ಆತ್ಮಹತ್ಯೆ ಮಾಡಿಕೊಂಡ ಮಾಜಿ ಶಾಸಕನ ಪುತ್ರಿ
ತೆಲಂಗಾಣ: ಮಾಜಿ ಶಾಸಕನ ಪುತ್ರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಬೂರ್ಗಂಪಾಡು ತಾಲೂಕಿನ ಸಾರಾಪಾಕದಲ್ಲಿ ನಡೆದಿದೆ.
ವೈದ್ಯೆ ಟಿ. ಮಹಾಲಕ್ಷ್ಮಿ(25) ತೆಲಂಗಾಣದ ಅಶ್ವರಾವ್ಪೇಟೆ ಮಾಜಿ ಶಾಸಕ ತಾಟಿ ವೆಂಕಟೇಶ್ವರಲು ಅವರ ಪುತ್ರಿ. ಮಹಾಲಕ್ಷ್ಮಿ ತಮ್ಮ ನಿವಾಸದಲ್ಲಿ ಇಂದು (ಗುರುವಾರ) ಮುಂಜಾನೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗಳ ಸಾವಿನ ಸುದ್ದಿ ತಿಳಿದ ಕೂಡಲೇ ದಮ್ಮಪೇಟದ ಮನೆಯಲ್ಲಿದ್ದ ಮಾಜಿ ಶಾಸಕ ವೆಂಕಟೇಶ್ವರ್ಲು ಸಾರಪಾಕ ಗ್ರಾಮಕ್ಕೆ ಮನೆಗೆ ದೌಡಾಯಿಸಿದ್ದಾರೆ. ಮಗಳ ಶವವನ್ನು ಕಂಡು ಅವರ ರೋದನೆ ಹೇಳತೀರದಂತಾಗಿದೆ.
ಇತ್ತೀಚೆಗಷ್ಟೇ ಮಹಾಲಕ್ಷ್ಮಿ ಎಂಬಿಬಿಎಸ್ನ್ನು ಪೂರ್ಣಗೊಳಿಸಿ ಸ್ನಾತಕೋತ್ತರ ಪದವಿಯ ಪ್ರವೇಶ ಪರೀಕ್ಷೆಗೆ ತಯಾರಿಯನ್ನು ನಡೆಸುತ್ತಿದ್ದರು. ಆದರೆ ಏನು ತಿಳಿಯಿತೋ ಏನು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕೋಣೆಯಲ್ಲಿದ್ದ ಮಹಾಲಕ್ಷ್ಮಿ ಎಷ್ಟೊತ್ತಾದರೂ ಕೊಣೆಯಿಂದ ಹೊರಗಡೆ ಬಂದಿರಲಿಲ್ಲ. ಇದರಿಂದ ಗಾಬರಿಗೊಂಡ ಕುಟುಂಬಸ್ಥರು ಕೋಣೆಯ ಬಾಗಿಲು ಬಡಿದು ಹೊರಗೆ ಬರುವಂತೆ ಮಹಾಲಕ್ಷ್ಮಿಯನ್ನು ಕೇಳಿದ್ದಾರೆ. ಆದರೆ ತುಂಬಾ ಹೊತ್ತಾದರೂ ಆಕೆ ಬರದಿದ್ದಾಗ ಅನುಮಾನಗೊಂಡ ಕುಟುಂಬಸ್ಥರು ಕೋಣೆಯ ಬಾಗಿಲನ್ನು ಮುರಿದಿದ್ದಾರೆ.
ಆಗ ಮಹಾಲಕ್ಷ್ಮಿ ಅವರ ಮೃತದೇಹ ಸಿಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಮೃತದೇಹವನ್ನು ಭದ್ರಾಚಲಂ ಏರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತರ ಕುಟುಂಬಕ್ಕೆ ಸಾರಿಗೆ ಸಚಿವ ಪುವ್ವಾಡ ಅಜಯ್ ಕುಮಾರ್ ಮತ್ತಿತರರು ಸಾಂತ್ವನ ಹೇಳಿದರು
ಈ ಘಟನೆ ಕುರಿತು ಬೂರ್ಗಂಪಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ಏನೆಂಬುದನ್ನು ತಿಳಿಯಲು ತನಿಖೆ ಕೈಗೊಂಡಿದ್ದಾರೆ.