ಬಿಎಸ್ ವೈ ಸಿಎಂ ಆದಾಗೆಲ್ಲಾ ಕಷ್ಟಗಳು ಬಂದೇ ಬರುತ್ತಿವೆ : ಗೂಳಿಹಟ್ಟಿ ಶೇಖರ್
ಚಿತ್ರದುರ್ಗ : ನಮ್ಮ ಬಿ.ಎಸ್. ಯಡಿಯೂರಪ್ಪನವರ ಗ್ರಹಚಾರವೋ ಏನೋ ಗೊತ್ತಿಲ್ಲ. ಅವರು ಸಿಎಂ ಆದಾಗೆಲ್ಲಾ ಕಷ್ಟಗಳು ಬಂದೇ ಬರುತ್ತಿವೆ ಎಂದು ಹೊಸದುರ್ಗ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಹೇಳಿದ್ದಾರೆ.
ಗೂಳಿಹಟ್ಟಿ ಶೇಖರ್ ಇಂದು ಹೊಸದುರ್ಗ ನಗರದ ಸ್ಲಂ ನಿವಾಸಿಗಳು ಹಾಗೂ ಕಡು ಬಡವರಿಗೆ ಉಚಿತವಾಗಿ 6,500 ಆಹಾರ ಕಿಟ್ ವಿತರಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಿ, ರಾಜ್ಯದ ಚುಕ್ಕಾಣಿ ಹಿಡಿದರೆ ಸಾಕು ನಮ್ಮ ಹಣೆ ಬರಹವೇ ಬದಲಾಗುತ್ತದೆ ಅಂತ ಕೆಲ ರಾಜಕಾರಣಿಗಳು ಕನಸು ಕಾಣುತ್ತಾರೆ. ಆದರೆ ನಮ್ಮ ಬಿ.ಎಸ್. ಯಡಿಯೂರಪ್ಪನವರ ಗ್ರಹಚಾರವೋ ಏನೋ ಗೊತ್ತಿಲ್ಲ.
ಅವರು ಸಿಎಂ ಆದಾಗೆಲ್ಲಾ ಕಷ್ಟಗಳು ಬಂದೇ ಬರುತ್ತಿವೆ. ಆದರೆ ರಾಜ್ಯದ ಸಿಎಂ ಆಗಿ ಬಿಎಸ್ ವೈ ಅವರು ಉತ್ತಮ ಕಾರ್ಯ ಮಾಡುತ್ತಿದ್ದಾರೆ.
ಆದರೆ ಅವರ ಗ್ರಹಚಾರವೋ, ಏನೋ ಗೊತ್ತಿಲ್ಲ ಅವರು ಕಳೆದ ಬಾರಿ ಮುಖ್ಯಮಂತ್ರಿಯಾದಾಗ ಎಲ್ಲೆಡೆ ನೆರೆ ಹಾವಳಿಯ ಸಂಕಷ್ಟ ಎದುರಾಗಿತ್ತು.
ಆಗ ಎದೆಗುಂದದೇ ನೆರೆಹಾವಳಿಯನ್ನು ಸಿಎಂ ಎದುರಿಸಿದರು. ಈ ಬಾರಿಯು ಸಹ ನೆರೆ ಹಾವಳಿ ಜೊತೆಗೆ ಕೋವಿಡ್ ಸಂಕಷ್ಟ ಎದುರಾಗಿದೆ ಎಂದರು.
ಅವರು ಪ್ರತಿದಿನ ತೀವ್ರ ಒತ್ತಡದಲ್ಲಿ ಕೆಲಸ ಮಾಡುವಂತಾಗಿದೆ. ಇಂತಹ ಸಮಯದಲ್ಲಿ ಮುಖ್ಯಮಂತ್ರಿಯಾಗಿ ನೆಮ್ಮದಿಯಿಂದ ಎಲ್ಲಾ ಪೂರೈಸುವುದು ಕಷ್ಟ ಎನಿಸುತ್ತಿದೆ.
ಆದರೆ ಸಿಎಂ ಸ್ಥಾನದ ಬಗ್ಗೆ ಪಕ್ಷದ ತೀರ್ಮಾನಕ್ಕೆ ನಾವೆಲ್ಲ ಬದ್ಧರಾಗಿರುತ್ತೇವೆ ಎಂದು ನಾಯಕತ್ವ ಬದಲಾವಣೆ ವಿಚಾರವಾಗಿ ಗೂಳಿಹಟ್ಟಿ ಶೇಖರ್ ಪ್ರತಿಕ್ರಿಯೆ ನೀಡಿದರು.