ಪಂಚ ರಾಜ್ಯ ಫಲಿತಾಂಶ : ಜನರ ವಿಶ್ವಾಸ ಗಳಿಸುವಲ್ಲಿ ಬಿಜೆಪಿ ವಿಫಲ
ಬೆಂಗಳೂರು : ಇಂದು ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಜನರ ವಿಶ್ವಾಸ ಗಳಿಸುವಲ್ಲಿ ಬಿಜೆಪಿ ವಿಫಲವಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೊದಲು ಮಸ್ಕಿಯಲ್ಲಿ ಗೆದ್ದ ಕಾಂಗ್ರೆಸ್ ಅಭ್ಯರ್ಥಿ, ಮಮತಾ ಬ್ಯಾನರ್ಜಿ, ಸ್ಟಾಲಿನ್ ಅವರಿಗೆ ಅಭಿನಂದನೆ ಸಲ್ಲಿಸಿದ್ರು.
ಬಳಿಕ ಮಾತು ಮುಂದುವರೆಸಿ, ಜನರ ತೀರ್ಪು ಏನೇ ಇದ್ದರೂ ಒಪ್ಪಬೇಕು. ಆದರೆ ಜನರ ವಿಶ್ವಾಸ ಗಳಿಸುವಲ್ಲಿ ಬಿಜೆಪಿ ವಿಫಲವಾಗಿದೆ. ಪಶ್ಚಿಮ ಬಂಗಾಳ ಜನ ಬಿಜೆಪಿ ಕುತಂತ್ರ ಧಿಕ್ಕರಿಸಿ ಮಮತಾ ಬ್ಯಾನರ್ಜಿಗೆ ಮೂರನೇ ಬಾರಿ ಆಶೀರ್ವಾದ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಷಾ ಹೆಣ್ಣುಮಗಳ ವಿರುದ್ಧ ಗೆಲ್ಲಲು ಹೋರಾಡಿದ್ದರು. ಸುವೇಂದು ಮುಖರ್ಜಿ ಅವರ ವಿರುದ್ಧ ಸೆಡ್ಡು ಹೊಡೆದು ನಂದಿಗ್ರಾಮಕ್ಕೆ ತೆರಳಿ ಸೆಣೆಸಿದ್ದ ಅವರು ಇಂದು ಗೆದ್ದಿದ್ದಾರೆ. ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನ ಗೆದ್ದಿದ್ದಾರೆ. ಅಲ್ಲಿನ ಮತದಾರರನ್ನು ಅಭಿನಂದಿಸುತ್ತೇನೆ ಎಂದರು.
ಇನ್ನು ಕಾಂಗ್ರೆಸ್ ಗೆ ಹಿನ್ನಡೆ ಆಗಿದೆ. ಕೇರಳದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂದು ನಿರೀಕ್ಷಿಸಿದ್ದೆವು. ನಮಗಾದ ಹಿನ್ನಡೆ ಒಪ್ಪಬೇಕಿದೆ. ಆದ್ರೆ ತಮಿಳುನಾಡಿನಲ್ಲಿ ನಾವು ಡಿಎಂಕೆ ಜತೆ ಸ್ಥಾನ ಹೊಂದಾಣಿಕೆ ಮಾಡಿಕೊಂಡಿದ್ದೆವು. ನಾವು ಲೀಡಲ್ಲಿದ್ದೇವೆ. ಡಿಎಂಕೆ ಅಧಿಕಾರಕ್ಕೆ ಬರಲಿದೆ. ಸ್ಟ್ಯಾಲಿನ್ ಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಬಿಜೆಪಿ ಕೇರಳ, ತಮಿಳುನಾಡಿನಲ್ಲಿ ಖಾತೆ ತೆರೆದಿಲ್ಲ. ಸಂಪೂರ್ಣ ಶೂನ್ಯ ಗಳಿಕೆ ಆಗಿದೆ. ದಕ್ಷಿಣ ಭಾರತದ ರಾಜ್ಯದಲ್ಲಿ ಕೋಮುವಾದಿ ಪಕ್ಷ ಬೆಳೆಯಲು ಅವಕಾಶ ನೀಡಿಲ್ಲ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.