ವ್ಯಾಕ್ಸಿನ್ ಉತ್ಪಾದನೆ ಆಗದಿದ್ದರೆ ನಾವು ನೇಣು ಹಾಕಿಕೊಳ್ಳಬೇಕಾ : ಡಿವಿಎಸ್ ಅಸಹಾಯಕತೆ
ಬೆಂಗಳೂರು : ದೇಶದೆಲ್ಲೆಡೆ ಕೊರೊನಾ ಎರಡನೇ ಅಲೆಯ ತಾಂಡವ ಮುಂದುವರೆದಿದೆ. ಈ ಮಧ್ಯೆ ವ್ಯಾಕ್ಸಿನ್ ತೆಗೆದುಕೊಳ್ಳಿ ಎಂದು ಕೇಂದ್ರ ಸರ್ಕಾರ ಬೊಬ್ಬೆ ಹೊಡೆಯುತ್ತಿದೆ. ಆದ್ರೆ ಲಸಿಕಾ ಉತ್ಸವ ಮಾತ್ರ ಆಮೆಗರಿಯಲ್ಲಿ ಸಾಗಿದೆ. ಲಸಿಕಾ ಕೇಂದ್ರಗಳ ಬಳಿ ಜನರು ಸಾಲಿನಲ್ಲಿ ನಿಂತು ಸುಸ್ತಾದರೂ ಲಸಿಕೆ ಸಿಗುತ್ತಿಲ್ಲ.
ಈ ಮಧ್ಯೆ ವ್ಯಾಕ್ಸಿನ್ ಸಂಬಂಧಿಸಿದಂತೆ ಮಾತನಾಡುತ್ತಾ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ವ್ಯಾಕ್ಸಿನ್ ಒದಗಿಸಿ ಎಂದು ಕೋರ್ಟ್ ಹೇಳುತ್ತೆ. ಆದರೆ ಸಾಕಷ್ಟು ಪ್ರಮಾಣದಲ್ಲಿ ವ್ಯಾಕ್ಸಿನ್ ಪ್ರೊಡಕ್ಷನ್ ಆಗಲಿಲ್ಲವೆಂದ್ರೆ ನಾವೇನು ನೇಣುಹಾಕಿಕೊಳ್ಳಬೇಕಾ..? ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ವ್ಯಾಕ್ಸಿನ್ ಕೊರತೆ ವಿಚಾರವಾಗಿ ಹೈಕೋರ್ಟ್ ಚಾಟಿ ಬೀಸಿದ ವಿಚಾರವಾಗಿ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿವಿಎಸ್, ಕೇಂದ್ರಸರ್ಕಾರ ಎಲ್ಲಾ ಪ್ರಯತ್ನಗಳನ್ನು ಪ್ರಮಾಣಿಕವಾಗಿ ಮಾಡುತ್ತಿದೆ.
ಎಲ್ಲಾ ರಾಜ್ಯಗಳ ಜತೆ ನಿರಂತರ ಸಂಪರ್ಕ ಇಟ್ಟುಕೊಳ್ಳಲಾಗಿದೆ. ನಿರಂತರವಾಗಿ ಸಮಾಲೋಚನೆ ಮಾಡಿ ಮೋದಿ ಅವರು ಎಲ್ಲಾ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ.
ರಾಜ್ಯಕ್ಕೆ ವ್ಯಾಕ್ಸಿನ್ ಒದಗಿಸಿ ಎಂದು ಕೋರ್ಟ್ ಹೇಳುತ್ತೆ. ಆದರೆ ಸಾಕಷ್ಟು ಪ್ರಮಾಣದಲ್ಲಿ ವ್ಯಾಕ್ಸಿನ್ ಪ್ರೊಡಕ್ಷನ್ ಆಗಲಿಲ್ಲವೆಂದ್ರೆ ನಾವೇನು ನೇಣುಹಾಕಿಕೊಳ್ಳಬೇಕಾ ಎಂದು ಪ್ರಶ್ನಿಸಿದರು.
ಇದೇ ವೇಳೆ ವಿಪಕ್ಷಗಳ ವಿರುದ್ಧ ಕಿಡಿಕಾರಿದ ಅವರು, ವಿರೋಧ ಪಕ್ಷದವರಿಗೆ ನಾನು ಒಂದು ಮಾತು ಹೇಳಲು ಬಯಸುತ್ತೇನೆ. ಪ್ರತಿಭಟನೆ ಮಾಡುವುದರಿಂದ ಕೊರೋನಾ ಹೋಗುತ್ತೆ ಎಂದರೆ ಬೀದಿಯಲ್ಲಿ ಪ್ರತಿಭಟನೆ ಮಾಡಿ.
ನಮ್ಮ ಪ್ರಧಾನಿಗಳು ಯಾವುದೇ ಮೂಲೆಯಿಂದ ಒಂದೊಳ್ಳೆ ಸಲಹೆ ಬಂದರೂ ಸ್ವೀಕರಿಸಿ ಎಂದಿದ್ದಾರೆ. ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಅವರೇ ನೀವು ಹೀಗೆ ಪ್ರತಿಭಟನೆ ಮಾಡುವ ಬದಲು, ನಿಯೋಗ ಹೊತ್ತೊಯ್ದು ಸಿಎಂ ಹಾಗೂ ಆರೋಗ್ಯ ಸಚಿವರ ಜೊತೆ ಕುಳಿತು ಮಾತನಾಡಿ ಎಂದರು.