ರೋಗಿ ಬಯಸಿದ್ದೂ ಹಾಲು ಡಾಕ್ಟರ್ ಹೇಳಿದ್ದೂ ಹಾಲು ಎಂಬಂತೆ ಆಯ್ತಾ ಸಾರಿಗೆ ನೌಕರರ ಮುಷ್ಕರ..?
ಸಾರಿಗೆ ನೌಕರರ ಮುಷ್ಕರದ ಹಿಂದೆ ಸರ್ಕಾರದ ಕೈವಾಡ..?
ಸಾರಿಗೆ ನೌಕರರ ಮುಷ್ಕರಕ್ಕೆ ಸರ್ಕಾರವೇ ಬೆಂಬಲ ಕೊಡ್ತಾ ಇದ್ಯಾ..?
ಮುಷ್ಕರ ಶುರುವಾಗಿ ನಾಲ್ಕನೇ ದಿನಕ್ಕೆ ಕಾಲಿಟ್ಟರೂ ಸರ್ಕಾರ ಬಂಡೆಯಂತಾಗಿರುವುದು ಏಕೆ..?
ಜನಸಂದಣಿ ತಡೆಯೋಕೆ ಸರ್ಕಾರ ರೂಪಿಸಿದ ಮಾಸ್ಟರ್ ಪ್ಲಾನಾ ಸಾರಿಗೆ ನೌಕರರ ಮುಷ್ಕರ..?
ಇವು ಸದ್ಯ ರಾಜ್ಯದ ಪ್ರಜ್ಞಾವಂತ ಜನರಲ್ಲಿ ಮೊಳಕೆ ಹೊಡೆಯುತ್ತಿರುವ ಪ್ರಶ್ನೆಗಳು.
ಹೌದು..! ಸಾರಿಗೆ ನೌಕರರ ಮುಷ್ಕರಕ್ಕೂ, ಸರ್ಕಾರ ಇದಕ್ಕೆ ಬೆಂಬಲ ನೀಡೋದಕ್ಕೂ ಎಲ್ಲಿಯ ಸಂಬಂಧ ಅಂತ ಪ್ರಶ್ನೆ ಮೂಡಬಹುದು. ಆದ್ರೆ ಸರ್ಕಾರದ ನಡೆಯನ್ನ ಗಮನಿಸಿದ್ರೆ ಎಲ್ಲೋ ಒಂದು ಕಡೆ ಸಾರಿಗೆ ನೌಕರರ ಮುಷ್ಕರಕ್ಕೆ ಸರ್ಕಾರವೇ ಕುಮ್ಮಕ್ಕು ನೀಡುತ್ತಿರುವಂತಿದೆ. ಸಾರಿಗೆ ಸಚಿವರ ಹೇಳಿಕೆ, ಸಿಎಂ ಬಿಎಸ್ ಯಡಿಯೂರಪ್ಪನವರ ವರಸೆಯನ್ನ ಸೂಕ್ಷ್ಮವಾಗಿ ಗಮನಿಸಿದ್ರೆ ಸಾರಿಗೆ ನೌಕರರ ಮುಷ್ಕರವನ್ನ ಸರ್ಕಾರ ಗಂಭೀರವಾಗಿ ತೆಗೆದುಕೊಂಡಂತೆ ಕಾಣಿಸುತ್ತಲೇ ಇಲ್ಲ.
ಜನಸಂದಣಿ ತಡೆಯೋಕೆ ಸರ್ಕಾರ ರೂಪಿಸಿದ ಮಾಸ್ಟರ್ ಪ್ಲಾನಾ..?
ನಿಜ..! ಸದ್ಯ ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ದಿಕ್ಕುದೆಸೆ ಇಲ್ಲದಾಗೆ ಸಿಕ್ಕ ಸಿಕ್ಕವರ ದೇಹ ಹೊಕ್ಕಿ ಮರಣಮೃದಂಗ ಬಾರಿಸುತ್ತಿದೆ. ಪ್ರತಿದಿನ ರಾಜ್ಯದಲ್ಲಿ ಸಾವಿರಾರು ಮಂದಿ ಸೋಂಕಿಗೆ ಒಳಗಾಗುತ್ತಿದ್ದಾರೆ. ಇದು ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಶತಾಯಗತಾಯ ಕೊರೊನಾಗೆ ಕಡಿವಾಣ ಹಾಕಲೇಬೇಕಾದ ಸಂದಿಗ್ಧ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರವಿದೆ. ಇದಕ್ಕಾಗಿ ಕೆಲ ನಿಯಮಗಳನ್ನೂ ಸಹ ತಂದಿದೆ. ಆದ್ರೆ ಕೊರೊನಾಗೆ ಬ್ರೇಕ್ ಹಾಕಬೇಕೆಂದ್ರೆ ಮುಖ್ಯವಾಗಿ ಜನರ ಓಡಾಟ ನಿಲ್ಲಬೇಕು. ಜನ ಸಾರ್ವಜನಿಕವಾಗಿ ಗುಂಪು ಗೂಡುವುದು, ಒಟ್ಟಾಗಿ ಓಡಾಡುವುದು, ಒಂದು ಕಡೆಯಿಂದ ಮತ್ತೊಂದು ಕಡೆಗೆ ಜನರ ಓಡಾಟ ನಿಲ್ಲಬೇಕು. ಜನರ ಓಡಾಟ ನಿಲ್ಲಬೇಕು ಅಂದ್ರೆ ಸಾರಿಗೆ ಬಂದ್ ಆಗಬೇಕು. ಆದ್ರೆ ಸದ್ಯ ರಾಜ್ಯ ಸರ್ಕಾರ ಸಾರಿಗೆಯನ್ನ ತಾನಾಗಿಯೇ ಬಂದ್ ಮಾಡುವ ಸ್ಥಿತಿಯಲ್ಲಿಲ್ಲ. ಯಾಕೆಂದ್ರೆ ಕೊರೊನಾ ವಿಚಾರದಲ್ಲಿ ರಾಜ್ಯ ಸರ್ಕಾರದ ನಡೆಯ ಬಗ್ಗೆ ಎಲ್ಲೋ ಒಂದು ಕಡೆ ಜನರಲ್ಲಿ ಅಸಮಾಧಾನವಿದೆ. ಸಚಿವರ ಹೇಳಿಕೆಗಳು ಮತ್ತು ಉಳ್ಳವರ ಪರ ತೆಗೆದುಕೊಳ್ಳುತ್ತಿರುವ ನಿರ್ಧಾರಗಳಿಂದ ಸರ್ಕಾರ ಜನರ ಕೆಂಗಣ್ಣಿಗೆ ಗುರಿ ಆಗುತ್ತಿದೆ. ಅತೀ ಮುಖ್ಯವಾಗಿ ಕಳೆದ ವರ್ಷದ ಲಾಕ್ ಡೌನ್ ನಿಂದ ಜನರು ಇನ್ನೂ ಚೇತರಿಸಿಕೊಂಡಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸಾರಿಗೆ ಬಂದ್ ಮಾಡಿದ್ರೇ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. ಎಷ್ಟೋ ವ್ಯಾಪಾರ ವಹಿವಾಟುಗಳು ನಿಂತು ಹೋಗುತ್ತವೆ. ಈ ಎಲ್ಲ ಅಂಶಗಳನ್ನ ಮನಗಂಡಿರುವ ಸರ್ಕಾರ, ಸಾರಿಗೆ ನೌಕರರ ಮುಷ್ಕರಕ್ಕೆ ಪರೋಕ್ಷ ಬೆಂಬಲ ನೀಡುತ್ತಿದ್ಯಾ ಅನ್ನೋ ಪ್ರಶ್ನೆ ಉದ್ಭವಿಸಿದೆ.
ಅಂದಹಾಗೆ ಸಾಮಾನ್ಯವಾಗಿ ಅಂದ್ರೆ ಕೊರೊನಾ ಹೊರತಾದ ಸಂದರ್ಭದಲ್ಲಿ ಏನಾದರೂ ಸಾರಿಗೆ ನೌಕರರು ಮುಷ್ಕರ ನಡೆಸಿದ್ದರೇ ಸರ್ಕಾರ ತರಾತುರಿಯಲ್ಲಿ ಸಭೆಗಳ ಮೇಲೆ ಸಭೆ ನಡೆಸಿ ಪರಿಹಾರವನ್ನ ಹುಡುಕುತ್ತಿತ್ತು. ಅಥವಾ ಕನಿಷ್ಠ ನೌಕರರ ಮನವೊಲಿಸುವ ಕೆಲಸವನ್ನಾದರೂ ಮಾಡುತ್ತಿತ್ತು. ಆದ್ರೆ ರಾಜ್ಯದಲ್ಲಿ ಕಳೆದ ನಾಲ್ಕು ದಿನಗಳಿಂದ ನೌಕರರು ಮುಷ್ಕರ ನಡೆಸುತ್ತಿದ್ದರೂ ಸರ್ಕಾರ ಈ ಯಾವುದೇ ಕೆಲಸಕ್ಕೆ ಮುಂದಾಗುತ್ತಿಲ್ಲ ಯಾಕೆ..? ಎಲ್ಲೋ ಒಂದೊಂದು ಹೇಳಿಕೆಗಳನ್ನ ನೀಡುತ್ತಾ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಅಂತ ಅನಿಸುತ್ತಿದೆ. ಯಾಕೆಂದ್ರೆ ಸಾರಿಗೆ ನೌಕರರ ಮುಷ್ಕರದಿಂದ ಜನಸಂದಣಿ ಕಡಿಮೆ ಆಗಿರುವುದು ಕೊರೊನಾ ದೃಷ್ಠಿಕೋನದಿಂದ ಸರ್ಕಾರಕ್ಕೆ ಒಳ್ಳೆಯ ವಿಚಾರವೇ ಅಲ್ವಾ..?
ಆಯ್ತು.. ನಮ್ಮ ಅನುಮಾನುಗಳು ಸತ್ಯಕ್ಕೆ ದೂರ ಅಂತಾನೇ ಇಟ್ಟುಕೊಳ್ಳೋಣ. ಸಾರಿಗೆ ನೌಕರರ ಮುಷ್ಕರದಲ್ಲಿ ಸರ್ಕಾರದ ಕೈವಾಡ ಇಲ್ಲವೇ ಇಲ್ಲ ಅಂದುಕೊಳ್ಳೋಣ. ಹಾಗಾದ್ರೆ ಸರ್ಕಾರ ಮುಷ್ಕರ ತಡೆಯೋಕೆ ಮುಂದಾಗುತ್ತಿಲ್ಲ ಯಾಕೆ..? ಸಾರಿಗೆ ನೌಕರರ ಮುಷ್ಕರವನ್ನ ತಡೆಯೋ ಇಚ್ಛಾಶಕ್ತಿಯನ್ನ ಸರ್ಕಾರ ಪ್ರದರ್ಶನ ಮಾಡುತ್ತಿಲ್ಲ ಯಾಕೆ..? ಈ ಪ್ರಶ್ನೆಗಳಿಗೆ ಉತ್ತರ ಕೋಡೊರು ಯಾರು..?