ಮೈತ್ರಿ ಸರ್ಕಾರದ ನಂತರ ಜೆಡಿಎಸ್ ಮನೆವೊಂದು ಮೂರು ಬಾಗಿಲಾಗಿ ಬದಲಾಗಿದೆ. ಮೈತ್ರಿ ಸರ್ಕಾರದಲ್ಲಿ ತಮ್ಮನ್ನು ಕಡೆಗಣಿಸಿದ್ದಾರೆಂದು ಪಕ್ಷದ ನಾಯಕರಾದ ಜಿ.ಟಿ ದೇವೇಗೌಡ , ಗುಬ್ಬಿ ಶ್ರೀನಿವಾಸ್ ಅವರು ಬಹಿರಂಗವಾಗಿಯೇ ಪಕ್ಷದ ವಿರುದ್ಧ ಮಾತನಾಡಿದ್ದಾರೆ, ಮಾತನಾಡುತ್ತಿದ್ದಾರೆ. ಇದೀಗ ಈ ಸಾಲಿಗೆ ಜೆಡಿಎಸ್ ಕಾರ್ಯಾಧ್ಯಕ್ಷ ಮಧು ಬಂಗಾರಪ್ಪ ಸೇರಿಕೊಂಡಿದ್ದು, ಪಕ್ಷದಲ್ಲಿ ವ್ಯವಸ್ಥೆಯೇ ಸರಿಯಿಲ್ಲ ಎಂದು ತಮ್ಮ ಅಸಮಾಧಾನ ಹೊರ ಹಾಕಿದ್ದರು. ಇದೀಗ ಈ ನಾಯಕ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಪಕ್ಷದ ವರಿಷ್ಠರು ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದ್ದಾರೆ. ಈ ಹಿನ್ನೆಲೆ ನಾವು ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದು, ಎಲ್ಲಾ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ ಕುಮಾರಸ್ವಾಮಿ ಹೇಳಿದ್ದಾರೆ.
ಇನ್ನು ಜಿ.ಟಿ ದೇವೇಗೌಡ ಅವರ ಬಗ್ಗೆ ಮಾತನಾಡಿದ ಹೆಚ್ ಕೆ ಕುಮಾರಸ್ವಾಮಿ, ಈಗಾಗಲೇ ಜಿಟಿ ದೇವೇಗೌಡ ಮತ್ತು ಗುಬ್ಬಿ ಶ್ರೀನಿವಾಸ್ ಪಕ್ಷಕ್ಕೆ ಗಂಭೀರ ಸವಾಲಾಗಿ ಪರಿಣಮಿಸಿದ್ದಾರೆ. ಪಕ್ಷದ ಹಾಗೂ ನಾಯಕರ ವಿರುದ್ಧ ಅಸಮಾಧಾನ ಹೊರ ಹಾಕಿ ಪಕ್ಷಕ್ಕೆ ಮುಜುಗರ ಉಂಟು ಮಾಡುತ್ತಿದ್ದಾರೆ. ಅವರನ್ನು ಬಹುಶ ಪಕ್ಷದಿಂದ ಉಚ್ಚಾಟನೆ ಮಾಡುವ ಸಾಧ್ಯತೆಯಿದೆ ಎಂದು ಮಾಹಿತಿ ನೀಡಿದ್ದಾರೆ.
ಇದೇ ವೇಳೆ ಮಧು ಬಂಗಾರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, “ಅವರ ಆಕ್ರೋಶವು ನಾಯಕತ್ವದ ಬಿಕ್ಕಟ್ಟಿನ ಪ್ರತಿಬಿಂಬವಲ್ಲ. ಅವರು ಪಕ್ಷದ ಶಿಸ್ತುಬದ್ಧ ಕಾರ್ಯಕರ್ತರಾಗಿದ್ದಾರೆ ಎಂದು ಹೇಳಿದ್ದಾರೆ.
ಒಟ್ಟಾರೆ ಜೆಡಿಎಸ್ ಪಕ್ಷದಿಂದ ಜೆ.ಟಿ ದೇವೇಗೌಡ, ಮಧು ಬಂಗಾರಪ್ಪ ಒಂದು ಕಾಲು ಹೊರಗಿಟ್ಟಿದ್ದು, ಈ ಶಾಸಕಾಂಗ ಸಭೆ ಇವರ ಮೇಲೆ ಯಾವ ಪರಿಣಾಮ ಬೀರುತ್ತೋ ಕಾದು ನೋಡಬೇಕಾಗಿದೆ.