ಐಪಿಎಲ್ 2021- ಕಪ್ ಗೆಲ್ಲದಿದ್ರೂ ಜನಮನ ಗೆದ್ದ ಆರ್ ಸಿಬಿ ಕ್ಯಾಪ್ಟನ್ ವಿರಾಟ್ ಕೊಹ್ಲಿ..!
ವಿರಾಟ್ ಕೊಹ್ಲಿ.. ಟೀಮ್ ಇಂಡಿಯಾದ ನಾಯಕ.. ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಪ್ತಾನ. ಹಾಗೇ ಮುಂದಿನ ದಿನಗಳಲ್ಲಿ ಮಾಜಿ ಕ್ಯಾಪ್ಟನ್ ಆಗಬಹುದು.. ಆಗುತ್ತಾರೆ ಕೂಡ. ಅದರಲ್ಲಿ ಯಾವುದೇ ಸಂದೇಹವೂ ಇಲ್ಲ.
ಸದ್ಯದ ಮಟ್ಟಿಗೆ ವಿಶ್ವ ಕ್ರಿಕೆಟ್ ನ ಅತ್ಯಂತ ಜನಪ್ರಿಯ ಕ್ರಿಕೆಟಿಗ. ಐಸಿಸಿಯ ಯಾವುದೇ ಪ್ರಶಸ್ತಿಗಳನ್ನು ಗೆಲ್ಲದಿದ್ರೂ ವಿಶ್ವ ಕ್ರಿಕೆಟ್ ನಲ್ಲಿ ಅತ್ಯಂತ ಯಶಸ್ವಿ ನಾಯಕ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಮೂರು ಮಾದರಿಯ ಕ್ರಿಕೆಟ್ ನಲ್ಲೂ ಅದ್ಭುತ ಪ್ರದರ್ಶನವನ್ನು ನೀಡಿದೆ. ಜೊತೆಗೆ ಹಲವು ಮಹತ್ವದ ಗೆಲುವುಗಳನ್ನು ದಾಖಲಿಸಿದೆ.
ಇನ್ನು ವಿರಾಟ್ ಕೊಹ್ಲಿ ಆಟದಷ್ಟೇ ಇನ್ನಿತರ ಚಟುವಟಿಕೆಗಳಲ್ಲೂ ಒಂದು ಹೆಜ್ಜೆ ಮುಂದಿದ್ದಾರೆ. ಭಾರತದ ಶ್ರೀಮಂತ ಕ್ರೀಡಾಪಟು ಅನ್ನೋ ಗೌರವಕ್ಕೆ ಪಾತ್ರರಾಗಿರುವ ವಿರಾಟ್ ಜಾಹಿರಾತು ಲೋಕದ ಕಣ್ಮನಿ. ಅಷ್ಟೇ ಅಲ್ಲ, ಸಾಮಾಜಿಕ ಜಾಲ ತಾಣದಲ್ಲೂ ಅತೀ ಹೆಚ್ಚು ಫಾಲೋವರ್ಸ್ ಅನ್ನೂ ಹೊಂದಿರುವ ಕ್ರೀಡಾಪಟು. ಕ್ರಿಕೆಟ್ ಆಟಗಾರರನ್ನು ಹೊರತುಪಡಿಸಿ ಇನ್ನಿತರ ಕ್ರೀಡೆಗಳ ಕ್ರೀಡಾಪಟುಗಳಿಗೂ ಕೊಹ್ಲಿ ಉತ್ತೇಜನ ನೀಡುತ್ತಿದ್ದಾರೆ.
ಹಾಗೇ ಆಟದ ವಿಚಾರದಲ್ಲಿ ಕೊಹ್ಲಿಗೆ ಸರಿಸಾಟಿ ಯಾರು ಇಲ್ಲ. ಫಿಟ್ ಆಂಡ್ ಫೈನ್ ಆಗಿರುವ ಕೊಹ್ಲಿ ಬ್ಯಾಟ್ ನಿಂದ ಕಳೆದ ಎರಡು ವರ್ಷಗಳಿಂದ ಶತಕಗಳು ಹರಿದು ಬಂದಿಲ್ಲ. ರನ್ ಬರವನ್ನು ಎದುರಿಸುತ್ತಿದ್ದಾರೆ. ಆದ್ರೂ ಕೊಹ್ಲಿ ಹಲವು ದಾಖಲೆಗಳ ಒಡೆಯನಾಗಿದ್ದಾರೆ.
ಇನ್ನು ಮೈದಾನದಲ್ಲಿ ಕೊಹ್ಲಿಯ ವರ್ತನೆಯ ಬಗ್ಗೆ ಟೀಕೆ -ಟಿಪ್ಪಣಿಗಳು ಇದ್ದೇ ಇದೆ. ಸೋಲನ್ನು ಒಪ್ಪಿಕೊಳ್ಳಲು ತಯಾರಿಲ್ಲದ ಕೊಹ್ಲಿಯ ಮನೋಭಾವನೆಯಿಂದಾಗಿ ಕೆಲವೊಂದು ಬಾರಿ ತಾನು ತಂಡದ ನಾಯಕ ಎಂಬುದನ್ನು ಮರೆತುಬಿಡುತ್ತಾರೆ. ಆಕ್ರಮಣಕಾರಿ ಪ್ರವೃತ್ತಿಯ ಕೊಹ್ಲಿಯ ವರ್ತನೆಯ ಕುರಿತು ಕೆಲವು ಕ್ರಿಕೆಟಿಗರಿಗೆ ಅಸಮಾಧಾನವಿದೆ. ಅದನ್ನು ಹೊರತುಪಡಿಸಿ ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್ ನ ಕಿಂಗ್ ಎಂಬುದನ್ನು ಒಪ್ಪಿಕೊಳ್ಳಲೇಬೇಕು.
ಈ ನಡುವೆ ಮೈದಾನದಲ್ಲಿ ಕೊಹ್ಲಿಯ ವರ್ತನೆಯ ಬಗ್ಗೆ ಎಷ್ಟೇ ಅಸಮಾಧಾನವಿದ್ರೂ ಮೈದಾನದ ಹೊರಗೆ ಒಳ್ಳೆಯ ಗೆಳೆಯನಾಗಿರುತ್ತಾರೆ. ಸಹ ಆಟಗಾರರಿಗೆ ಸ್ಪೂರ್ತಿಯ ಚಿಲುಮೆಯಾಗಿರುತ್ತಾರೆ. ಐಪಿಎಲ್ ಇರಲಿ, ಬೇರೆ ಯಾವುದೇ ತಂಡವಿರಲಿ… ಆಟದ ವೇಳೆ ವಿರಾಟ್ ಕೊಹ್ಲಿ ಎದುರಾಳಿ ಆಟಗಾರರ ವಿರುದ್ಧ ಸವಾರಿ ನಡೆಸುವುದನ್ನು ನೋಡಿದ್ದೇವೆ. ಮಾತಿನ ಸಮರ ನಡೆಸುವುದನ್ನು ನೋಡಿದ್ದೇವೆ. ಆದ್ರೆ ಅದು ಆ ಕ್ಷಣಕ್ಕಷ್ಟೇ ಸೀಮಿತವಾಗಿರುತ್ತದೆ.
ಹೌದು, ಈ ಬಾರಿಯ ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿ ಗುರುವಾಗಿ ಗಮನ ಸೆಳೆಯುತ್ತಿದ್ದಾರೆ. ಸಾಮಾನ್ಯವಾಗಿ ವಿಶ್ವ ಕ್ರಿಕೆಟ್ ನ ಯುವ ಆಟಗಾರರು ಮತ್ತು ಸಹ ಆಟಗಾರರು ಶ್ರೇಷ್ಠ ಆಟಗಾರರಿಂದ ಸಲಹೆ ಮಾರ್ಗದರ್ಶನನಗಳನ್ನು ಪಡೆದುಕೊಳ್ಳುವುದು ಸಾಮಾನ್ಯ ಸಂಗತಿ. ಅದೇ ರೀತಿ ವಿರಾಟ್ ಕೊಹ್ಲಿ ಈ ಬಾರಿಯ ಐಪಿಎಲ್ ನಲ್ಲಿ ಎದುರಾಳಿ ತಂಡಗಳ ಯುವ ಆಟಗಾರರಿಗೆ ಗುರುವಾಗಿ ಕ್ಲಾಸ್ ಕೂಡ ತೆಗೆದುಕೊಂಡಿದ್ದಾರೆ.
ಮುಂಬೈ ಇಂಡಿಯನ್ಸ್ ಪಂದ್ಯದ ವೇಳೆ ಫಾರ್ಮ್ ಕಳೆದುಕೊಂಡಿದ್ದ ಇಶಾನ್ ಕಿಶಾನ್ ಕಣ್ಣೀರು ಹಾಕುತ್ತಿದ್ದಾಗ ವಿರಾಟ್ ಕೊಹ್ಲಿ ಬೆನ್ನು ತಟ್ಟಿ ಧೈರ್ಯ ತುಂಬಿದ್ದರು.
ಹಾಗೇ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಯುವ ಆಟಗಾರರಿಗೂ ವಿರಾಟ್ ಕೊಹ್ಲಿ ಸಲಹೆ ಸೂಚನೆಗಳನ್ನು ನೀಡಿದ್ದರು. ಅದ್ರಲ್ಲೂ ರಾಹುಲ್ ತ್ರಿಪಾಠಿಗೆ ಪ್ರತ್ಯೇಕವಾಗಿ ಕ್ಲಾಸ್ ಕೂಡ ತೆಗೆದುಕೊಂಡಿದ್ದರು.
ಇನ್ನು ರಾಜಸ್ತಾನ ರಾಯಲ್ಸ್ ತಂಡದ ಆಟಗಾರರಿಗೂ ವಿರಾಟ್ ಕೊಹ್ಲಿ ಹಿರಿಯಣ್ಣನಾಗಿ ಕೆಲವೊಂದು ಟಿಪ್ಸ್ ಗಳನ್ನು ನೀಡಿದ್ದರು.
ಒಟ್ಟಿನಲ್ಲಿ ವಿರಾಟ್ ಕೊಹ್ಲಿ ಎಷ್ಟೇ ಒರಟ, ಮುಂಗೋಪಿಯಾದ್ರೂ ಯುವ ಆಟಗಾರರಿಗೆ ಮಾರ್ಗದರ್ಶನ , ಸಲಹೆಗಳನ್ನು ನೀಡಿ ಉತ್ತೇಜನ ನೀಡುತ್ತಿರುವುದು ಖುಷಿಯ ಸಂಗತಿ. ಹಾಗಂತ ಇದರಲ್ಲಿ ಯಾವುದೇ ಅಚ್ಚರಿ ಇಲ್ಲ.
ಕಪ್ ಗೆಲ್ಲದಿದ್ರೂ ಜನಮನ ಗೆದ್ದ ಆರ್ ಸಿಬಿ ಕ್ಯಾಪ್ಟನ್ ವಿರಾಟ್ ಕೊಹ್ಲಿ..!