‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋ ಫಿನಾಲೆಗೆ ಹನುಮಂತ ಎಂಟ್ರಿ ನೀಡಿದ್ದಾರೆ. ಅವರ ಮುಂದೆ ಘಟಾನುಘಟಿ ಸ್ಪರ್ಧಿಗಳು ಕೂಡ ಗಪ್ಚುಪ್ ಆಗಿದ್ದಾರೆ. ಎಲ್ಲರಿಗೂ ಟಫ್ ಸ್ಪರ್ಧೆ ನೀಡಿ ಹನುಮಂತ ಅವರು ಫಿನಾಲೆಯ ಟಿಕೆಟ್ ಪಡೆದುಕೊಂಡಿದ್ದಾರೆ. ತ್ರಿವಿಕ್ರಮ್, ಭವ್ಯಾ ಗೌಡ, ರಜತ್ ಅವರಿಗೆ ಫಿನಾಲೆ ಟಿಕೆಟ್ ಮಿಸ್ ಆಗಿದೆ.
ಹನುಮಂತನ ಸಾಧನೆ
ಸಿಕ್ಕಾಪಟ್ಟೆ ಸಿಂಪಲ್ ಆಗಿ ಕಾಣಿಸುವ ಹನುಮಂತ ಸಾಮಾನ್ಯ ವ್ಯಕ್ತಿ ಅಲ್ಲ. ಆಟದಲ್ಲಿ ಹನುಮಂತನ ಚುರುಕುತನಕ್ಕೆ ಯಾರೂ ಸರಿಸಾಟಿ ಇಲ್ಲ. ಹೆಚ್ಚೇನೂ ಲೆಕ್ಕಾಚಾರ ಹಾಕದ ಹನುಮಂತು ಆಟದ ಮೇಲೆ ಹೆಚ್ಚಿನ ಗಮನ ನೀಡುತ್ತಾರೆ. ಯಾವುದೇ ಟೆನ್ಷನ್ ಮಾಡಿಕೊಳ್ಳದೇ ಟಾಸ್ಕ್ ಪೂರ್ಣಗೊಳಿಸುತ್ತಾರೆ. ಅದರ ಫಲವಾಗಿ ಅವರಿಗೆ ಈಗಾಗಲೇ ಅನೇಕರ ಮೆಚ್ಚುಗೆ ಸಹ ಸಿಕ್ಕಿದೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಅವರು ‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮದ ಫಿನಾಲೆ ಸ್ಪರ್ಧಿಯಾಗಿ ಆಯ್ಕೆ ಆಗಿದ್ದಾರೆ. ಸದ್ಯ ಬಿಗ್ ಬಾಸ್ ಮನೆಯಲ್ಲಿ ಇರುವ ಇನ್ನುಳಿದ 8 ಘಟಾನುಘಟಿ ಸ್ಪರ್ಧಿಗಳನ್ನೂ ಮೀರಿಸಿ ಹನುಮಂತ ಈ ಸಾಧನೆ ಮಾಡಿದ್ದಾರೆ.
ಫಿನಾಲೆ ಟಿಕೆಟ್ ಗೆಲ್ಲುವ ಟಾಸ್ಕ್
ಫಿನಾಲೆ ಟಿಕೆಟ್ ಪಡೆಯಲು ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದರು. ಯಾರು ಅತಿ ಕಡಿಮೆ ಸಮಯ ತೆಗೆದುಕೊಂಡು ಈ ಟಾಸ್ಕ್ ನಿಭಾಯಿಸುತ್ತಾರೋ ಅವರಿಗೆ ಫಿನಾಲೆಗೆ ಎಂಟ್ರಿ ಸಿಗಲಿದೆ ಎಂದು ಘೋಷಿಸಲಾಗಿತ್ತು. ಭವ್ಯಾ ಗೌಡ ಅವರು 3 ನಿಮಿಷ 22 ಸೆಕೆಂಡ್ ತೆಗೆದುಕೊಂಡರು. ರಜತ್ ಅವರು 3 ನಿಮಿಷ 49 ಸೆಕೆಂಡ್ ತೆಗೆದುಕೊಂಡರು. ತ್ರಿವಿಕ್ರಮ್ ಅವರು 2 ನಿಮಿಷ 30 ಸೆಕೆಂಡ್ ಪಡೆದುಕೊಂಡರು.
ಹನುಮಂತನ ಗೆಲುವು
ಎಲ್ಲರಿಗಿಂತಲೂ ಕಡಿಮೆ ಸಮಯದಲ್ಲಿ ಟಾಸ್ಕ್ ಪೂರ್ಣಗೊಳಿಸಿದ್ದು ಹನುಮಂತ. ಅವರು ಕೇವಲ 2 ನಿಮಿಷ 27 ಸೆಕೆಂಡ್ ತೆಗೆದುಕೊಂಡು ಜಯ ಸಾಧಿಸಿದರು. ‘ಛೂ ಮಂತರ್’ ಸಿನಿಮಾದ ನಾಯಕ ನಟ ಶರಣ್ ಹಾಗೂ ನಾಯಕಿ ಅದಿತಿ ಪ್ರಭುದೇವ ಅವರು ಬಿಗ್ ಬಾಸ್ ಮನೆಗೆ ಬಂದು ಹನುಮಂತ ಅವರಿಗೆ ಫಿನಾಲೆಯ ಟಿಕೆಟ್ ನೀಡಿದರು. ಹನುಮಂತನ ಈ ಗೆಲುವಿಗೆ ಎಲ್ಲರೂ ಅಭಿನಂದನೆ ತಿಳಿಸಿದರು. ಕೇವಲ 3 ಸೆಕೆಂಡ್ ಅಂತರದಲ್ಲಿ ಸೋತಿದ್ದಕ್ಕೆ ತ್ರಿವಿಕ್ರಮ್ ಅವರಿಗೆ ಬೇಸರ ಆಯಿತು. ಇಲ್ಲಿಯ ತನಕ ಬಂದು ಫಿನಾಲೆ ಟಿಕೆಟ್ ಮಿಸ್ ಮಾಡಿಕೊಂಡಿದ್ದಕ್ಕೆ ಭವ್ಯಾ ಗೌಡ ಕೂಡ ಸಖತ್ ಬೇಸರ ಮಾಡಿಕೊಂಡರು.