ಚಾಮರಾಜನಗರ : ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ (Congress) ಅಧಿಕಾರಕ್ಕೆ ಬಂದರೆ ಬಿಜೆಪಿ (BJP) ಸರ್ಕಾರ ಮಾಡಿರುವ ಲೂಟಿ ದುಡ್ಡನ್ನು ಮರಳಿ ಜನರಿಗೆ ಕೊಡುತ್ತೇವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಹೇಳಿದ್ದಾರೆ.
ಪ್ರಚಾರದ ಸಂದರ್ಭದಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವದ ಪ್ರಕಾರ ಆಯ್ಕೆಯಾಗಿರುವ ಸರ್ಕಾರವಲ್ಲ. ಶಾಸಕರನ್ನು ಖರೀದಿಸಿ ಕದ್ದು ರಚನೆ ಮಾಡಿರುವ ಸರ್ಕಾರ. ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮಗನ ಬಳಿ 8 ಕೋಟಿ ರೂ. ಸಿಕ್ಕಿತ್ತು. ಪಿಎಸ್ ಐ ಹಗರಣ, ಉಪನ್ಯಾಸಕರ ನೇಮಕಾತಿ ಹಗರಣ ಸೇರಿದಂತೆ ಹಗರಣಗಳ ಪಟ್ಟಿಯೇ ಇದೆ. ಆದರೆ ಕರ್ನಾಟಕಕ್ಕೆ ಬರುತ್ತಿರುವ ಮೋದಿ ಈ ಭ್ರಷ್ಟಾಚಾರದ ಕುರಿತು ಮಾತನಾಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಎಲ್ಲ ನಾಯಕರ ಹೆಸರನ್ನು ಹೇಳುತ್ತದೆ. ಆದರೆ ಬಿಜೆಪಿ ನರೇಂದ್ರ ಮೋದಿ ಅವರ ಹೆಸರನ್ನು ಬಿಟ್ಟು ಬೇರೆ ಹೆಸರು ಹೇಳುತ್ತಿಲ್ಲ. ಯಡಿಯೂರಪ್ಪ ಅಂತಹ ನಾಯಕರ ಹೆಸರನ್ನು ಹೇಳುತ್ತಿಲ್ಲ. ಮೋದಿಯವರೇ ನಿಮ್ಮ ಬಗ್ಗೆ ಹೇಳಿಕೊಳ್ಳುವುದನ್ನು ನಿಲ್ಲಿಸಿ. ಜನರ ಬಗ್ಗೆ ಮಾತನಾಡಲು ಶುರು ಮಾಡಿ ಟಾಂಗ್ ಕೊಟ್ಟಿದ್ದಾರೆ.