ಪಾಟ್ನ: ಕನ್ವರ್ ಯಾತ್ರೆ (Kanwar Yatra) ಸಂದರ್ಭದಲ್ಲಿ ಡಿಜೆ ವಾಹನಕ್ಕೆ (DJ Vehicle) ವಿದ್ಯುತ್ ತಂತಿ ಸ್ಪರ್ಶಿಸಿದ ಪರಿಣಾಮ ಕರೆಂಟ್ ಶಾಕ್ (Electrocuted) ಹೊಡೆದು 9 ಜನ ಕನ್ವರ್ ಯಾತ್ರಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆ ಬಿಹಾರದ (Bihar) ವೈಶಾಲಿಯಲ್ಲಿ ನಡೆದಿದೆ. ಅಲ್ಲದೇ, ಘಟನೆಯಲ್ಲಿ 10ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಸುಲ್ತಾನ್ಪುರ ಗ್ರಾಮದ ಯುವಕರನ್ನು ಒಳಗೊಂಡ ತಂಡವು ಸೋನ್ಪುರ ಬಾಬಾ ಹರಿಹರನಾಥದಲ್ಲಿ ‘ಜಲಾಭಿಷೇಕ’ ಮಾಡಲು ಗಂಗಾಜಲವನ್ನು ಹೊತ್ತು ಸರನ್ ನ ಪಹೇಲಜಾ ಘಾಟ್ಗೆ ತೆರಳುತ್ತಿತ್ತು. ಈ ಸಂದರ್ಭದಲ್ಲಿ ಡಿಜೆ ಹಾಡುಗಳೊಂದಿಗೆ ಮೆರವಣಿಗೆ ನಡೆಯುತ್ತಿತ್ತು. ಆಗ ಡಿಜೆ ಟ್ರಾಲಿಗೆ ಹೈಟೆನ್ಷನ್ ತಂತಿ ತಲುಗುಲಿದೆ.
ವಾಹನದಲ್ಲಿ ಕನ್ವರಿಯಾಗಳು ಅಥವಾ ಶಿವಭಕ್ತರು ತೆರಳುತ್ತಿದ್ದರು. ವಾಹನ ತುಂಬಾ ಎತ್ತರವಾಗಿದ್ದರಿಂದ ಹೈಟೆನ್ಷನ್ ತಂತಿಗೆ ಸಿಕ್ಕಿಹಾಕಿಕೊಂಡು ಘಟನೆ ಸಂಭವಿಸಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹಾಜಿಪುರ ಉಪವಿಭಾಗೀಯ ಪೊಲೀಸ್ ಅಧಿಕಾರಿ ಓಂ ಪ್ರಕಾಶ್ ಹೇಳಿದ್ದಾರೆ.
ಗಾಯಗೊಂಡವರ ಪೈಕಿ ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಅವರೆಲ್ಲ ಹಾಜಿಪುರದ ಸದರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಕನ್ವಾರಿಯಾಗಳು ಅಥವಾ ಶಿವಭಕ್ತರು ಶ್ರಾವಣ ಮಾಸದಲ್ಲಿ ದೇವರಿಗೆ ಅರ್ಪಿಸಲು ತಮ್ಮ ಊರಿನಿಂದ ಗಂಗಾಜಲವನ್ನು ತೆಗೆದುಕೊಂಡು ಹೋಗುತ್ತಾರೆ. ಕನ್ವರ್ ಯಾತ್ರೆಯು ಪ್ರತಿ ವರ್ಷ ನಡೆಯುವ ಅತಿ ದೊಡ್ಡ ಧಾರ್ಮಿಕ ಯಾತ್ರೆಗಳಲ್ಲಿ ಒಂದಾಗಿದೆ