“ಸುಳ್ಳಿನ ಶೂರ ಸಿದ್ದರಾಮಯ್ಯನವರೇ ನಿಮ್ಮ ಸುಳ್ಳಿನ ‘ಸಿದ್ದಕಲೆ’ಗೆ ಕೊನೆ ಹಾಡಿ” H D Kumaraswamy saaksha tv
ಬೆಂಗಳೂರು : ಸುಳ್ಳಿನ ಶೂರ ಸಿದ್ದರಾಮಯ್ಯನವರೇ, ಇನ್ನಾದರೂ ನಿಮ್ಮ ಸುಳ್ಳಿನ ‘ಸಿದ್ದಕಲೆ’ಗೆ ಕೊನೆ ಹಾಡಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಅಕ್ಕಿಭಾಗ್ಯ ವಿಚಾರವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಟ್ವಿಟ್ಟರ್ ನಲ್ಲಿ ಕಿಡಿಕಾರಿದ ಹೆಚ್ ಡಿ ಕುಮಾರಸ್ವಾಮಿ, ‘ಅಕ್ಕಿಭಾಗ್ಯದ ಅಸಲಿಯೆತ್ತು’ ಏನು ಎಂಬುದನ್ನು ಈಗಾಗಲೇ ಸದನದಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದೇನೆ. ಅದಾದ ಮೇಲೂ ನಿಮ್ಮ ‘ಸುಳ್ಳಿನ ಜಪ’ ಮುಂದುವರಿದಿದೆ. ಸತ್ಯ ಹೇಳಲು ಹಿಂಜರಿಕೆ-ಅಧೈರ್ಯ ಏಕೆ? ಸುಳ್ಳಿನ ಮೇಲಿರುವಷ್ಟು ನಿಷ್ಠೆ ಸತ್ಯದ ಮೇಲೆ ಯಾಕಿಲ್ಲ? ಐದು ಕೆಜಿ ಅಕ್ಕಿ ಅಸಲಿಯೆತ್ತಿನ ಬಗ್ಗೆ ಹೇಳಲು ಅಂಜಿಕೆ ಏಕೆ ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದ್ದಾರೆ.
ಸಮ್ಮಿಶ್ರ ಸರಕಾರದಲ್ಲಿ ನಾನು ಮುಖ್ಯಮಂತ್ರಿ ಆಗಿದ್ದೆ. ಅದಕ್ಕೆ ಮುನ್ನ ಬಜೆಟ್ ಮಂಡಿಸಿ ಚುನಾವಣೆಗೆ ಹೋದ ತಾವು ಎಷ್ಟು ಕೆಜಿ ಅಕ್ಕಿಗೆ ಹಣ ಇಟ್ಟಿದ್ದಿರಿ? 5 ಕೆಜಿಗೋ ಅಥವಾ 7 ಕೆಜಿಗೋ? ಸತ್ಯವನ್ನು ಕಕ್ಕಲು ಕಷ್ಷವೇಕೆ? ನಾಲಗೆ ತಡವರಿಸುತ್ತಿದೆಯಾ ಪ್ರತಿಪಕ್ಷ ನಾಯಕರೇ?
ಸಮ್ಮಿಶ್ರ ಸರಕಾರದಲ್ಲಿ 5 ಕೆಜಿ ಅಕ್ಕಿ ನೀಡಲಾಯಿತು, ನಿಜ. 7 ಕೆಜಿ ಕೊಡಿ ಎಂದು ಬೊಬ್ಬೆ ಹೊಡೆದ ನೀವೇ ಹಣ ಇಟ್ಟಿದ್ದದ್ದು 5 ಕೆಜಿಗೆ ಮಾತ್ರ. ಹೊರಗೆ ಕುಮಾರಸ್ವಾಮಿ 7 ಕೆಜಿ ಅಕ್ಕಿಯನ್ನು 5 ಕೆಜಿಗೆ ಇಳಿಸಿದರು ಎಂದು ನಿರ್ಲಜ್ಜವಾಗಿ ಸುಳ್ಳು ಹೇಳುತ್ತಿದ್ದೀರಿ. ಉಳಿದ 2 ಕೆಜಿ ಅಕ್ಕಿಗೆ ಹಣ ಎಲ್ಲಿತ್ತು? ಪಾಪಪ್ರಜ್ಞೆ ಇಲ್ಲವಾ ನಿಮಗೆ?
ಚುನಾವಣೆಯಲ್ಲಿ ಕೇವಲ ಮತ ಪಡೆಯುವ ದುರುದ್ದೇಶದಿಂದ ನೀವು ಜನರು ತಿನ್ನುವ ಅನ್ನದ ಜತೆಗೂ ರಾಜಕೀಯ ಮಾಡುತ್ತಿದ್ದರಿ. ಆದರೆ ಉಳಿದ 2 ಕೆಜಿ ಅಕ್ಕಿಗೆ ಹಣ ಹೊಂದಿಸಲು ಸಮ್ಮಿಶ್ರ ಸರಕಾರದಲ್ಲಿ ನಾವು ಪಟ್ಟ ಕಷ್ಟ ನಿಮಗೆ ಗೊತ್ತಿಲ್ಲವೇ?
ಸದನದಲ್ಲಿ ಈ ವಿಷಯವನ್ನು ನಾನು ಪ್ರಸ್ತಾಪ ಮಾಡಿದಾಗ 5 ಕೆಜಿಗೆ ಹಣ ಮೀಸಲಿಟ್ಟು ‘ಅಕ್ಕಿಗಾಗಿ ಮಿಡಿದ ನಿಮ್ಮ ಆತ್ಮಸಾಕ್ಷಿ’ ಎಲ್ಲಿ ಹೋಗಿತ್ತು? ಸುಳ್ಳಿನ ಶೂರ ಸಿದ್ದರಾಮಯ್ಯನವರೇ, ಇನ್ನಾದರೂ ನಿಮ್ಮ ಸುಳ್ಳಿನ ‘ಸಿದ್ದಕಲೆ’ಗೆ ಕೊನೆ ಹಾಡಿ ಎಂದು ಕುಟುಕಿದ್ದಾರೆ.