ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಬಜೆಟ್ ಮೇಲಿನ ಚರ್ಚೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi), ಸಿಎಂ ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ.
ಹಲ್ವಾ ಕಾರ್ಯಕ್ರಮದ ಫೋಟೋದಲ್ಲಿ ಎಸ್ಸಿ-ಎಸ್ಟಿ-ಒಬಿಸಿ ಅಧಿಕಾರಿಗಳೇ (SC, ST, OBC Officers) ಇರಲಿಲ್ಲ ಎಂಬ ವಿಪಕ್ಷ ನಾಯಕ ರಾಹುಲ್ ಟೀಕೆಗೆ ತಲೆ ಚಚ್ಚಿಕೊಂಡ ಬಗ್ಗೆ ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ. ಒಬಿಸಿ ಸಮುದಾಯದ ಚಾಯ್ವಾಲಾ ಪ್ರಧಾನಿ ಆಗಿರೋದೇ ವಿಪಕ್ಷಗಳಿಗೆ ಸಮಸ್ಯೆಯಾಗಿದೆ. ಕೇಂದ್ರ ಬಜೆಟ್ ಸಿದ್ದತೆ ವೇಳೆ ನಡೆಯುವ ಹಲ್ವಾ ಕಾರ್ಯಕ್ರಮವನ್ನೂ ನೀವು ಇಷ್ಟು ಹಗುರವಾಗಿ ತೆಗೆದುಕೊಂಡ್ರೆಲ್ಲಾ ಎಂದು ನನಗೆ ನಗು ಬಂತು ಎಂದು ಕುಟುಕಿದ್ದಾರೆ.
ಕರ್ನಾಟಕದ ಕುರಿತು ಬಜೆಟ್ನಲ್ಲಿ ಉಲ್ಲೇಖವೇ ಇಲ್ಲ ಎಂದ ಸಿಎಂ ಸಿದ್ದರಾಮಯ್ಯ (Siddaramaiah) ಟೀಕೆಗೆ ಪ್ರತಿಕ್ರಿಯೆ ನೀಡಿದ ಅವರು, ಯಾವುದೇ ರಾಜ್ಯಕ್ಕೂ ಅನುದಾನ ನೀಡಲು ಕೇಂದ್ರ ಸರ್ಕಾರ ನಿರಾಕರಣೆ ಮಾಡಿಲ್ಲ. ಯುಪಿಎ ಸರ್ಕಾರದ (UPA Governmement) ಅವಧಿಯಲ್ಲಿ ಮಂಡನೆ ಮಾಡಲಾಗುತ್ತಿದ್ದ ಬಜೆಟ್ಗಳಲ್ಲಿ ಎಲ್ಲ ರಾಜ್ಯಗಳ ಹೆಸರನ್ನೂ ಹೇಳುತ್ತಿದ್ರಾ? ನಾನು ಸಹ ಯುಪಿಎ ಅವಧಿಯ ಬಜೆಟ್ಗಳನ್ನ ನೋಡಿದ್ದೇನೆ. 2004-05ರ ಬಜೆಟ್ನಲ್ಲಿ 17 ರಾಜ್ಯಗಳನ್ನು ಹೆಸರಿಸಿಲ್ಲ, 2006-07ರ ಬಜೆಟ್ನಲ್ಲಿ 16 ರಾಜ್ಯಗಳನ್ನ ಹೆಸರಿಸಿಲ್ಲ. 2009ರ ಬಜೆಟ್ ಭಾಷಣದಲ್ಲಿ 26 ರಾಜ್ಯಗಳನ್ನ ಹೆಸರಿಸಿಲ್ಲ. ಹಾಗೆಂದ ಮಾತ್ರಕ್ಕೆ ಆ ರಾಜ್ಯಗಳಿಗೆ ಅನುದಾನ ಸಿಕ್ಕಿರಲಿಲ್ಲವೇ? ಎಂದು ಪ್ರಶ್ನಿಸಿ ಗುಡುಗಿದ್ದಾರೆ.
ರಾಜ್ಯದ ವಾಲ್ಮೀಕಿ, ಮುಡಾ ಹಗರಣಗಳನ್ನ ಪ್ರಸ್ತಾಪಿಸಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು. ಗ್ಯಾರಂಟಿಗಳಿಗೆ ಎಸ್ಸಿ-ಎಸ್ಟಿ ಹಣ ದುರ್ಬಳಕೆ, ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.








