ಬೆಂಗಳೂರು: ಸಂಪುಟ ವಿಸ್ತರಣೆಗೂ ಮುನ್ನ ಹಠಹಿಡಿದು ಕುಳಿತಿದ್ದ ಅಬಕಾರಿ ಸಚಿವ ಹೆಚ್. ನಾಗೇಶ್, ಕೊನೆಗೂ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಎಚ್. ನಾಗೇಶ್ಗೆ ಕೊಟ್ಟ ಮಾತಿನಂತೆ ಸಂಪುಟ ದರ್ಜೆ ಸ್ಥಾನಮಾನದೊಂದಿಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮ ಅಧ್ಯಕ್ಷರಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಅಬಕಾರಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರೆ, ಅದಕ್ಕೆ ಸಮಾನ ದರ್ಜೆ ಹುದ್ದೆ ನೀಡುವುದಾಗಿ ಸಿಎಂ ಯಡಿಯೂರಪ್ಪ ನಾಗೇಶ್ ಅವರ ಮನವೊಲಿಸಿದ್ದರು. ಇಂದು 7 ಶಾಸಕರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ಮೂಲಕ ಖಾಲಿ ಇದ್ದ ಸ್ಥಾನಗಳನ್ನು ಭರ್ತಿ ಮಾಡಿದಂತಿದೆ. ಅನಿವಾರ್ಯ ಸಂದರ್ಭದಲ್ಲಿ ಹೊಸಬರನ್ನು ಸೇರಿಸಿಕೊಳ್ಳಬೇಕಾದರೆ ಹಾಲಿ ಸಚಿವರು ರಾಜೀನಾಮೆ ಕೊಡಿಸಬೇಕಿತ್ತು. ಈ ಕಾರಣಕ್ಕೆ ಅಬಕಾರಿ ಸಚಿವ ಹೆಚ್.ನಾಗೇಶ್ ರಾಜೀನಾಮೆ ಕೊಡಿಸಿ ಸಚಿವ ಸಂಪುಟದಲ್ಲಿ ಒಂದು ಸ್ಥಾನವನ್ನು ಖಾಲಿ ಉಳಿಸಿಕೊಳ್ಳಲಾಗಿದೆ.
ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಯಡಿಯೂರಪ್ಪ ಅವರು ತಾವು ಕೊಟ್ಟ ಮಾತಿನಂತೆ ಹೆಚ್.ನಾಗೇಶ್ ಅವರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡುವ ಆದೇಶಕ್ಕೆ ಸಹಿ ಹಾಕಿದ್ದಾರೆ. ರಾಜೀನಾಮೆಗೂ ಮೊದಲು ಅಂಬೇಡ್ಕರ್ ಅಭಿವೃದ್ಧಿ ನಿಗಮ ಅಧ್ಯಕ್ಷ ಸ್ಥಾನಕ್ಕೆ ನಾಗೇಶ್ ಬೇಡಿಕೆ ಇರಿಸಿದ್ದರು. ನಾಗೇಶ್ ಬೇಡಿಕೆ ಈಡೇರಿಸುವ ಮೂಲಕ ಸದ್ಯಕ್ಕೆ ಸಿಎಂ ಯಡಿಯೂರಪ್ಪ ಅವರಿಗೆ ಎದುರಾಗಿದ್ದ ತಲೆನೋವು ಕಡಿಮೆಯಾದಂತಾಗಿದೆ.
ಈ ಹಿಂದೆ ಅಂಬೇಡ್ಕರ್ ಅಭಿವೃದ್ಧಿ ನಿಗಮ ಅಧ್ಯಕ್ಷರಾಗಿದ್ದ ಮುನಿಕೃಷ್ಣ ಅವರಿಗೆ ಮಾರುಕಟ್ಟೆ ಸಂವಹನ, ಜಾಹೀರಾತು ಲಿಮಿಟೆಡ್ ಹುದ್ದೆಗೆ ನೇಮಕ ಮಾಡಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel