ಐಪಿಎಲ್ ಫೈನಲ್ ಪಂದ್ಯ ಮಳೆಯಿಂದಾಗಿ ಸೋಮವಾರಕ್ಕೆ ಮುಂದೂಡಿಕೆಯಾಗಿದ್ದು, ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳು ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದರು. ಆದರೆ, ಮಳೆಯಿಂದಾಗಿ ಪಂದ್ಯ ರದ್ದಾಗಿತ್ತು. ಹೀಗಾಗಿ ತಮಿಳುನಾಡಿನಿಂದ ಬಂದಿದ್ದ ಸಿಎಸ್ ಕೆ ಫ್ಯಾನ್ಸ್ ರೈಲ್ವೆ ನಿಲ್ದಾಣದಲ್ಲಿಯೇ ರಾತ್ರಿ ಕಳೆದಿರುವ ವಿಡಿಯೋ ವೈರಲ್ ಆಗಿದೆ.
ಸತತ ಮಳೆ ಸುರಿದ ಹಿನ್ನೆಲೆಯಲ್ಲಿ ಒಂದೇ ಒಂದು ಎಸೆತವಿಲ್ಲದೇ ಫೈನಲ್ ಪಂದ್ಯವನ್ನು ಮೀಸಲು ದಿನವಾಗಿರುವ ಸೋಮವಾರಕ್ಕೆ ಮುಂದೂಡಲಾಗಿದೆ. ಗುಜರಾತ್ ಮತ್ತು ಚೆನ್ನೈ ತಂಡಗಳ ಅಭಿಮಾನಿಗಳು ನಿರಾಸೆಯಿಂದಲೇ ಕ್ರೀಡಾಂಗಣದಿಂದ ಮನೆಗಳಿಗೆ ತೆರಳಬೇಕಾಗಿತ್ತು. ಆದರೆ, ಚೆನ್ನೈನ ಕೆಲ ಅಭಿಮಾನಿಗಳು ನಿಜಕ್ಕೂ ತೊಂದರೆ ಅನುಭವಿಸಿದ್ದಾರೆ. ಪಂದ್ಯ ನೋಡಲು ಬಂದಿರುವ ಜನರು ಉಳಿದುಕೊಳ್ಳಲು ವ್ಯವಸ್ಥೆ ಇಲ್ಲದೇ ರೈಲ್ವೆ ನಿಲ್ದಾಣದ ಬಯಲಿನಲ್ಲಿಯೇ ಮಲಗಿರುವುದು ಕಂಡು ಬಂದಿದೆ.
ಚೆನೈ ಸೂಪರ್ ಕಿಂಗ್ಸ್ ಅಭಿಮಾನಿಗಳು ನೆಲದ ಮೇಲೆ ಹೊದಿಕೆಯಿಲ್ಲದೇ ಮಲಗಿರುವ ವಿಡಿಯೋ ಹಾಗೂ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಬಿಸಿಸಿಐ ಮೀಸಲು ದಿನದಂದು ಅದೇ ಟಿಕೆಟ್ ಗಳನ್ನು ಬಳಸಲು ಅಭಿಮಾನಿಗಳಿಗೆ ಅವಕಾಶ ನೀಡಿದೆ. ಹೀಗಾಗಿ ಫೈನಲ್ ಪಂದ್ಯವನ್ನು ನೋಡಲೇಬೇಕೆಂಬ ಹಠದಿಂದ ಫ್ಯಾನ್ಸ್ ಮರಳಿ ಮನೆಗೆ ಹೋಗದೆ ಅಲ್ಲಿಯೇ ಉಳಿದುಕೊಂಡಿದ್ದಾರೆ.
ಸಿಎಸ್ ಕೆ ಜರ್ಸಿಯನ್ನು ಧರಿಸಿರುವ ಅಭಿಮಾನಿಗಳು ರೈಲ್ವೆ ನಿಲ್ದಾಣದ ನೆಲ ಹಾಸಿನ ಮೇಲೆ ಮಲಗಿರುವುದನ್ನು ನೆಟ್ಟಿಗರು ಹಂಚಿಕೊಂಡಿದ್ದಾರೆ. ಧೋನಿಗೆ ಇದು ಕೊನೆಯ ಪಂದ್ಯ ಮತ್ತು ಐಪಿಎಲ್ ಎಂದೇ ಹೇಳಲಾಗಿದೆ. ಹೀಗಾಗಿ ತಮ್ಮ ನೆಚ್ಚಿನ ನಾಯಕನಿಗೆ ಅದ್ದೂರಿ ಬೀಳ್ಕೊಡುಗೆ ನೀಡುವುದಕ್ಕಾಗಿ ಫ್ಯಾನ್ಸ್ ಮಳೆ, ಚಳಿಯನ್ನು ಲೆಕ್ಕಿಸದೇ ರಾತ್ರಿ ಕಳೆದಿದ್ದಾರೆ.