ಮಠದ ಸ್ವಾಮೀಜಿಗಳು ರಾಜಕೀಯ ಮಾಡಬಾರದು : ಹೆಚ್ ಡಿಕೆ
ಮಂಡ್ಯ : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪರ ಮಠಾಧೀಶರು ಬ್ಯಾಟ್ ಬೀಸುತ್ತಿರುವ ಬಗ್ಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಮಠದ ಸ್ವಾಮೀಜಿಗಳು ರಾಜಕೀಯ ಮಾಡಬಾರದು ಎಂದು ಹೇಳಿದ್ದಾರೆ.
ಸಿಎಂ ಪರ ಮಠಾಧೀಶರ ಬ್ಯಾಟಿಂಗ್ ವಿಚಾರವಾಗಿ ಮಂಡ್ಯದಲ್ಲಿ ಮಾತನಾಡಿ, ಇಂದು ರಾಜ್ಯ ಮುಖ್ಯ. ವ್ಯಕ್ತಿ ಮುಖ್ಯ ಅಲ್ಲ. ಈಗ ಕೆಲವು ಮಠಾಧೀಶರ ಹೇಳಿಕೆಗಳನ್ನು ಗಮನಿಸುತ್ತಿದ್ದೇನೆ.
ಅವರು ಇಲ್ಲ ಸಲ್ಲದ ಹೇಳಿಕೆ ನೀಡಿದ್ದಾರೆ. ಇಲ್ಲಿ ಜಾತಿ ಮುಖ್ಯ ಅಲ್ಲ. ಬಡತನ, ಸಾವು ಯಾವುದೋ ಒಂದು ಜಾತಿಯಲ್ಲಿ ಆಗಿಲ್ಲ. ಎಲ್ಲಾ ಜಾತಿಯ ಜನರು ಸಂಕಷ್ಟದಲ್ಲಿದ್ದಾರೆ. ಅವರಿಗೆ ಸಹಾಯ ಮಾಡಲು ಉಪಯೋಗವಾಗುವ ಮಾತುಗಳನ್ನಾಡಬೇಕು ಎಂದರು.
ಅಲ್ಲದೆ ನನ್ನನ್ನು ಅಧಿಕಾರದಿಂದ ತೆಗೆದರು. ನಮ್ಮ ಒಕ್ಕಲಿಗ ಸಮಾಜದ ಸ್ವಾಮಿಗಳು ರಕ್ಷಣೆಗೆ ಬಂದ್ರಾ ಎಂದು ಪ್ರಶ್ನಿಸಿದರು.
ಇನ್ನು ನಮ್ಮಲ್ಲಿ ದೊಡ್ಡತನ ಇಟ್ಟುಕೊಂಡಿದ್ದೇವೆ. ಅಧಿಕಾರ ಉಳಿಸಿಕೊಳ್ಳುವುದಕ್ಕೆ ಮಠಮಾನ್ಯಗಳ ರಕ್ಷಣೆ ಪಡೆಯಲು ಹೋಗಲ್ಲ. ಅಧಿಕಾರ ಬಂದಾಗ ಕೆಲಸ ಮಾಡಿದ್ದೇವೆ.
ಬೇಡ ಎಂದಾಗ ಹೊರಗೆ ಬಂದಿದ್ದೇವೆ. ಸ್ವಾಮೀಜಿಗಳು ಈ ರೀತಿಯ ಹೇಳಿಕೆ ನೀಡುವುದು ರಾಜ್ಯಕ್ಕೆ ಎಲ್ಲೋ ಒಂದು ಕಡೆ ತಾವುಗಳೇ ಒಂದು ಕೆಟ್ಟ ಸಂಸ್ಕøತಿ ಹುಟ್ಟುಹಾಕುತ್ತಿದ್ದೀರಿ ಎಂಬುವುದನ್ನ ಮರೆಯಬೇಡಿ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.