`ಬಿಎಸ್ ವೈ ಮೌನ’ದ ಹಿಂದೆ `ಮಹಾ ಮಾಸ್ಟರ್ ಪ್ಲಾನ್’..!
ಬೆಂಗಳೂರು : ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಖಚಿತವಾಗಿದೆ. ಅದಕ್ಕೆ ಜುಲೈ 26ರಂದು ಮುಹೂರ್ತ ಫಿಕ್ಸ್ ಮಾಡಿದೆ. ಕಳೆದ ಎರಡು ವರ್ಷಗಳಿಂದ ನಡೆಯುತ್ತಿದ್ದ ಸಿಎಂ ಬದಲಾವಣೆ ಚರ್ಚೆಗೆ ಈಗ ತಾರ್ಕಿಕ ಅಂತ್ಯ ಸಿಗುವ ಸಾಧ್ಯತೆಗಳು ದಟ್ಟವಾಗಿವೆ. ಇಷ್ಟೆಲ್ಲಾ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದರೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತ್ರ ಮೌನಕ್ಕೆ ಶರಣಾಗಿದ್ದಾರೆ. ಎಲ್ಲೂ ಕೂಡ ಸದ್ಯದ ಬೆಳವಣಿಗೆ ಬಗ್ಗೆ ತುಟ್ಟಿ ಬಿಚ್ಚುತ್ತಿಲ್ಲ ಯಡಿಯೂರಪ್ಪ.
ಹಾಗಾದ್ರೆ ಬಿಎಸ್ ವೈನ ಈ ಮೌನ ಶರಣಾಗತಿಯೋ ಅಥವಾ ತಂತ್ರಗಾರಿಕೆಯೋ..? ಅನ್ನೋ ಚರ್ಚೆ ಈಗ ಶುರುವಾಗಿದೆ. ಸುದೀರ್ಘ ಕಾಲ ರಾಜಕೀಯ ಮಾಡಿಕೊಂಡು ಬಂದಿರುವ ಯಡಿಯೂರಪ್ಪ ಶರಣಾಗತಿ ಆಗ್ತಾರೆ ಅಂದ್ರೆ ಅದು ಬೆಕ್ಕಿಗೆ ಜ್ವರ ಬರುವ ಮಾತು ಅನ್ನೋದು ರಾಜಕೀಯ ಪಂಡಿತರ ಮಾತು..!
ಹೌದು..! ಬಿ.ಎಸ್.ಯಡಿಯೂರಪ್ಪ ಒಂಟಿಸಲಗದಂತೆ ರಾಜ್ಯದಲ್ಲಿ ಕೇಸರಿಪಡೆಯನ್ನು ಕಟ್ಟಿ ಅಧಿಕಾರಕ್ಕೆ ತಂದಿದ್ದಾರೆ. ಅದೆಷ್ಟೋ ರಾಜಕೀಯ ಸಂದಿಗ್ಥತೆ ಪರಿಸ್ಥಿತಿಗಳು ಎದುರಿಸಿದ್ದಾರೆ. ಘಟಾನುಘಟಿ ರಾಜಕೀಯ ದುರಿಣರಿಗೆ ನೀರು ಕುಡಿ ಅವರ ತಂತ್ರಗಾರಿಕೆಯನ್ನು ಧೂಳಿಪಟ ಮಾಡಿದ್ದಾರೆ. ಸಾಕಷ್ಟು ಬಾರಿ ವಿರೋಧಿಗಳ ಚಕ್ರವ್ಯೂಹವನ್ನು ಬೇಧಿಸಿ ತ್ರಿವಿಕ್ರಮರಂತೆ ವಾಪಸ್ ಆಗಿದ್ದಾರೆ. ಇಂತಹ ಛಲದಂಕಮಲ್ಲ ಬಿಎಸ್ ಯಡಿಯೂರಪ್ಪ ಶರಣಾಗತಿ ಸ್ವೀಕರಿಸುತ್ತಾರೆ ಅಂದ್ರೆ ಅದು ನಂಬುವಂತಹ ಮಾತಲ್ಲ. ಹಾಗಾದ್ರೆ ಸಿಎಂ ಮೌನದ ಮರ್ಮವೇನು..?
ಸೈಲೆಂಟ್ ಆಗಿ ಕಾವಿ ಗುರಾಣಿ ಪ್ರಯೋಗ
ಯಡಿಯೂರಪ್ಪ ಚತುರ ರಾಜಕಾರಣಿ, ರಾಜಕೀಯ ಚದುರಂಗದಲ್ಲಿ ಯಾವ ಸಮಯದಲ್ಲಿ ಯಾವ ಪಾನ್ ಮ್ಯೂ ಮಾಡಬೇಕು ಅನ್ನೋ ಪಕ್ಕಾ ಲೆಕ್ಕಾಚಾರ ಇರುವ ಮಾಸ್ಟರ್ ಮೈಂಡ್. ಕೊನೆಯ ಹಂತದವರೆಗೂ ಪಟ್ಟಬಿಡದೇ ಹೋರಾಡುವ ಕಲೆಯನ್ನು ಬಿಎಸ್ ವೈ ಮೈಗೂಡಿಸಿಕೊಂಡಿದ್ದಾರೆ. ಸದ್ಯ ಸಿಎಂ ಬದಲಾವಣೆ ಚರ್ಚೆ ಜೋರಾಗಿದ್ದರೂ ಯಾವುದಕ್ಕೂ ತಲೆಕೆಡಿಸಿಕೊಳ್ಳದ ಸಿಎಂ ಕಾವಿ ಅಸ್ತ್ರವನ್ನು ಪ್ರಯೋಗಿಸಿದ್ದಾರೆ. ರಾಜ್ಯದಲ್ಲಿರುವ ಎಲ್ಲಾ ಸ್ವಾಮೀಜಿಗಳು ಈಗ ಬಿಎಸ್ ವೈ ಪರ ನಿಂತಿದ್ದಾರೆ. ಮುಖ್ಯವಾಗಿ ಬಿಜೆಪಿಯ ವೋಟ್ ಬ್ಯಾಂಕ್ ಆಗಿರುವ ಲಿಂಗಾಯುತ ಸಮುದಾಯದ ಸ್ವಾಮೀಜಿಗಳು ಬಿಎಸ್ ವೈ ಪರ ನಿಂತು ಪಕ್ಷದ ವರಿಷ್ಠರಿಗೆ ವಾರ್ನ್ ಮಾಡಿದ್ದಾರೆ. ಯಡಿಯೂರಪ್ಪ ಅವರನ್ನು ಕೆಳಗಿಳಿಸಿದ್ದೇ ಆದ್ದಲ್ಲಿ ಬಿಜೆಪಿಗೆ ತಕ್ಕ ಪಾಠ ಕಳಿಸುವ ಬಗ್ಗೆ ಬಹಿರಂಗವಾಗಿಯೇ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಆ ಮೂಲಕ ಯಾವುದೇ ಕಾರಣಕ್ಕೂ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸದಂತೆ ಬಿಜೆಪಿ ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ. ಇದು ಬಿಎಸ್ ವೈ ಅವರ ತಂತ್ರಗಾರಿಕೆ ಅನ್ನೋದ್ರಲ್ಲಿ ಯಾವುದೇ ಸಂಶಯವಿಲ್ಲ. ಮೇಲ್ನೋಟಕ್ಕೆ ಹೈಕಮಾಂಡ್ ಮುಂದೆ ಒಂದೆಡೆರಡು ಹೆಜ್ಜೆ ಹಿಂದಕ್ಕೆ ಸರಿದಂತಿದ್ದರೂ ರಾಜ್ಯ ಬಿಜೆಪಿಯ ರಾಜಾಹುಲಿ, ಹೈಕಮಾಂಡ್ ಗೆ ಸ್ವಾಮೀಜಿಗಳ ಮೂಲಕ ಚೆಕ್ ಮೇಟ್ ಇಟ್ಟಿದ್ದಾರೆ. ಇದು ಯಾವ ಹಂತ ತಲುಪುತ್ತೋ ಎಂದು ಕಾದುನೋಡಬೇಕಿದೆ.