ಮಾದಕ ವ್ಯಸನಿಗಳನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಬೇಕು : ರಾಮದಾಸ್
ನವದೆಹಲಿ : ಡ್ರಗ್ಸ್ ಸೇವಿಸುವವರನ್ನು ಜೈಲಿಗೆ ಕಳುಹಿಸುವ ವಿಚಾರವಾಗಿ ಕೇಂದ್ರ ಸಾಮಾಜಿಕ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ರಾಮದಾಸ್ ಅಠವಾಳೆ ಪ್ರತಿಕ್ರಿಯೆ ನೀಡಿದ್ದು, ಡ್ರಗ್ಸ್ ಸೇವಿಸುವವರನ್ನು ಜೈಲಿಗೆ ಕಳುಹಿಸುವ ಬದಲು ಪುನರ್ವಸತಿ ಕೇಂದ್ರಗಳಿಗೆ ಕಳುಹಿಸಬೇಕು. ಇದಕ್ಕಾಗಿ ಕಾನೂನಿನಲ್ಲಿ ಬದಲಾವಣೆ ತರಬೇಕು ಎಂದಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮದ್ಯ ಸೇವಿಸುವವರೇ ಜೈಲಿಗೆ ಹೋಗುವುದಿಲ್ಲ. ಆದರೆ ಮಾದಕ ವ್ಯಸನಿಗಳನ್ನು ಜೈಲಿಗೆ ಕಳುಹಿಸಲು ಕಾನೂನುಗಳಿವೆ.
ನಾವು ಮಾದಕ ವ್ಯಸನಿಗಳನ್ನು ಪುನರ್ವಸತಿ ಕೇಂದ್ರಗಳಿಗೆ ಕಳುಹಿಸಲು ಬಯಸುತ್ತೇವೆ, ಜೈಲುಗಳಿಗೆ ಅಲ್ಲ. ಇದಕ್ಕಾಗಿ ಕಾನೂನುಗಳನ್ನು ಬದಲಾಯಿಸಬೇಕಾಗಿದೆ ಎಂದಿದ್ದಾರೆ.
ಇದೇ ವೇಳೆ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಬಗ್ಗೆ ಮಾತನಾಡಿದ ಅವರು, ಹದಿಹರೆಯದಲ್ಲಿ ಡ್ರಗ್ಸ್ ಸೇವನೆ ಮಾಡುವುದು ಸೂಕ್ತವಲ್ಲ. ಆರ್ಯನ್ ಖಾನ್ಗೆ ಉಜ್ವಲ ಭವಿಷ್ಯವಿದೆ. ಆರ್ಯನ್ ಅವರನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸುವಂತೆ ನಾನು ಶಾರುಖ್ಗೆ ಸೂಚಿಸುತ್ತೇನೆ ಎಂದರು.