`ಸಿಡಿ ಕೇಸ್ ಎಸ್ಐಟಿ ತನಿಖೆಗೆ ಒಪ್ಪಿಸಿರುವುದು ತಿಪ್ಪೆ ಸಾರಿಸುವ ಕೆಲಸ’
ಮೈಸೂರು : ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾಗಿರುವ ಸಿಡಿ ಕೇಸ್ ಅನ್ನು ಎಸ್ ಐಟಿ ತನಿಖೆಗೆ ನೀಡಿರುವ ಬಗ್ಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಇದೊಂದು ತಿಪ್ಪೆ ಸಾರಿಸುವ ಕೆಲಸ ಎಂದು ವ್ಯಂಗ್ಯವಾಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಡಿ ವಿಷಯಗಳನ್ನು ಇಟ್ಟುಕೊಂಡು ರಾಜಕಾರಣ ಮಾಡಬಾರದು. ಇಂತಹ ಅದೇಷ್ಟೋ ಸಿಡಿ ಪ್ರಕರಣಗಳು ನಮ್ಮ ಕುಟುಂಬಕ್ಕೆ ಬಂದಿವೆ.
ಇಂತಹ ಪ್ರಕರಣ ತಂದವರಿಗೆ ಬುದ್ಧಿ ಹೇಳಿ ಕಳುಹಿಸಿದ್ದೇವೆ. ರಮೇಶ್ ಜಾರಕಿಹೊಳಿಯವರಿಗೆ ಈಗ ಮನವರಿಕೆ ಆಗಿರಬಹುದು.
ಕುಮಾರಸ್ವಾಮಿ ಇದ್ದಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲವೇನೋ ಅಂತ ರಿಯಲೈಸ್ ಆಗಿರಬೇಕು ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆ ಸಚಿವರ ನಡೆ ಬಗ್ಗೆ ಟೀಕಿಸಿದ ಕುಮಾರಸ್ವಾಮಿ, ಇನ್ನೂ 26 ಜನರ ಸಿಡಿಗಳು ಇವೆ ಅಂತ ಆ ಯತ್ನಾಳ್ ಹೇಳ್ತಾರೆ. ಆರು ಮಂದಿ ಮಹಾನುಭಾವರು ಕೋರ್ಟಿಗೆ ಸಲ್ಲಿಸಿರುವ ಅರ್ಜಿ ನೋಡಿ ನಮಗೆ ಆಶ್ಚರ್ಯವಾಯ್ತು.
ಸಚಿವರಾದವರು ನಮ್ಮ ತೇಜೋವಧೆ ಮಾಡುವಂತಹ ಅಪಪ್ರಚಾರಗಳಿಗೆ ಅವಕಾಶ ಕೊಡಬೇಡಿ ಅಂತ ಕೇಳಿಕೊಳ್ಳಬಹುದಿತ್ತು. ಆದರೆ ನಮಗೆ ಸಂಬಂಧಪಟ್ಟ ಸಿಡಿ ವಿಚಾರ ಪ್ರಸಾರ ಮಾಡಬಾರದು ಅಂತ ಕೋರಿದ್ದಾರೆ.
ಸಚಿವರಾಗಿದ್ದುಕೊಂಡು ತಮಗೆ ತಾವೇ ರಕ್ಷಣೆ ಮಾಡಿಕೊಳ್ಳಲಾರದವರು ರಾಜ್ಯದ ಜನರನ್ನು ಹೇಗೆ ರಕ್ಷಣೆ ಮಾಡ್ತಾರೆ ಅಂತ ಪ್ರಶ್ನಿಸಿದರು.
ಇನ್ನು ಸಿಡಿ ವಿಚಾರ ಪ್ರಕರಣ ಎಸ್ ಐಟಿಗೆ ಕೊಟ್ಟ ಬಗ್ಗೆ ಮಾತನಾಡಿ, ಇದೊಂದು ತಿಪ್ಪೆ ಸಾರಿಸುವ ತನಿಖೆ ಆಗಲಿದೆ ಎಂದು ಅಭಿಪ್ರಾಯಪಟ್ಟರು.
ಹಾಗೆ ಯಾರ ಮೇಲೆ ತನಿಖೆ ಮಾಡ್ತೀರಾ ಹೇಳಿ. ಸಂಸ್ಥೆಗಳಿಂದ ಸ್ವಾತಂತ್ರ್ಯದ ನಂತರ ಯಾರಿಗೆ ಶಿಕ್ಷೆಯಾಗಿದೆ. ಹಾಗೇನಾದ್ರು ಶಿಕ್ಷೆ ಆಗಿದ್ರೆ ಅದು ಅಮಾಯಕರಿಗೆ ಆಗಿದೆ ಅಷ್ಟೆ ಎಂದರು.