ಸಿಎಂ ಬದಲಾವಣೆಗೆ ಕಾರಣ ಬಿಚ್ಚಿಟ್ಟು, ಮಠಾಧೀಶರ ವಿರುದ್ಧ ಹಳ್ಳಿಹಕ್ಕಿ ಕಿಡಿ
ಮೈಸೂರು : ಸಿಎಂ ಯಡಿಯೂರಪ್ಪ ಬದಲಾವಣೆಗೆ ಮುಖ್ಯ ಕಾರಣ ಭ್ರಷ್ಟಾಚಾರ. ಮಠಾಧೀಶರುಗಳು ಜನರಿಗೆ ಯಾವ ಸಂದೇಶ ರವಾನಿಸುತ್ತಿದ್ದೀರಾ? ಭ್ರಷ್ಟಾಚಾರದ ಪರವಾಗಿ ಸಂದೇಶ ಕೊಡುತ್ತಿದ್ದೀರಾ ಎಂದು ಬಿಎಸ್ ವೈಗೆ ಬೆಂಬಲ ಸೂಚಿಸುತ್ತಿರುವ ಮಠಾಧೀಶರ ವಿರುದ್ಧ ಎಂಎಲ್ ಸಿ ಹೆಚ್ ವಿಶ್ವನಾಥ್ ಕಿಡಿಕಾರಿದ್ದಾರೆ.
ಮಠಾಧೀಶರು ಬಿಎಸ್ ವೈ ಪರ ನಿಂತಿರುವ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಹೆಚ್ ವಿಶ್ವನಾಥ್, ಜನತಂತ್ರದ ದಾರಿ ತಪ್ಪಿದಾಗ ಎಲ್ಲರೂ ಎಚ್ಚರಿಸುತ್ತಾರೆ. ವಿಪಕ್ಷ, ಸಮಾಜ, ಸಂಘ ಸಂಸ್ಥೆ, ಸ್ವಾಮೀಜಿಗಳು ಎಲ್ಲರೂ ಬುದ್ಧಿ ಹೇಳುತ್ತಾರೆ. ಆದರೆ ಇಂದು ಮಠಾಧೀಶರೇ ವ್ಯಕ್ತಿಯ ನಾಕತ್ವದ ಪರ ನಿಂತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ವೀರಶೈವಧರ್ಮ ಸರ್ವಧರ್ಮ ಬಸವೇಶ್ವರ ಧರ್ಮವಾಗಿದೆ. ಎಲ್ಲಾ ಸಮುದಾಯಕ್ಕೂ ಮಠಗಳಿವೆ. ಮಠ ಮಾನ್ಯಗಳು ರಾಜಕೀಯ ಕೇಂದ್ರವಲ್ಲ, ಮಠ ಧರ್ಮಾಧಿಕಾರಿಗಳು ಸಮಾಜದ ಭಾಗವಾಗಿರಬೇಕು ಹೊರತು ರಾಜಕಾರಣ ಅಧಿಕಾರದ ಭಾಗವಾಗಬಾರದು. ವ್ಯಕ್ತಿ, ಪಕ್ಷದ ಪರ ಮಠಾಧೀಶರು ನಿಲ್ಲಬಾರದು. ಸ್ವಾಮಿಜಿಗಳು ಬೀದಿಗೆ ಬಂದು ಹೇಳಿಕೆಗಳನ್ನು ನೀಡುತ್ತಿರುವುದು ಧರ್ಮಾಧಿಕಾರಿಗಳಿಗೂ ಒಳ್ಳೆಯದಲ್ಲ. ಧರ್ಮಾಧಿಕಾರಿಗಳನ್ನು ತಮಗಾಗಿ ಬೀದಿಗೆ ತಂದಿರುವುದು ರಾಜಕಾರಣಿಗಳಿಗೂ ಶೋಭೆಯಲ್ಲ ಎಂದು ವಿಶ್ವನಾಥ್ ಗುಡುಗಿದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಭಾರಿ ಸದ್ದು ಮಾಡುತ್ತಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪರ ರಾಜ್ಯದ ಮಠಾಧೀಶರು ಬ್ಯಾಟ್ ಬೀಸುತ್ತಿದ್ದಾರೆ. ಅಲ್ಲದೆ ಇನ್ನೇರಡು ದಿನಗಳಲ್ಲಿ ಹೋರಾಟ ನಡೆಸುವ ಎಚ್ಚರಿಕೆ ಕೊಟ್ಟಿದ್ದಾರೆ.