ.
ಯಶವಂತ್ ಸಿನ್ಹಾ ಅವರನ್ನ ಅಭ್ಯರ್ಥಿಯನ್ನಾಗಿ ಮಾಡಿದ ವಿರೋಧ ಪಕ್ಷಗಳು
ಇನ್ನು ವಿರೋಧ ಪಕ್ಷಗಳು ಮಾಜಿ ಕೇಂದ್ರ ಸಚಿವ ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಯಶವಂತ್ ಸಿನ್ಹಾ ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ನಿರ್ಧರಿಸಿವೆ. ಸೋಷಿಯಲ್ ಮೀಡಿಯಾ ಪೋಸ್ಟ್ನಲ್ಲಿ, ಅವರು ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ಸಿದ್ಧ ಎಂದು ಸೂಚಿಸಿದ್ದಾರೆ. ನಾವು ಜೂನ್ 27 ರಂದು ಬೆಳಿಗ್ಗೆ 11.30 ಕ್ಕೆ ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಲಿದ್ದೇವೆ ಎಂದು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ನವದೆಹಲಿಯಲ್ಲಿ ಪ್ರತಿಪಕ್ಷಗಳ ಸಭೆಯಲ್ಲಿ ಹೇಳಿದರು.
ಜೂನ್ 15 ರಂದು ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಆರಂಭವಾಗಿದೆ. ನಾಮಪತ್ರ ಸಲ್ಲಿಸಲು ಜೂನ್ 29 ಕೊನೆಯ ದಿನವಾಗಿದೆ. ಜುಲೈ 18 ರಂದು ಚುನಾವಣೆ ನಡೆಯಲಿದ್ದು, ಜುಲೈ 21ರಂದು ಫಲಿತಾಂಶ ಹೊರಬೀಳಲಿದೆ.