ಅಪ್ಪು ನಿಧನದ ನಂತರ ಜಿಮ್ , ಫಿಟ್ನೆಸ್ ಸೆಂಟರ್ ಗಳಿಗೆ ಮಾರ್ಗ್ ಸೂಚಿ ಬಿಡುಗಡೆ
ಚಿಕ್ಕಬಳ್ಳಾಪುರ : ಪುನೀತ್ ರಾಜ್ ಕುಮಾರ್ ಅವರ ನಿಧನದ ನಂತರ ಜಿಮ್ ಗಳ ಮೇಲೆ ಸಾಕಷ್ಟು ಜನರ ಸಿಟ್ಟಿದೆ. ಕಾರಣ ಪುನೀತ್ ಅವರು ಜಿಮ್ ನಲ್ಲಿ ವರ್ಕೌಟ್ ನಂತರವೇ ಅನಾರೋಗ್ಯಗೊಂಡು ನಿಧನ ಹೊಂದಿರುವುದಾಗಿ ಹೇಳಲಾಗಿತ್ತು. ಇದಾದ ನಂತರ ಇತ್ತೀಚೆಗೆ ಕೇರಳದಲ್ಲಿ ಜಿಮ್ ಹಾಗೂ ಫಿಟ್ನೆಸ್ ಸೆಂಟರ್ ಗಳಲ್ಲಿ ಅಲ್ಲಿನ ಸರ್ಕಾರ ಹೊಸ ನಿಯಮ ತಂದಿದೆ. ಇದೀಗ ರಾಜ್ಯದ ಜಿಮ್ ಗಳಿಗೆ ಹೊಸ ಮಾರ್ಗಸೂಚಿ ತರುವ ಬಗ್ಗೆ ಚರ್ಚೆ ನಡೆದಿದ್ದು, ಶೀಘ್ರವೇ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.
ಖ್ಯಾತ ಹೃದಯ ತಜ್ಞರಿಂದ ಜಿಮ್ ಮತ್ತು ಫಿಟ್ನೆಸ್ ಸೆಂಟರ್ ಗಳಲ್ಲಿ ಮಾರ್ಗಸೂಚಿ ತರುವ ಕುರಿತು ಚರ್ಚೆ ನಡೆದಿದ್ದು, ಶೀಘ್ರವೇ ಗೈಡ್ ಲೈನ್ಸ್ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ. ಒಂದೆರಡು ಘಟನೆಗಳನ್ನು ಆಧರಿಸಿ ಜಿಮ್ ಮಾಡುವುದೇ ತಪ್ಪು ಎಂದು ಹೇಳುವುದು ಸರಿಯಲ್ಲ. ಹೀಗಾಗಿ ಮಾರ್ಗಸೂಚಿ ತರಲು ಚಿಂತನೆ ನಡೆದಿದೆ. ಖ್ಯಾತ ಹೃದಯ ತಜ್ಞರಾದ ಡಾ.ಸಿ.ಎನ್. ಮಂಜುನಾಥ್, ಡಾ. ವಿವೇಕ್ ಚೌಳಿ, ಡಾ. ದೇವಿಶೆಟ್ಟಿ, ಅಮೆರಿಕದ ರಂಗಧಾಮ್ ಅವರ ಬಳಿ ಚರ್ಚೆ ನಡೆಸಲಾಗಿದ್ದು, ಶೀಘ್ರವೇ ಮಾರ್ಗಸೂಚಿ ತರಲಾಗುವುದು ಎಂದು ಸುಧಾಕರ್ ತಿಳಿಸಿದ್ದಾರೆ.