ಎಲ್ಲಕ್ಕೂ ಸಿದ್ಧರಾಗಿ.. ಈ ಸರ್ಕಾರವನ್ನು ಕಿತ್ತೊಗೆಯಬೇಕು : ಡಿಕೆಶಿ ಕರೆ
ಬೆಂಗಳೂರು : ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡುವ ಮೂಲಕ ದೇಶದ 140 ಕೋಟಿ ಜನರಿಗೆ ಬರೆಯನ್ನು ಎಳೆದಿದ್ದಾರೆ.
ಕೇಂದ್ರ ಸರ್ಕಾರ ಆದಾಯ ಹೆಚ್ಚಿಸಲು ಎಲ್ಲಾ ಪದಾರ್ಥಗಳ ದರ ಏರಿಕೆ ಮಾಡಲಾಗಿದೆ. ಕೇಂದ್ರ ಸರ್ಕಾರ ಜನರ ಪಿಕ್ ಪಾಕೆಟ್ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.
ದೇಶದಲ್ಲಿ ಪದೇ ಪದೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಬೆಂಗಳೂರಿನ ಶಿವಾನಂದ ವೃತ್ತ ಸಮೀಪದ ರೆಡ್ಡಿ ಪೆಟ್ರೋಲ್ ಬಂಕ್ ಮುಂಭಾಗ ಇಂದು ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದ್ದಾರೆ.
‘100 ನಾಟೌಟ್’ ಘೋಷಣೆ ಅಡಿ ರಾಜ್ಯಾದ್ಯಂತ ಇಂದಿನಿಂದ ಐದು ದಿನ ಇಂಧನ ಬೆಲೆ ಏರಿಕೆ ಖಂಡಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಕೈಕಲಿಗಳು ಕರೆ ಕೊಟ್ಟಿದ್ದಾರೆ.
ಪ್ರತಿಭಟನೆ ಸ್ಥಳದಲ್ಲೇ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ನಾವು ನಿಯಮ ಮೀರಿದ್ದೇವೆ ಎಂದು ಪೊಲೀಸರು ಬಂಧಿಸಲು ಹೊರಟಿದ್ದಾರೆ.
ನಾವು ಇದಕ್ಕೆಲ್ಲಾ ಹೆದರಬಾರದು. ಯಾವುದೇ ಕಾರಣಕ್ಕೂ ನಮ್ಮ ಪ್ರತಿಭಟನೆ ನಾಳೆಯಿಂದ ಸೂಚಿತ ಸ್ಥಳಗಳಲ್ಲಿ ಮುಂದುವರಿಯಬೇಕು. ಇಡೀ ರಾಷ್ಟ್ರದ ಜನರ ಪಿಕ್ ಪಾಕೆಟ್ ಮಾಡಲಾಗಿದೆ.
ಇದನ್ನು ಖಂಡಿಸಿ ಪ್ರತಿಭಟನೆ ಮಾಡುತ್ತಿದ್ದೇವೆ. 30 ಬಾರಿ ಬೆಲೆ ಏರಿಕೆ ಮಾಡಿರುವ ಈ ಸರ್ಕಾರವನ್ನು ಕಿತ್ತೊಗೆಯಬೇಕು. ನಾಳೆ, ನಾಡಿದ್ದು ಸೇರಿದಂತೆ 15ರವರೆಗೂ ವಿವಿಧ ಭಾಗಗಳಲ್ಲಿ ವಿವಿಧ ಹಂತದಲ್ಲಿ ಪ್ರತಿಭಟನೆಗೆ ಸೂಚಿಸಲಾಗಿದೆ.
ಎಲ್ಲಿಯೂ ಬಂಧನಕ್ಕೆ ಹೆದರಬೇಡಿ. ಎಲ್ಲಕ್ಕೂ ಸಿದ್ಧರಾಗಿ. ನಾವು ಜನರನ್ನು ರಕ್ಷಿಸೋಣ ಎಂದು ಕರೆ ಕೊಟ್ಟಿದ್ದಾರೆ.