ಕೆಕೆಆರ್ ತಂಡದ ಕುಲದೀಪ್ ಯಾದವ್ ಗೆ ಗಾಯ.. ಐಪಿಎಲ್ ನಿಂದ ಹೊರಬಿದ್ದ ಕುಲದೀಪ್
ಕೆಕೆಆರ್ ತಂಡದ ಸ್ಪಿನ್ನರ್ ಕುಲದೀಪ್ ಯಾದವ್ ಅವರ 2021ರ ಸಾಲಿನ ಐಪಿಎಲ್ ಸವಾರಿಗೆ ಬ್ರೇಕ್ ಬಿದ್ದಿದೆ. ಮೊಣ ಕಾಲಿನ ನೋವಿನಿಂದ ಬಳಲುತ್ತಿರುವ ಕುಲದೀಪ್ ಯಾದವ್ ಹೆಚ್ಚಿನ ಚಿಕಿತ್ಸೆಗಾಗಿ ದುಬೈನಿಂದ ಭಾರತಕ್ಕೆ ಆಗಮಿಸಿದ್ದಾರೆ.
ಹೀಗಾಗಿ ಕುಲದೀಪ್ ಯಾದವ್ ಅವರು 2021ರ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಕುಲದೀಪ್ ಯಾದವ್ ಅವರ ಮೊಣಕಾಲಿನ ಗಾಯ ಗಂಭೀರವಾಗಿದೆ. ಅಲ್ಲದೆ ಮೊಣಕಾಲಿನ ನೋವು ಗುಣಮುಖಗೊಳ್ಳಲು ಸಾಕಷ್ಟು ಸಮಯದ ಅವಶ್ಯಕತೆ ಇದೆ. ಹೆಚ್ಚಿನ ಚಿಕಿತ್ಸೆಗಾಗಿ ಅವರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯನ್ನು ಸೇರಿಕೊಳ್ಳಲಿದ್ದಾರೆ. ಎನ್ ಸಿಎ ನಲ್ಲಿ ಫಿಸಿಯೋಥೆರಪಿಗೂ ಒಳಪಡಲಿದ್ದಾರೆ. ಬಳಿಕ ಅವರು ನೆಟ್ಸ್ ನಲ್ಲಿ ತಾಲೀಮು ನಡೆಸಲಿದ್ದಾರೆ.
ಕಳೆದ ಆರು ತಿಂಗಳ ಹಿಂದೆಯಷ್ಟೇ ಕುಲದೀಪ್ ಯಾದವ್ ಗಾಯದಿಂದ ಬಳಲುತ್ತಿದ್ದರು. ಅಲ್ಲದೆ ಶಸ್ತ್ರ ಚಿಕಿತ್ಸೆಗೂ ಒಳಪಟ್ಟಿದ್ದರು. ಆರು ತಿಂಗಳ ಬಳಿಕ ಮತ್ತೆ ಮೈದಾನದಲ್ಲಿ ಕಾಣಿಸಿಕೊಂಡಿದ್ದ ಕುಲದೀಪ್ ಯಾದವ್ ಇದೀಗ ಮತ್ತೆ ಗಾಯಗೊಂಡಿದ್ದಾರೆ. ಈ ಬಾರಿಯ ಐಪಿಎಲ್ ಟೂರ್ನಿಯ ವೇಳೆ ಅಭ್ಯಾಸ ನಡೆಸುತ್ತಿರುವಾಗ ಮೊಣಕಾಲಿನ ನೋವಿಗೆ ತುತ್ತಾಗಿದ್ದಾರೆ. ಹೀಗಾಗಿ ಅವರು ಐಪಿಎಲ್ ನ ಇನ್ನುಳಿದ ಪಂದ್ಯಗಳಿಗೆ ಲಭ್ಯವಿರುವುದಿಲ್ಲ ಎಂದು ಕೆಕೆಆರ್ ಟೀಮ್ ಮ್ಯಾನೇಜ್ ಮೆಂಟ್ ತಿಳಿಸಿದೆ.
ಕುಲದೀಪ್ ಯಾದವ್ ಅವರು ಮುಂಬರುವ ರಣಜಿ ಟೂರ್ನಿಯಲ್ಲಿ ಆಡುವುದು ಕೂಡ ಅನುಮಾನವಾಗಿದೆ. 26ರ ಹರೆಯದ ಕುಲದೀಪ್ ಯಾದವ್ ಅವರು ಇಲ್ಲಿಯವರೆಗೆ ಭಾರತದ ಪರ ಏಳು ಟೆಸ್ಟ್ ಪಂದ್ಯ, 65 ಏಕದಿನ ಪಂದ್ಯ ಹಾಗೂ 23 ಟಿ-ಟ್ವೆಂಟಿ ಪಂದ್ಯಗಳನ್ನು ಆಡಿದ್ದು, ಒಟ್ಟು 174 ವಿಕೆಟ್ ಗಳನ್ನು ಉರುಳಿಸಿದ್ದರು.
2019ರ ಐಪಿಎಲ್ ಟೂರ್ನಿಯ ನಂತರ ಕುಲದೀಪ್ ಯಾದವ್ ಫಾರ್ಮ್ ಕೂಡ ಕಳೆದುಕೊಂಡಿದ್ದರು. ಹೀಗಾಗಿ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಲು ಕೂಡ ವಿಫಲರಾಗುತ್ತಿದ್ದರು. ಟೀಮ್ ಇಂಡಿಯಾದ ಟ್ರಂಪ್ ಕಾರ್ಡ್ ಬೌಲರ್ ಆಗಿದ್ದ ಕುಲದೀಪ್ ಯಾದವ್ ಚಾಹಲ್ ಜೊತೆ ಸೇರಿಕೊಂಡು ಎದುರಾಳಿ ತಂಡಕ್ಕೆ ದುಸ್ವಪ್ನವಾಗಿ ಕೂಡ ಕಾಡುತ್ತಿದ್ದರು. ಕುಲ್ಚಾ ಗ್ಯಾಂಗ್ ನ ಸದಸ್ಯರಾಗಿದ್ದ ಕುಲದೀಪ್ ಯಾದವ್ ಅವರು ಧೋನಿ ತಂಡದಲ್ಲಿರುವಷ್ಟು ದಿನ ತಂಡಕ್ಕೆ ಪರಿಣಮಕಾರಿಯಾಗಿ ದಾಳಿ ನಡೆಸುತ್ತಿದ್ದರು. ಧೋನಿಯ ಸಲಹೆ, ಮಾರ್ಗದರ್ಶನದ ಜೊತೆಗೆ ಸಿಟ್ಟನ್ನು ಸಹಿಸಿಕೊಂಡು ಟೀಮ್ ಇಂಡಿಯಾಗೆ ಮಹತ್ವದ ಗೆಲುವನ್ನು ತಂದುಕೊಡುವಲ್ಲಿ ಕುಲದೀಪ್ ಯಾದವ್ ಪಾತ್ರ ವಹಿಸುತ್ತಿದ್ದರು.
ಕಳೆದ ಶ್ರೀಲಂಕಾ ಪ್ರವಾಸದಲ್ಲಿ ಟೀಮ್ ಇಂಡಿಯಾ ಪರ ಆಡಿದ್ದ ಕುಲದೀಪ್ ಯಾದವ್, ಏಕದಿನ ಮತ್ತು ಟಿ-ಟ್ವೆಂಟಿ ಪಂದ್ಯಗಳಲ್ಲಿ ತಲಾ ಎರಡು ವಿಕೆಟ್ ಗಳನ್ನು ಕಬಳಿಸಿದ್ದರು. ಆದ್ರೆ ಇನ್ನುಳಿದ ತಲಾ ಒಂದೊಂದು ಪಂದ್ಯಗಳಲ್ಲಿ ವಿಕೆಟ್ ಪಡೆದುಕೊಂಡಿರಲಿಲ್ಲ.