ಐಪಿಎಲ್ ನ ಕೊನೆ ದಿನದವರೆಗೂ ಆರ್ ಸಿಬಿ ಪರ ಆಡುವೆ : ವಿರಾಟ್ Virat Kohli saaksha tv
ದುಬೈ : ನಾನು ಐಪಿಎಲ್ನಲ್ಲಿ ಆಡುವ ಕೊನೆಯ ದಿನದವರೆಗೂ ಆರ್ಸಿಬಿಯಲ್ಲಿಯೇ ಇರುತ್ತೇನೆ ಎಂದು ಸೋಮವಾರ ಆರ್ ಸಿಬಿಯ ನಾಯಕನಾಗಿ ಕೊನೆಯ ಪಂದ್ಯವನ್ನಾಡಿದ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಈ ಬಾರಿಯ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉತ್ತಮ ಪ್ರದರ್ಶನ ನೀಡಿದರೂ ಕಪ್ ಗೆಲ್ಲುವಲ್ಲಿ ಎಡವಿದೆ. ಸೋಮವಾರ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ನಾಲ್ಕು ವಿಕೆಟ್ ಗಳಿಂದ ಸೋಲನುಭವಿಸಿದೆ.
ಈ ಮೂಲಕ ಆರ್ ಸಿಬಿ ಟೂರ್ನಿಯಿಂದ ಹೊರಬಿದ್ದಿದೆ. ಮುಖ್ಯವಾಗಿ ಇದು ವಿರಾಟ್ ಕೊಹ್ಲಿಗೆ ಅತಿ ಮುಖ್ಯವಾದ ಆವೃತ್ತಿಯಾಗಿತ್ತು. ಯಾಕೆಂದರೇ ವಿರಾಟ್ ನಾಯಕತ್ವದಲ್ಲಿ ಆರ್ ಸಿಬಿ ಕಣಕ್ಕಿಳಿಯುವುದು ಇದೇ ಕೊನೆ.
ಅಂದರೇ ಮುಂದಿನ ಆವೃತ್ತಿಯಿಂದ ವಿರಾಟ್ ಆರ್ ಸಿಬಿಯ ನಾಯಕನಾಗಿರುವುದಿಲ್ಲ. ಹೀಗಾಗಿ ಈ ಬಾರಿ ಕಪ್ ಗೆಲ್ಲಲೇಬೇಕು ಎಂಬ ಹಠದಲ್ಲಿ ಆರ್ ಸಿಬಿ ಇತ್ತು. ಆದ್ರೆ ಅದು ಸಾಧ್ಯವಾಗಿಲ್ಲ.
ಪಂದ್ಯದ ಸೋಲಿನ ಬಳಿಕ ಪ್ರತಿಕ್ರಿಯಿಸಿದ ವಿರಾಟ್, ನಾಯಕನಾಗಿ ಭಾರತ ತಂಡದಲ್ಲಿ ಕಾರ್ಯ ನಿರ್ವಹಿಸಿದಂತೆ ಐಪಿಎಲ್ ನಲ್ಲೂ ಆರ್ ಸಿಬಿಗಾಗಿ ನನ್ನ ಕೈಲಾದಷ್ಟು ಭಾಗಿಯಾಗಿದ್ದೇನೆ.
ಬೆಂಗಳೂರು ತಂಡದಲ್ಲಿ ಆಡುವ ಯುವಕರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಲ್ಲದೆ, ನಂಬಿಕೆಯೊಂದಿಗೆ ಆಡುವ ಸಂಸ್ಕೃತಿಯನ್ನು ಸೃಷ್ಟಿಸಲು ಯತ್ನಿಸಿದ್ದೇನೆ ಎಂದರು.
ಇದೇ ವೇಳೆ ನಾಯಕತ್ವದ ಬಗ್ಗೆ ಮಾತನಾಡಿ, ಮುಂಬರುವ ದಿನಗಳಲ್ಲಿ ತಂಡವನ್ನು ಯಾರು ಮುನ್ನಡೆಸುತ್ತಾರೋ ಅವರೊಂದಿಗೆ ಟೀಂ ಬಲಪಡಿಸುವ ಹಾಗೂ ಪುನರ್ ರಚಿಸುವ ಕಾರ್ಯದಲ್ಲಿ ಮುಂದಿನ ಮೂರು ವರ್ಷಗಳ ಕಾಲ ನೆರವಾಗಲು ಬಯಸುತ್ತೇನೆ.
ಮುಂದಿನ ಆವೃತ್ತಿಗಳಲ್ಲಿ ಖಂಡಿತವಾಗಿಯೂ ಆರ್ಸಿಬಿ ತಂಡದಲ್ಲಿಯೇ ಮುಂದುವರೆಯುತ್ತೇನೆ. ಬೇರೆ ಯಾವ ತಂಡದಲ್ಲಿಯೂ ಕಾಣಿಸಿಕೊಳ್ಳಲು ಬಯಸುವುದಿಲ್ಲ.
ಲೌಕಿಕ ಸುಖಗಳಿಗಿಂತ ನನಗೆ ನಿಷ್ಠೆಯೇ ಮುಖ್ಯ. ನಾನು ಐಪಿಎಲ್ನಲ್ಲಿ ಆಡುವ ಕೊನೆಯ ದಿನದವರೆಗೂ ನಾನು ಆರ್ಸಿಬಿಯಲ್ಲಿಯೇ ಇರುತ್ತೇನೆ ಎಂದಿದ್ದಾರೆ ವಿರಾಟ್.
ಇನ್ನು ವಿರಾಟ್ ಕೊಹ್ಲಿ ನಾಯಕತ್ವದಿಂದ ಕಳೆಗಿಳಿಯುತ್ತಿರುವುದು ಆರ್ ಸಿಬಿ ಅಭಿಮಾನಿಗಳಿಗೆ ಕಹಿಯಾದರೂ ಒಪ್ಪಲೇಬೇಕಾದ ಸತ್ಯವಾಗಿದೆ.