ಚಾಕೊಲೇಟ್ ಖರೀದಿಸಲು ಭಾರತಕ್ಕೆ ನುಸುಳಿದ ಬಾಂಗ್ಲಾ ಬಾಲಕ
ತನ್ನಿಷ್ಟದ ಚಾಕೊಲೇಟ್ ಖರೀದಿಸಲು ಭಾರತದ ಗಡಿಯಲ್ಲಿ ಅತಿಕ್ರಮ ಪ್ರವೇಶ ಮಾಡಿದ್ದ ಬಾಂಗ್ಲಾದೇಶದ ಬಾಲಕನನ್ನು ಭಾರತೀಯ ಭದ್ರತಾ ಪಡೆಗಳು ಬಂದಿಸಿವೆ.
ತ್ರಿಪುರಾ ರಾಜ್ಯದ ಸಿಬಗಿಜಾಲಾ ಜಿಲ್ಲೆಯ ಪ್ರದೇಶದಲ್ಲಿ ಅತಿಕ್ರಮ ಪ್ರವೇಶ ಮಾಡಿದ ಆರೋಪದ ಮೇಲೆ ಬಾಂಗ್ಲಾದೇಶದ ಹುಡುಗ ಹುಸೇನ್ನನ್ನು ಮೇ 13 ರಂದು ಬಂಧಿಸಲಾಗಿತ್ತು. ಬಾಂಗ್ಲಾದೇಶದ ಗೊಮಿಲ್ಲಾ ಜಿಲ್ಲೆಯ ಸಾಲ್ಟಾ ನದಿಯ ಪಕ್ಕದ ಹಳ್ಳಿಯಿಂದ ಆಗಾಗ ಚಾಕೊಲೇಟ್ ಖರೀದಿಸಲು ಭಾರತಕ್ಕೆ ನುಸುಳುತ್ತಿರುವುದು ಕಂಡು ಬಂದಿದೆ.
ಭಾರತ-ಬಾಂಗ್ಲಾದೇಶದ ಗಡಿಯಲ್ಲಿರುವ ಸಾಲ್ಟಾ ನದಿಯನ್ನು ಈಜುತ್ತಿದ್ದ “ಹುಸೇನ್” ಗಡಿ ಬೇಲಿಯಲ್ಲಿದ್ದ ರಂಧ್ರದ ಮೂಲಕ ಭಾರತದ ಪ್ರದೇಶಕ್ಕೆ ನುಸುಳಿ ಚಾಕೊಲೇಟ್ಗಳನ್ನು ಖರೀದಿಸಿ ನಂತರ ತನ್ನ ಹಳ್ಳಿಗೆ ಮರಳುತ್ತಿದ್ದ.
ಈ ವೇಳೆ ಸೂಕ್ತ ದಾಖಲೆಗಳಿಲ್ಲದೆ ಭಾರತ ಪ್ರವೇಶಿಸಿದ್ದಕ್ಕಾಗಿ ಆತನನ್ನು ಬಂಧಿಸಲಾಗಿದ್ದು, ವಿಚಾರಣೆ ಬಳಿಕ ಬಾಲಕನನ್ನು ಸ್ಥಳೀಯ ಪೊಲೀಸರಿಗೆ ಒಪ್ಪಿಸಲಾಗಿದೆ. ಇದರ ಬೆನ್ನಲ್ಲೇ ನ್ಯಾಯಾಲಯ ಬಾಲಕನನ್ನು 15 ದಿನಗಳ ಕಾಲ ಕಸ್ಟಡಿಗೆ ನೀಡಿದೆ. ಆತನ ಕುಟುಂಬದವರಾರೂ ಇನ್ನೂ ಭಾರತೀಯ ಅಧಿಕಾರಿಗಳನ್ನು ಸಂಪರ್ಕಿಸಿಲ್ಲ.
ತ್ರಿಪುರದ ಸಿಬಗಿಜಾಲಾ ಜಿಲ್ಲೆಯ ಸೋನಮುರಾ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಗಡಿ ಬೇಲಿಯಲ್ಲಿ ಅಲ್ಲಲ್ಲಿ ರಂಧ್ರಗಳು ಕಂಡುಬರುತ್ತವೆ. ಸಂಕೀರ್ಣ ಸ್ಥಳಾಕೃತಿಯ ಕಾರಣ, ಕೆಲವು ಪ್ರದೇಶಗಳಲ್ಲಿ ಬೇಲಿಗಳನ್ನು ನಿರ್ಮಿಸಲು ಸಾಧ್ಯವಾಗಲಿಲ್ಲ. ಇದನ್ನು ಬಳಸಿಕೊಂಡು ಭಾರತದ ಭಾಗದಲ್ಲಿ ವಸ್ತುಗಳನ್ನು ಖರೀದಿಸಲು ಬಾಂಗ್ಲಾ ಜನರು ನುಸುಳುತ್ತಿರುತ್ತಾರೆ. ಇದೇ ವೇಳೆ ಅಕ್ರಮ ಚಟುವಟಿಕೆಗಳಲ್ಲಿ ತೊಡಗುವ ನುಸುಳುಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಬಾಲಕ ಪದೇ ಪದೇ ಅತಿಕ್ರಮಣದಲ್ಲಿ ತೊಡಗಿದ್ದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಗಡಿ ಭದ್ರತಾ ಪಡೆ ಮೂಲಗಳು ತಿಳಿಸಿವೆ.