ಚೆನ್ನೈನಲ್ಲಿ ಭೀಮಾರ್ಜುನರ ಆರ್ಭಟ : ಬೆಚ್ಚಿಬಿದ್ದ ಮಾರ್ಗನ್ ಹುಡುಗರು
ಚೆನ್ನೈ : ಚೆಪಾಕ್ ಅಂಗಳದಲ್ಲಿ ಆರ್ ಸಿಬಿಯ ಭೀಮಾರ್ಜುನರು ಅಬ್ಬರಿಸಿ ಬೊಬ್ಬರಿದಿದ್ದಾರೆ. ಆರ್ ಸಿಬಿಯ ಭೀಮಾರ್ಜುನ ಆರ್ಭಟಕ್ಕೆ ಕೆಕೆಆರ್ ಬೌಲರ್ ಗಳು ದಿಕ್ಕಾಪಾಲಾಗಿದ್ದಾರೆ. ಚೆನ್ನೈ ಅಂಗಳದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಆರ್ ಸಿಬಿಗೆ ಉತ್ತಮ ಆರಂಭ ಸಿಗಲಿಲ್ಲ. ವಿರಾಟ್, ಪಟಿದಾರ್ ಒಂದೇ ಓವರ್ ನಲ್ಲಿ ಕ್ರೀಸ್ ನಿಂದ ಹೊರನಡೆದರು. ಈ ಸಂಕಷ್ಟದ ಸ್ಥಿತಿಯಲ್ಲಿ ಕ್ರೀಸ್ ಗೆ ಇಳಿದ ಮ್ಯಾಕ್ಸ್ ವೆಲ್ ಅರ್ಜುನನಂತೆ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ್ರು. ಅಲ್ಲದೆ ಪಡಿಕಲ್ ( 25) ಜೊತೆಗೂಡಿ 89 ರನ್ ಗಳ ಜೊತೆಯಾಟವಾಡಿದರು.
ಇದಾದ ಬಳಿಕ ಕ್ರೀಸ್ ಗೆ ಬಂದ ಆರ್ ಸಿಬಿಯ ಭೀಮ ಎಬಿಡಿ ಹೊಡಿಬಡಿ ಆಟಕ್ಕೆ ಮುಂದಾದ್ರು. ಒಂದು ಕಡೆ ಮ್ಯಾಕ್ಸ್ ವೆಲ್ ಅರ್ಜುನನಂತೆ ಮಿಂಜಿನಂತೆ ಮಾರ್ಗನ್ ಬೌಲರ್ ಗಳ ಮೇಲೆ ಮುಗಿಬಿದ್ದರೇ ಮತ್ತೊಂದು ಕಡೆ ಎಬಿಡಿ ಭೀಮನಂತೆ ಕೆಕೆಆರ್ ಬೌಲರ್ ಗಳ ಮೇಲೆ ದಂಡಯಾತ್ರೆ ನಡೆಸಿದರು. ಈ ಮಧ್ಯೆ ಮ್ಯಾಕ್ಸ್ ವೆಲ್ 78 ರನ್ ಗಳಿಸಿ ಔಟ್ ಆದರು. ಇದಾದ ನಂತರ ಮತ್ತಷ್ಟು ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿದ ಡೆವಿಲಿಯರ್ಸ್ ಚೆಂಡಿಗೆ ಅಷ್ಟದಿಕ್ಕುಗಳ ಪರಿಚಯ ಮಾಡಿಕೊಟ್ಟರು. ಅಂತಿಮವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 204 ರನ್ ಗಳಿಸಿತು.