ಉತ್ತರಾಖಂಡದಲ್ಲಿ ಕಾಡ್ಗಿಚ್ಚು : ನಾಲ್ವರು ಸಾವು, 1,290 ಹೆಕ್ಟೇರ್ ಕಾಡು ನಾಶ
ಡೆಹ್ರಾಡೂನ್ : ಉತ್ತರಖಂಡದ ನೈನಿತಾಲ್, ಅಲ್ಮೋರಾ, ತೆಹ್ರಿ ಮತ್ತು ಪೌರಿ ಜಿಲ್ಲೆಗಳ ಅರಣ್ಯ ಪ್ರದೇಶಗಳಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದೆ.
ಪರಿಣಾಮ ಕಳೆದ 24 ಗಂಟೆಗಳಲ್ಲಿ ನಾಲ್ವರು ವ್ಯಕ್ತಿಗಳು ಹಾಗೂ 7 ಪ್ರಾಣಿಗಳು ಮೃತಪಟ್ಟಿರುವುದು ವರದಿಯಾಗಿದೆ. ಕಾಡ್ಗಿಚ್ಚಿನಿಂದಾಗಿ 1,290 ಹೆಕ್ಟೇರ್ಗಿಂತಲೂ ಹೆಚ್ಚು ಕಾಡು ನಾಶವಾಗಿದೆ.
ಸದ್ಯ ಬೆಂಕಿಯನ್ನ ನಂದಿಸುವ ಕಾರ್ಯ ಬಿರುಸಿನಿಂದ ಸಾಗಿದೆ.
ರಾಜ್ಯ ಅರಣ್ಯ ಇಲಾಖೆಯ 12,000 ಸಿಬ್ಬಂದಿ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸೇರಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಈವರೆಗೆ 37 ಲಕ್ಷ ರೂ. ಮೌಲ್ಯದ ಆಸ್ತಿ-ಪಾಸ್ತಿ ಕೂಡ ನಾಶವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಿನ್ನೆಯಿಂದಲೂ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದ್ದರೂ ಯಾವುದೇ ಪ್ರಯೋಜನೆ ಆಗದ ಕಾರಣ ರಾಜ್ಯ ಸರ್ಕಾರ ಬೆಂಕಿ ನಂದಿಸಲು ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಗಳನ್ನು ಕಳುಹಿಸುವಂತೆ ಕೇಂದ್ರ ರಕ್ಷಣಾ ಇಲಾಖೆಗೆ ಪತ್ರ ಬರೆದಿದೆ.
ಅಂದಹಾಗೆ ಕಳೆದ ವರ್ಷ ಕೂಡ ಉತ್ತರಾಖಂಡದಲ್ಲಿ ಕಾಡ್ಗಿಚ್ಚು ಸಂಭವಿಸಿತ್ತು. ಆಗ 172 ಹೆಕ್ಟೇರ್ ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿತ್ತು.