ಬಾಲಕಿಯೊಬ್ಬಳು ಜೋಕಾಲಿ ಆಡುತ್ತಿದ್ದ ಸಂದರ್ಭದಲ್ಲಿ ಕುತ್ತಿಗೆಗೆ ಸೀರೆ ಸುತ್ತಿಕೊಂಡ ಪರಿಣಾಮ ಸಾವನ್ನಪ್ಪಿರುವ ಘಟನೆ ಉಡುಪಿ(udupi) ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಕೆಮ್ಮಣ್ಣು ಅಂತೊಟ್ಟು ಎಂಬಲ್ಲಿ ಸಂಭವಿಸಿದೆ.
ಅಂತೊಟ್ಟು ಗ್ರಾಮದ ನಿವಾಸಿ ಲಕ್ಷ್ಮಣ್ ಪೂಜಾರಿ ಎಂಬುವವರ 9 ವರ್ಷದ ಮಗಳು ಮಾನ್ವಿ ಸಾವನ್ನಪ್ಪಿರುವ ದುರ್ದೈವಿ. ಸಂಜೆ ಹೊತ್ತು ತನ್ನ ಚಿಕ್ಕಪ್ಪನ ಮನೆ ಹತ್ತಿರ ತನ್ನ ಸ್ನೇಹಿತೆ ದೀಕ್ಷಾ ಜೊತೆ ಜೋಕಾಲಿ ಆಡುವಾಗ ಆಕಸ್ಮಿಕವಾಗಿ ಜೋಕಾಲಿಗೆ ಕಟ್ಟಿದ ಸೀರೆ ಕುತ್ತಿಗೆಗೆ ಸಿಲುಕಿಕೊಂಡು ಸಾವನ್ನಪ್ಪಿದ್ದಾಳೆ.
ತುರ್ತು ಚಿಕಿತ್ಸೆಗೆಂದು ನಿಟ್ಟೆಸಮುದಾಯ ಆರೋಗ್ಯ ಕೇಂದ್ರಕ್ಕೆ ಬಾಲಕಿಯನ್ನು ಕರೆದೊಯ್ಯಲಾಗಿತ್ತು. ವೈದ್ಯಾಧಿಕಾರಿಯವರು ಮಾನ್ವಿಯನ್ನು ಪರೀಕ್ಷಿಸಿದಾಗ ಆಕೆ ಸಾವನ್ನಪ್ಪಿರುವುದು ಖಚಿತವಾಗಿದೆ. ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.