ಪತ್ನಿಯ ಶೀಲ ಶಂಕಿಸಿ ಕೊಲೆಗೈದ ಪತಿ
ರಾಮನಗರ: ಪತ್ನಿಯ ಶೀಲ ಶಂಕಿಸಿ ಪತಿ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ರಾಮನಗರದ ರೆಹಮಾನಿಯಾ ಬಡಾವಣೆಯಲ್ಲಿ ನಡೆದಿದೆ.
ಆಟೋ ಚಾಲಕ ಜಹೀರ್ ಪಾಷ ಕೃತ್ಯ ಎಸಗಿದ ಆರೋಪಿ. ಪತ್ನಿಯ ಶೀಲ ಶಂಕಿಸಿ ಪತಿ ಶನಿವಾರ ರಾತ್ರಿ ಪತ್ನಿಯ ಕುತ್ತಿಗೆಗೆ ದಾರದಿಂದ ಬಿಗಿದು, ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ನಡೆದದ್ದೇನು?: ಜಹೀರ್ ಪಾಷಾ ಬೆಂಗಳೂರಿನಲ್ಲಿ ಆಟೋ ಚಾಲಕನಾಗಿದ್ದು, ದಂಪತಿಗಳು ಬೆಂಗಳೂರಿನಲ್ಲಿ ವಾಸಗಿದ್ದರು. ಆದರೆ20 ದಿನಗಳ ಹಿಂದೆ ದಂಪತಿ ರಾಮನಗರ ಟೌನಿನ ರೆಹಮಾನಿಯಾ ಬಡಾವಣೆಯಲ್ಲಿ ಬಾಡಿಗೆ ಮನೆ ಪಡೆದು ವಾಸವಾಗಿದ್ದರು.
ತನ್ನ 33 ವರ್ಷದ ಪತ್ನಿಯೊಂದಿಗೆ ವಾಸವಿದ್ದ ಜಹೀರ್ ಪಾಷಾ, ಅನೈತಿಕ ಸಂಬಂಧ ಹೊಂದಿದ್ದಾಳೆಂದು ಅನುಮಾನಗೊಂಡು ಪ್ರತಿನಿತ್ಯ ಜಗಳವಾಡುತ್ತಿದ್ದನಂತೆ. ಮನೆಯಲ್ಲಿ ಶನಿವಾರ ತಡರಾತ್ರಿ ಇಬ್ಬರ ನಡುವೆ ಮತ್ತೆ ಜಗಳ ನಡೆದಿದೆ. ಈ ಸಂದರ್ಭದಲ್ಲಿ ಆರೋಪಿ ಪ್ಲಾಸ್ಟಿಕ್ ದಾರದಿಂದ ಹೆಂಡತಿಯ ಕುತ್ತಿಗೆ ಬಿಗಿದಿದ್ದಲ್ಲದೆ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಮನಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.