ರಾಜ್ಯದಲ್ಲಿ ಹಣಕಾಸು ಸ್ಥಿತಿ ಹದಗೆಟ್ಟಿದೆ : ಸಿಎಂ ಬಿಎಸ್ ವೈ
ಹಾಸನ : ರಾಜ್ಯದಲ್ಲಿ ಹಣಕಾಸು ಸ್ಥಿತಿ ಹದಗೆಟ್ಟಿದೆ, ಆದರೂ ಬಡವರ ಅನುಕೂಲಕ್ಕೆ ಪ್ಯಾಕೇಜ್ ಘೋಷಣೆ ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಹಾಸನಕ್ಕೆ ಭೇಟಿ ನೀಡಿದ್ದು, ಬೂವನಹಳ್ಳಿ ಹೆಲಿಪ್ಯಾಡ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿ ಕೋವಿಡ್ ಪರಿಸ್ಥಿತಿ ಸಭೆ ನಡೆಸುತ್ತೇವೆ. ಇಂದು ಹಾಸನಕ್ಕೆ ಬಂದಿದ್ದೇನೆ. ಹಾಸನ ಜಿಲ್ಲೆ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಕೋವಿಡ್ ಹೆಚ್ಚಿದೆ ಎಂದರು.
ಇದೇ ವೇಳೆ ಹೆಚ್ ಡಿ ರೇವಣ್ಣ ಅವರ “ಕೊರೊನಾದಿಂದ ಜನ ಸಾವಿಗೀಡಾಗುತ್ತಿರುವುದಕ್ಕೆ ಸರ್ಕಾರವೇ ಕಾರಣ ಎಂಬ ಹೇಳಿಕೆಗೆ ಗರಂ ಆದ ಬಿಎಸ್ ವೈ, ಜವಾಬ್ದಾರಿಯುತ ಶಾಸಕರಾಗಿ ಬೇಜವಾಬ್ದಾರಿ ಹೇಳಿಕೆ ನೀಡಬಾರದು.
ಅವರೂ ಕೂಡ ಶಾಸಕರಾಗಿ ಕೆಲಸ ನಿರ್ವಹಿಸಬೇಕಿದೆ. ಅವರ ಕೆಲಸ ನಿರ್ವಹಿಸದೆ ಬೇರೆಯವರ ಬಗ್ಗೆ ಬೊಟ್ಟು ತೋರಿಸಬಾರದು ಎಂದು ಕಿಡಿಕಾರಿದರು.
ಇನ್ನು ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಬಗ್ಗೆ ಯಾವುದೇ ಅನಾಹುತ ಆಗದಂತೆ ಸಿದ್ಧತೆ ಮಾಡುತ್ತಿದ್ದೇವೆ. ನಾವು ಕೋವಿಡ್ ಸುಳ್ಳು ಲೆಕ್ಕ ಕೊಡುತ್ತಿಲ್ಲ. ಅದರಿಂದ ನಮಗೇನು ಲಾಭ ಎಂದು ವಿಪಕ್ಷಗಳ ಆರೋಪಕ್ಕೆ ಟಾಂಗ್ ನೀಡಿದರು.