ಚಿಕ್ಕಮಗಳೂರು: ರಾಜ್ಯ ರಾಜಕಾರಣದಲ್ಲಿ ಹೊಸ ವಿವಾದ ಸೃಷ್ಟಿಸಿದ ಜನಿವಾರ ಪ್ರಕರಣ ಸಂಬಂಧ ಸಚಿವ ಕೆ.ಎನ್. ರಾಜಣ್ಣ ಅವರು ಮಾಧ್ಯಮಗಳ ನೀತಿತತ್ತ್ವಗಳ ಮೇಲೆ ಕಿಡಿಕಾರಿದ್ದಾರೆ. ಜನಿವಾರ-ತಾಳಿ ವಿಚಾರವಾಗಿ ಮೊಳಗುತ್ತಿರುವ ವಿವಾದದ ನಡುವೆಯೇ ಅವರು ಮಾಧ್ಯಮಗಳ ದ್ವಂದ್ವ ಚಿಂತನೆಯ ವಿರುದ್ಧ ಗಂಭೀರ ಟೀಕೆ ಹೊರಹಾಕಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, “ಜನಿವಾರ ತೆಗೆದ ವಿಚಾರ ದೊಡ್ಡ ಸುದ್ದಿ, ಆದರೆ ತಾಳಿ ತೆಗೆದ ವಿಚಾರ ಸುದ್ದಿ ಆಗಲ್ಲ” ಎಂಬ ಮಾಧ್ಯಮದ ನಿಲುವು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದರು. “ತಾಳಿ ತೆಗೆದರೆ ತಪ್ಪಿಲ್ಲ, ಜನಿವಾರ ತೆಗೆದರೆ ತಪ್ಪು ಅನ್ನೋ ಮೌಲ್ಯಮಾಪನ ಬೇಧಭಾವದಿಂದ ಕೂಡಿದೆ,” ಎಂದು ಹೇಳಿದರು.
ಅವರು ಮುಂದುವರಿದು, “ಹೆಣ್ಣುಮಗಳ ತಾಳಿ ತೆಗೆಸಿದಾಗ ಯಾವ ಮಾಧ್ಯಮವೂ ಧ್ವನಿ ಎತ್ತಲಿಲ್ಲ. ಯಾಕೆಂದರೆ ಆಕೆ ಶೂದ್ರ ಹೆಣ್ಣುಮಗಳು. ಆದರೆ ಬ್ರಾಹ್ಮಣ ಸಮುದಾಯದ ವ್ಯಕ್ತಿಯ ಜನಿವಾರ ಕತ್ತರಿಸಿದ್ರೆ ಅದು ದೊಡ್ಡ ವಿವಾದ. ತಾಳಿ ಶೂದ್ರರ ಸಾಂಸ್ಕೃತಿಕ ಗುರುತಿನ ಭಾಗ, ಜನಿವಾರ ಬ್ರಾಹ್ಮಣರದ್ದು ಅದಕ್ಕೆ ಎರಡಕ್ಕೂ ಸಮಾನ ಮಾನ್ಯತೆ ಇರಬೇಕು,” ಎಂಬುದು ಅವರ ಮಾತು.
ಮಾಧ್ಯಮದ ತಟಸ್ಥತೆಯನ್ನು ಪ್ರಶ್ನಿಸಿದ ಸಚಿವರು
ಮಾಧ್ಯಮಗಳು ಶೋಷಿತ ವರ್ಗದವರ ಕುರಿತಾಗಿ ತೋರಿಸುವ ನಿರ್ಲಕ್ಷ್ಯತೆಯನ್ನೂ ಸಚಿವರು ಗಂಭೀರವಾಗಿ ಪ್ರಶ್ನಿಸಿದರು. “ಯಾವ ಶಾಸ್ತ್ರೀಯ ಬೇಧವಿಲ್ಲದಂಥ ತಾಳಿಗೂ ಜನಿವಾರಕ್ಕೂ ಸಮಾನ ಸಾಮಾಜಿಕ ಮಹತ್ವವಿದೆ. ಆದರೆ ಶೋಷಿತರ ಬಗ್ಗೆ ಮಾತನಾಡೋದು ಯಾರಿಗೂ ಆಸಕ್ತಿಯ ವಿಷಯವಲ್ಲ. ಅವರ ಮೇಲೆ ದಬ್ಬಾಳಿಕೆ ನಡೆದರೂ ಅದು ಸುದ್ದಿ ಆಗೋದಿಲ್ಲ,” ಎಂದ ಅವರು ಮಾಧ್ಯಮದವರ ಮೇಲೆ ಗೂಬೆ ಕೂರಿಸಿದರು.
ಮಾಧ್ಯಮದವರು “ಹಿಜಾಬ್ ಕುರಿತು ನಿಮ್ಮ ಅಭಿಪ್ರಾಯವೇನು?” ಎಂಬ ಪ್ರಶ್ನೆ ಕೇಳಿದಾಗ, ಅವರು “ಅಯ್ಯೋ… ಇಜಬ್ಬೋ… ಪಜಬ್ಬೋ… ನೀನು ನಡೀಯಪ್ಪಾ… ಸುಮ್ನೆ ಇರು!” ಎಂದು ಹಾಸ್ಯಶೈಲಿಯಲ್ಲಿ ಪ್ರತಿಕ್ರಿಯಿಸಿ ಅಲ್ಲಿಂದ ಹೊರಟರು.
ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸ
ಸಚಿವ ರಾಜಣ್ಣನವರ ಈ ಹೇಳಿಕೆ ಇದೀಗ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.








