ಎಸ್ ಐಟಿ ಮೇಲೆ ನನಗೆ ವಿಶ್ವಾಸವಿಲ್ಲ : ಯತ್ನಾಳ್
ವಿಜಯಪುರ : ರಮೇಶ್ ಜಾರಕಿಹೊಳಿ ಅವರ ಕೇಸ್ ನ್ನು ಸಿಬಿಐಗೆ ಕೊಡಬೇಕು. ಸಿಬಿಐನಿಂದ ಮಾತ್ರ ಪ್ರಕರಣ ತಾರ್ಕಿಕ ಅಂತ್ಯ ಕಾಣಲು ಸಾಧ್ಯ. ಎಸ್ ಐಟಿ ಮೇಲೆ ನನಗೆ ವಿಶ್ವಾಸ ಇಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್, ಸಿಡಿ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ, ಕರ್ನಾಟಕದಲ್ಲಿ ದೊಡ್ಡ ಸಿಡಿ ಗ್ಯಾಂಗ್ ಇದೆ. ಮೊದಲು ಕೆಲಸ ಇದೆ ಎಂದು ಶಾಸಕರನ್ನು ಪರಿಚಯ ಮಾಡಿಕೊಳ್ಳುತ್ತಾರೆ. ಸಲುಗೆ ಬೆಳೆಸಿಕೊಂಡು ಸಿಡಿ ಮಾಡಿ, ಬ್ಲ್ಯಾಕ್ ಮೇಲ್ ಮಾಡುತ್ತಾರೆ. ರಾಜಕಾರಣಿಗಳು, ಅಧಿಕಾರಿಗಳು, ಸಿನಿಮಾ ಸ್ಟಾರ್ ಗಳನ್ನು ಬ್ಲ್ಯಾಕ್ ಮೇಲ್ ಮಾಡುವ ಗ್ಯಾಂಗ್ ಇದೆ. ಇನ್ನೂ 400 ಸಿಡಿಗಳಿವೆ ಎಂದು ವಿಧಾನಸೌಧದಲ್ಲಿ ಮೊಗಸಾಲೆಯಲ್ಲಿ ಮಾತನಾಡುತ್ತಿದ್ದಾರೆ. ಸಿಡಿ ಮಾಡಿ, ಬ್ಲ್ಯಾಕ್ ಮೇಲ್ ಮಾಡುವ ಹೊಸತರದ ಬಿಜಿನೆಸ್ ಈಗ ಶುರುವಾಗಿದೆ. ಹೀಗಾಗಿ ರಮೇಶ್ ಜಾರಕಿಹೊಳಿ ಅವರ ಕೇಸ್ ನ್ನು ಸಿಬಿಐಗೆ ಕೊಡಬೇಕು ಎಂದು ಒತ್ತಾಯಿಸಿದರು.
ಎಸ್ ಐಟಿ ಮೇಲೆ ನನಗೆ ವಿಶ್ವಾಸವಿಲ್ಲ. ಎಸ್ ಐಟಿ ಸಿಎಂ, ಗೃಹ ಸಚಿವರ ಅಧೀನದಲ್ಲಿದೆ. ಯಾರನ್ನು ಬೇಕಾದರೂ ಸಿಲುಕಿಸುತ್ತಾರೆ, ಬಿಡಿಸುತ್ತಾರೆ ಎಂದು ಆರೋಪಿಸಿ ಡ್ರಗ್ಸ್ ಕೇಸ್ ನಲ್ಲೂ ಹೀಗೆ ಆಗಿದೆ ಎಂದು ಹೊಸ ಬಾಂಬ್ ಸಿಡಿಸಿದರು.