ಟೀಮ್ ಇಂಡಿಯಾದ ಅನಿರೀಕ್ಷಿತ ಹೀರೋ ದೀಪಕ್ ಚಾಹರ್… ಗೆಲುವಿನ ದೀಪ ಬೆಳಗಲು ದ್ರಾವಿಡ್ ಸ್ಪೂರ್ತಿ..!
ದೀಪಕ್ ಚಾಹರ್ ಗೆ ಸ್ಪೂರ್ತಿ ತುಂಬಿದ ಕೋಚ್ ರಾಹುಲ್ ದ್ರಾವಿಡ್
ಗೆಲುವಿನ ಹೀರೋ ದೀಪಕ್ ಚಾಹರ್ ಗೆ ರಾಹುಲ್ ದ್ರಾವಿಡ್ ಹೇಳಿದ್ದೇನು ?
ಗೆಲುವಿಗಾಗಿ ರಾಹುಲ್ ದ್ರಾವಿಡ್ ಮಾಡಿರುವ ಪ್ಲಾನ್ ಏನು ?
ಬಹುಶಃ ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಬಹುತೇಕ ಸೋಲಿನ ಹಾದಿಯಲ್ಲಿ ಸಾಗುತ್ತಿತ್ತು. 160ಕ್ಕೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆಗ ಕೃನಾಲ್ ಪಾಂಡ್ಯ ಅವರನ್ನು ಜೊತೆ ಸೇರಿಕೊಂಡಿದ್ದು ವೇಗಿ ದೀಪಕ್ ಚಾಹರ್.
ಏಳನೇ ವಿಕೆಟ್ ಗೆ ಕೃನಾಲ್ ಪಾಂಡ್ಯ ಮತ್ತು ದೀಪಕ್ ಚಾಹರ್ 33 ರನ್ ಪೇರಿಸಿದ್ದರು. ಆಗ 35 ರನ್ ಗಳಿಸಿದ್ದ ಕೃನಾಲ್ ಎಲ್ ಬಿ ಬಲೆಗೆ ಬಿದ್ದು ಪೆವಿಲಿಯನ್ ದಾರಿ ಹಿಡಿದ್ರು.
ಇನ್ನೇನು ಸೋಲು ಖಚಿತ ಅಂತ ಕ್ರಿಕೆಟ್ ಅಭಿಮಾನಿಗಳು ಅಂದುಕೊಂಡಿದ್ದರು. ಯಾಕಂದ್ರೆ ಅಲ್ಲಿ ಗೆಲ್ಲುವ ನಿರೀಕ್ಷೆಗಳೇ ಇರಲಿಲ್ಲ. ಚಾಹರ್, ಭುವನೇಶ್ವರ್ ಕುಮಾರ್, ಕುಲದೀಪ್ ಯಾದವ್, ಯುಜುವೇಂದ್ರ ಚಾಹಲ್ ಅವರಿಂದ ತಂಡವನ್ನು ಸೋಲಿನಿಂದ ಪಾರು ಮಾಡುತ್ತಾರೆ ಅನ್ನೋ ನಂಬಿಕೆ ಕೂಡ ಇರಲಿಲ್ಲ.
ಆದ್ರೆ ದೀಪಕ್ ಚಾಹರ್ ಎಲ್ಲರ ನಿರೀಕ್ಷೆಗಳನ್ನು ಹುಸಿಗೊಳಿಸಿದ್ರು. ಟೀಮ್ ಇಂಡಿಯಾದ ಪಾಲಿಗೆ ಅನಿರೀಕ್ಷಿತ ಸ್ಟಾರ್ ಬ್ಯಾಟ್ಸ್ ಮೆನ್ ಆಗಿ ಹೊರಹೊಮ್ಮಿದ್ರು. ಹಾಗೇ ನೋಡಿದ್ರೆ ದೀಪಕ್ ಚಾಹರ್ ಅವರ ಈ ಹಿಂದಿನ ಪಂದ್ಯಗಳ ಸಾಧನೆ ಕೂಡ ಅಷ್ಟಕ್ಕಷ್ಟೇ. ಅವರು ನಾಲ್ಕು ಪಂದ್ಯಗಳಲ್ಲಿ ಗಳಿಸಿದ್ದು ಕೇವಲ 18 ರನ್. ಅದರಲ್ಲೂ ಗರಿಷ್ಠ ರನ್ ಅಂದ್ರೆ 12. ಹೀಗಾಗಿ ದೀಪಕ್ ಚಾಹರ್ ಪಂದ್ಯವನ್ನು ಗೆಲ್ಲಿಸಿಕೊಡುತ್ತಾರೆ ಅಂತ ಯಾರು ಕೂಡ ಅಂದುಕೊಂಡಿರಲಿಲ್ಲ.
ಆದ್ರೆ ದೀಪಕ್ ಚಾಹರ್ ಅವರಿಗೆ ಮನದ ಮೂಲೆಯಲ್ಲೊಂದು ವಿಶ್ವಾಸವಿತ್ತು. ಪ್ರತಿ ಎಸೆತಗಳನ್ನು ಎದುರಿಸುವಾಗಲೂ ಕೂಡ ಕೋಚ್ ರಾಹುಲ್ ದ್ರಾವಿಡ್ ಅವರ ಮಾತು ಮನದೊಳಗೆ ಗುಯ್ಗುಡುತ್ತಿತ್ತು. ಪ್ರತಿ ಎಸೆತಗಳನ್ನು ಆಡು. ಇದು ನಿನ್ನ ಕನಸಿನ ಇನಿಂಗ್ಸ್..ದೇಶಕ್ಕಾಗಿ ಗೆಲುವು ಸಾಧಿಸಲು ಇದಕ್ಕಿಂತ ಉತ್ತಮ ಅವಕಾಶ ಬೇರೊಂದು ಇಲ್ಲ ಎಂಬ ಮಾತುಗಳು ಪದೇ ಪದೇ ನನ್ನನ್ನು ಎಚ್ಚರಿಸುತ್ತಿದ್ದವು. ರಾಹುಲ್ ದ್ರಾವಿಡ್ ಗೆ ನನ್ನ ಬ್ಯಾಟಿಂಗ್ ಮೇಲೆ ನಂಬಿಕೆ ಇತ್ತು ಎಂದು ನಾನು ಭಾವಿಸಿದ್ದೇನೆ ಎಂದು ದೀಪಕ್ ಚಾಹರ್ ಹೇಳಿಕೊಳ್ಳುತ್ತಿದ್ದಾರೆ.
ಹೌದು, ದೀಪಕ್ ಚಾಹರ್ ಗೆ ರಾಹುಲ್ ದ್ರಾವಿಡ್ ಸ್ಪೂರ್ತಿ ತುಂಬಿದ್ದರು. ಅಷ್ಟೇ ಅಲ್ಲ, ದೀಪಕ್ ಚಾಹರ್ ಬ್ಯಾಟಿಂಗ್ ಬಗ್ಗೆಯೂ ರಾಹುಲ್ ಗೆ ನಂಬಿಕೆ ಇತ್ತು. ದೀಪಕ್ ಚಾಹರ್ ಭಾರತ ಎ ತಂಡದ ಪರವಾಗಿ ಆಡುತ್ತಿದ್ದಾಗ ರಾಹುಲ್ ದ್ರಾವಿಡ್ ಕೋಚ್ ಆಗಿದ್ದರು. ಅಲ್ಲದೆ ನೆಟ್ಸ್ ನಲ್ಲೂ ದೀಪಕ್ ಚಾಹರ್ ಬ್ಯಾಟಿಂಗ್ ಅಭ್ಯಾಸ ನಡೆಸಿ ಗಮನ ಸೆಳೆದಿದ್ದರು.
ಪರಿಣಾಮ ದೀಪಕ್ ಚಾಹರ್ ಮತ್ತು ಭುವನೇಶ್ವರ್ ಕುಮಾರ್ ಎಂಟನೇ ವಿಕೆಟ್ ಗೆ ಅಜೇಯ 84 ರನ್ ದಾಖಲಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ರು. ಭುವನೇಶ್ವರ್ ಕುಮಾರ್ ಅಜೇಯ 19 ರನ್ ಗಳಿಸಿದ್ರೆ, ದೀಪಕ್ ಚಾಹರ್ ಅಜೇಯ 69 ರನ್ ದಾಖಲಿಸಿದ್ದರು.
ಇದಕ್ಕು ಮೊದಲು ದೀಪಕ್ ಚಾಹರ್ ಬೌಲಿಂಗ್ ನಲ್ಲೂ ಮಿಂಚುಹರಿಸಿದ್ದರು. ಮೂರು ವಿಕೆಟ್ ಕಬಳಿಸಿದ್ದ ಭುವನೇಶ್ವರ್ ಗೆ ದೀಪಕ್ ಚಾಹರ್ ಕೂಡ ಎರಡು ವಿಕೆಟ್ ಉರುಳಿಸಿ ಉತ್ತಮ ಸಾಥ್ ನೀಡಿದ್ರು. ಅಲ್ಲದೆ ಲಂಕಾದ ರನ್ ದಾಹಕ್ಕೂ ಬ್ರೇಕ್ ಹಾಕಿದ್ರು. ಮತ್ತೊಂದೆಡೆ ಯುಜುವೇಂದ್ರ ಚಾಹಲ್ ಕೂಡ ಮೂರು ವಿಕೆಟ್ ಪಡೆದಿದ್ದರು.