ದೇಶದಲ್ಲಿ ಉದ್ಯೋಗ ಕಡಿತವಾಗಿದೆ ಎಂಬುದು ಕಲ್ಪಿತ ಆರೋಪ : ಬಿಜೆಪಿ BJP saaksha tv
ಬೆಂಗಳೂರು : ಇಟಲಿ ಮೂಲ ನಿರ್ದೇಶಿತ ಕಾಂಗ್ರೆಸ್ ಆಡಳಿತ ನೋಡಿದ್ದ ಖರ್ಗೆಗೆ ಹಿಟ್ಲರ್ ಆಡಳಿತದ ನೆನಪಾಗಿದೆ. ದೇಶದಲ್ಲಿ ಉದ್ಯೋಗ ಕಡಿತವಾಗಿದೆ ಎಂಬುದು ಕಲ್ಪಿತ ಆರೋಪ ಎಂದು ರಾಜ್ಯ ಬಿಜೆಪಿ ಘಟಕ ಆರೋಪಿಸಿದೆ.
ಬಿಜೆಪಿಯವರಂತೆ ಹಣ ನೀಡಿ ಮತ ಕೇಳಲ್ಲ ಎಂಬ ಸಿದ್ದರಾಮಯ್ಯ ಟ್ವೀಟ್ ಗೆ ಟಾಂಗ್ ನೀಡಿರುವ ಬಿಜೆಪಿ ಘಟಕ.. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮಾಡಿದ ಕೆಲಸಕ್ಕೆ ಕೂಲಿ ರೂಪದಲ್ಲಿ ಮತ ಕೊಡಿ ಎಂದು ಸಿದ್ದರಾಮಯ್ಯ ಪ್ರಸ್ತಾಪಿಸಿದ್ದಾರೆ. ಸಿದ್ದರಾಮಯ್ಯನವರೇ, ಉತ್ತರ ಕರ್ನಾಟಕದ ಜನತೆಯ ಮುಂದೆ ಎಷ್ಟು ಬಾರಿ ಸುಳ್ಳು ಹೇಳುತ್ತೀರಿ? ಕೆಲಸ ಮಾಡಿದ್ದರೆ ಕಾಂಗ್ರೆಸ್ ಪಕ್ಷವನ್ನು ಜನತೆ ಮನೆಗೇಕೆ ಕಳುಹಿಸುತ್ತಿದ್ದರು?
ನುಡಿದಂತೆ ನಡೆದಿದ್ದೇವೆ ಎನ್ನುವ ಕಾಂಗ್ರೆಸಿಗರೇ ಈ ಪ್ರಶ್ನೆಗಳಿಗೆ ಉತ್ತರಿಸಿ. ಕೃಷ್ಣಾ ಮೇಲ್ದಂಡೆ ಯೋಜನೆಗೆ ನಿಮ್ಮ ಕಾಲದಲ್ಲಿ ಎಷ್ಟು ಹಣ ನೀಡಿದ್ದೀರಿ? ಕೃಷ್ಣೆಗೆ ವಾರ್ಷಿಕ 10 ಸಾವಿರ ಕೋಟಿ ಅನುದಾನ ಕೊಡುತ್ತೇವೆ ಎಂಬ ಮಾತನ್ನು ಈಡೇರಿಸಿದ್ದೀರಾ?
ನುಡಿದಂತೆ ನಡೆದಿದ್ದೇವೆ ಎನ್ನುವ ಕಾಂಗ್ರೆಸ್ ಈ ಪ್ರಶ್ನೆಗಳಿಗೆ ಉತ್ತರಿಸಿ. ನಿಮ್ಮ ಆಡಳಿತದಲ್ಲಿ ಪ್ರಾದೇಶಿಕ ಅಸಮಾನತೆ ನಿವಾರಣೆ ಏಕಾಗಲಿಲ್ಲ? ಉತ್ತರ ಕರ್ನಾಟಕಕ್ಕೆ ಸರ್ಕಾರಿ ಕಚೇರಿ ವರ್ಗಾವಣೆ ಪ್ರಸ್ತಾಪ ಈಡೇರಲಿಲ್ಲವೇಕೆ? ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ನೀಡಿದ ಆಶ್ವಾಸನೆಗಳೆಷ್ಟು, ಅವುಗಳ ಪೈಕಿ ಈಡೇರಿದ್ದೆಷ್ಟು? ನುಡಿದಂತೆ ನಡೆದಿದ್ದೇವೆ ಎಂಬುದೇ ಕಾಂಗ್ರೆಸ್ ಸೃಷ್ಟಿಸಿದ ದೊಡ್ಡ ಸುಳ್ಳು.
ಇಟಲಿ ಮೂಲ ನಿರ್ದೇಶಿತ ಕಾಂಗ್ರೆಸ್ ಆಡಳಿತ ನೋಡಿದ್ದ ಖರ್ಗೆಗೆ ಹಿಟ್ಲರ್ ಆಡಳಿತದ ನೆನಪಾಗಿದೆ. ದೇಶದಲ್ಲಿ ಉದ್ಯೋಗ ಕಡಿತವಾಗಿದೆ ಎಂಬುದು ಕಲ್ಪಿತ ಆರೋಪ. ನಿಜವಾಗಿಯೂ ಉದ್ಯೋಗ ಕಳೆದುಕೊಂಡಿದ್ದು ಕಾಂಗ್ರೆಸಿಗರು. ಅಮೇಥಿ ಹಾಗೂ ಕಲಬುರ್ಗಿಯಲ್ಲಿ ಸೋತವರು ನಿರುದ್ಯೋಗಿಗಳಿಗೆ ಅತ್ಯುತ್ತಮ ಉದಾಹರಣೆಯಾಗಿದ್ದಾರೆ.
ಸುಳ್ಳು, ಸುಳ್ಳು, ಸುಳ್ಳು ರಾಜ್ಯಸಭೆಯ ವಿಪಕ್ಷ ನಾಯಕರಾಗಿ ಮಲ್ಲಿಕಾರ್ಜುನ ಖರ್ಗೆ ಅವರು ದಾಖಲೆ ಸಮೇತ ಮಾತನಾಡುವುದನ್ನು ಮೊದಲು ಅಭ್ಯಾಸ ಮಾಡಿಕೊಳ್ಳಬೇಕು. ರಸಗೊಬ್ಬರ ಕೊರತೆಯಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿ ರೈತರಲ್ಲಿ ಗೊಂದಲ ಮೂಡಿಸಬೇಡಿ. ಸುಳ್ಳು ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖ ಎಂದು ಟ್ವೀಟ್ ಮಾಡಿದೆ.