ನ್ಯೂಜಿಲೆಂಡ್ ವಿರುದ್ಧದ ಟಿ-20 ಸರಣಿ -ಟೀಮ್ ಇಂಡಿಯಾ ತಂಡದ ಆಯ್ಕೆ ಬಗ್ಗೆ ಟೀಕೆ..!
ಟಿ20 ವಿಶ್ವಕಪ್ ಮುಗಿದ ಬೆನ್ನಲ್ಲೇ ಟೀಮ್ ಇಂಡಿಯಾ ಭವಿಷ್ಯದ ತಂಡ ಕಟ್ಟುವ ಕೆಲಸದಲ್ಲಿ ನಿರತವಾಗಿದೆ. ರಾಹುಲ್ ದ್ರಾವಿಡ್ ರವಿಶಾಸ್ತ್ರಿ ಜಾಗದಲ್ಲಿ ಕೋಚ್ ಆಗಿ ಎಂಟ್ರಿ ಕೊಡುತ್ತಿದ್ದಾರೆ. ವಿರಾಟ್ ಕೊಹ್ಲಿಯ ಹೆಗಲ ಮೇಲಿದ್ದ ಟಿ20 ಕ್ಯಾಪ್ಟನ್ಸಿ ರೋಹಿತ್ ಹೆಗಲಿಗೆ ವರ್ಗಾವಣೆಯಾಗಿದೆ. ನ್ಯೂಜಿಲೆಂಡ್ ವಿರುದ್ಧದ ಸರಣಿಯೊಂದಿಗೆ ಟೀಮ್ ಇಂಡಿಯಾದ ಹೊಸ ಜರ್ನಿ ಆರಂಭವಾಗಲಿದೆ.
ನವೆಂಬರ್ 17 ರಿಂದ ನ್ಯೂಜಿಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯ ನಡೆಯಲಿದೆ. ನವೆಂಬರ್ 17, 19 ಮತ್ತು 21ರಂದು ಜೈಪುರ, ರಾಂಚಿ ಮತ್ತು ಕೋಲ್ಕತಾದಲ್ಲಿ ಉಳಿದ ಮೂರು ಪಂದ್ಯಗಳು ನಡೆಯಲಿವೆ. ನೂತನ ಕೋಚ್, ನೂತನ ನಾಯಕ, ಯುವ ಆಟಗಾರರಿಂದ ಕೂಡಿರುವ ಭಾರತ ತಂಡ ತವರಿನಲ್ಲಿ ಅಗ್ನಿ ಪರೀಕ್ಷೆಗೆ ಇಳಿಯಲಿದೆ.
ಟಿ20 ಸರಣಿಗೆ ಟೀಮ್ ಇಂಡಿಯಾವನ್ನು ಬಿಸಿಸಿಐ ಪ್ರಕಟ ಮಾಡಿದೆ. ಕೆಲವೊಂದು ಅಚ್ಚರಿಯ ಆಯ್ಕೆ ಕೂಡ ಇದೆ. ಆದರೆ ಟಿ20 ಸರಣಿಗೆ ಐದು ಓಪನರ್ಗಳು ಯಾಕೆ ಅನ್ನುವ ಪ್ರಶ್ನೆ ಎದ್ದಿದೆ.
ಕಳೆದ 6 ತಿಂಗಳಿಂದ ಬಯೋ ಬಬಲ್ ಜೀವನ ನಡೆಸಿ ದಣಿಸಿರುವ ಅನುಭವಿಗಳಾದ ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಆಲ್ರೌಂಡರ್ ರವೀಂದ್ರ ಜಡೇಜಾ ಈ ಸರಣಿಯಿಂದ ವಿಶ್ರಾಂತಿ ಪಡೆದಿದ್ದಾರೆ. ಇವರ ಜಾಗಕ್ಕೆ ಕೆಲ ಹೊಸ ಆಟಗಾರರು ಸ್ಥಾನ ಪಡೆದಿದ್ದಾರೆ. ಹೀಗೆ ಆಯ್ಕೆಯಾಗಿರುವವರ ಪೈಕಿ ಐದು ಜನ ಓಪನರ್ಗಳೇ ಇದ್ದಾರೆ ಎಂಬುದು ವಿಶೇಷ.
ರೋಹಿತ್ ಶರ್ಮಾ, ಕೆಎಲ್ ರಾಹುಲ್, ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್, ವೆಂಕಟೇಶ್ ಅಯ್ಯರ್. ಹೀಗೆ ಐದು ಜನ ಆರಂಭಿಕರನ್ನು ಬಿಸಿಸಿಐ ಆಯ್ಕೆ ಮಾಡಿದೆ. ಇವರೆಲ್ಲ ಯಾವ ಸ್ಥಾನದಲ್ಲಿ ಆಡುತ್ತಾರೆ?, ರಾಹುಲ್-ರೋಹಿತ್ ಓಪನರ್ ಆದರೆ, ರುತುರಾಜ್ ಕತೆ ಏನು ಅನ್ನುವ ಪ್ರಶ್ನೆಯೂ ಇದೆ. ವಿಶ್ವಕಪ್ನಲ್ಲೂ ಕಿಶನ್ಗೆ ಓಪನಿಂಗ್ ಮಾಡುವ ಅವಕಾಶ ಸಿಕ್ಕಿತ್ತು. ಹಾಗಿದ್ದರೆ ವೆಂಕಟೇಶ್ ಅಯ್ಯರ್ ಯಾವ ಜಾಗದಲ್ಲಿ ಆಡುತ್ತಾರೆ ಅನ್ನುವ ಪ್ರಶ್ನೆ ಯಿದೆ. ಒಟ್ಟಿನಲ್ಲಿ ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಟೀಮ್ ಇಂಡಿಯಾದ ಆಯ್ಕೆ ಬಗ್ಗೆ ಚರ್ಚೆಗಳಿವೆ. ಸರಣಿ ಏನಾಗುತ್ತೆ ಅನ್ನುವುದನ್ನು ಕಾದು ನೋಡಬೇಕಿದೆ.
ಟಿ20: ಭಾರತ ತಂಡ:
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಋತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ಕೀಪರ್), ಇಶಾನ್ ಕಿಶನ್ (ವಿಕೆಟ್ಕೀಪರ್), ವೆಂಕಟೇಶ್ ಅಯ್ಯರ್, ಯುಜ್ವೇಂದ್ರ ಚಹಲ್, ಆರ್ ಅಶ್ವಿನ್, ಅಕ್ಷರ್ ಪಟೇಲ್, ಅವೇಶ್ ಖಾನ್, ಭುವನೇಶ್ವರ್ ಕುಮಾರ್, ದೀಪಕ್ ಚಹರ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್.