#ಜೈ_ಭೀಮ್
ಅದು ಒಂದು ಸಮುದಾಯದ ಅಸ್ಮಿತೆಯಲ್ಲ.. ಶೋಷಿತ ವರ್ಗದ ಜೀವನಾಡಿ.. ಒಬ್ಬ ವ್ಯಕ್ತಿಯ ಆತ್ಮಾವಲೋಕನ ಮಾಡಿಕೊಳ್ಳುವ ಭಾವನೆ.. ‘ಜೀವನ’…. ‘ಬದುಕು’..
ಯೆಸ್.. ಇದು ಜೈ ಭೀಮ್ ಸಿನಿಮಾದ ತಿರುಳಿನ ಭಾಗ… ಇಂತಾ ಸಿನಿಮಾಗಳನ್ನ ಕಟ್ಟಿಕೊಡುವುದು ಸುಲಭದ ಕೆಲಸವಲ್ಲ.. ಯಾಕಂದ್ರೆ ಒಬ್ಬ ಸಮಚಿತ್ತ ಮನಸ್ಥಿತಿ ಉಳ್ಳವನು ಮಾತ್ರ ಇದನ್ನ ಚಿತ್ರಿಸಲು ಸಾಧ್ಯ.. ಈ ಪಾತ್ರಗಳನ್ನ ಎಲ್ಲರಲ್ಲೂ ಹರಗಿಸಿಕೊಳ್ಳಲು ಆಗಲ್ಲ.. ಹಾಗಾಗಿಯೇ ಭಾರತದಲ್ಲಿ ಧಾರ್ಮಿಕ ಭಾವನೆ ಅನ್ನೋ ಪದ ಇನ್ನೂ ಜೀವಂತವಾಗಿದೆ. ಇಲ್ಲದಿದ್ದರೆ ಅದರ ಬಳಕೆ ಯಾವತ್ತೋ ಸಮಾಧಿಯಾಗುತ್ತಿತ್ತು..
ಜೈ ಭೀಮ್ ಸಿನಿಮಾ ತಮಿಳುನಾಡಿನ ಒಂದು ಬುಡಕಟ್ಟು ಸಮುದಾಯದ ಶೋಷಣೆಯ ಸುತ್ತ ಹೆಣೆಯಲಾಗಿರುವ ಕಥೆ ಎನ್ನುವುದಕ್ಕಿಂತ, ಭವ್ಯ ಭಾರತದ ದುರಂತ ಎಂದರೆ ತಪ್ಪಾಗಲಾರದು. ನಿರ್ದೇಶಕ ಜ್ಞಾನವೇಲ್ ಅದಕ್ಕೆ ಸಂಫೂರ್ಣ ಜೀವ ತುಂಬಿದ್ದಾರೆ. ಇಲ್ಲಿ ಜೈ ಭೀಮ್ ಅನ್ನೋ ಟೈಟಲ್ ಯಾಕೆ ಎಂಬ ಪ್ರಶ್ನೆ ಎದುರಾದಾಗ ಅಂಬೇಡ್ಕರ್ ಎದುರಿಗೆ ನಿಲ್ತಾರೆ. ಒಬ್ಬನೇ ಒಬ್ಬ ನಿರಪರಾಧಿಗೆ ಯಾವುದೇ ಕಾರಣಕ್ಕೂ ಶಿಕ್ಷೆಯಾಗಬಾರದು ಅಂತಾ ಅಂಬೇಡ್ಕರ್ ಸಮಾನತೆಯ ತತ್ವಕ್ಕಾಗಿ ಜೀವ ಸವೆಸಿದ್ದಾರೆ. ಅದರಂತೆ ವರ್ಷಾನುಗಟ್ಟಲೆ ಓದಿ, ವಿಮರ್ಶಿಸಿ, ಪರಮರ್ಶಿಸಿ ಅದನ್ನ ಸಂವಿಧಾನದಲ್ಲಿ ಅಳವಡಿಸಿದ್ದಾರೆ. ಅಂಬೇಡ್ಕರ್ ವಕೀಲ ವೃತ್ತಿ ಮಾಡುವಾಗಲೂ ಸಮಾನತೆ, ಸತ್ಯದ ತತ್ವದ ಮೇಲೆಯೇ ನಡೆದುಕೊಂಡಿದ್ದಾರೆ. ಹಾಗಾಗಿಯೇ ಈ ಸಿನಿಮಾ ಜೈ ಭೀಮ್ ಆಗಲಿಕ್ಕೆ ಸಾಧ್ಯವಾಗಿರೋದು. ಈ ಕತೆಯಲ್ಲೂ ಸೂರ್ಯನ ಪಾತ್ರ ಕೂಡ ಅದೇ.. ಅದಕ್ಕೆ ಖ್ಯಾತ ನಟ ಪ್ರಕಾಶ್ ರೈ ಬೆಂಬಲವಾಗಿ ನಿಂತಿರೋದು ಚಿತ್ರಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.
ಈ ಸಿನಿಮಾದಲ್ಲಿ ಪಾತ್ರಗಳ ಆಯ್ಕೆ ಅಚ್ಚುಕಟ್ಟಾಗಿ ಮಾಡಿದ್ದಾರೆ. ಆರಂಭದಲ್ಲಿ ಇಲಿ ಇಡಿಯುವ ಬಗ್ಗೆ ತೋರಿಸುತ್ತಾ ಬುಡಕಟ್ಟು ಜನಾಂಗದ ಜೀವನ ಶೈಲಿಯನ್ನ ಭಿತ್ತರಿಸಿದ್ದಾರೆ. ಬೇಟೆಯಾಡುವುದು, ಹಂದಿ, ಮೊಲವನ್ನ ಹೊಡೆಯುವುದು. ತಿನ್ನುವುದು. ಅವರ ಮನೆ-ಮಠಗಳು.. ಮಳೆ ಬಂದರೆ ಅವರ ಜೀವನ ಪರಿಸ್ಥಿತಿ. ಕೆಲ ತುಣುಕುಗಳಲ್ಲಿ ಸಂಪೂರ್ಣ ರಾಚಿ ಹೋಗುತ್ತೆ.. ಅವರ ಉಡಿಗೆ-ತೊಡಿಗೆ, ಶಿಕ್ಷಣ, ಕಾಲಿಗೆ ಚಪ್ಪಲಿ ಕೂಡ ಇಲ್ಲದ ಸ್ಥಿತಿ. ಯಾರೋ ಮಾಡಿರುವ ಕಳ್ಳತನವನ್ನ ಪೊಲೀಸರ ತೆವಲಿಗೆ ಬುಡಕಟ್ಟು ಜನರನ್ನ ಬಲಿ ಪಶು ಮಾಡುವುದು.. ಓರ್ವ ಗರ್ಭಿಣಿ ಮಹಿಳೆಗೆ ಚಿತ್ರೆಹಿಂಸೆ ಕೊಡುವುದು, ಬೂಟು ಕಾಲಲ್ಲಿ ಒದೆಯುವುದು, ಕಣ್ಣಲ್ಲಿ ನೀರು ತರಿಸುತ್ತೆ. ಸಿನಿಮಾ ನೋಡುವಾಗಲೇ ಪ್ರತಿಯೊಬ್ಬನಿಗೂ ಆವೇಶ ಬರುತ್ತೆ.
ಅಪರಾಧಿಗಳ ಪರ ನಿಲ್ಲೋ ಅಧಿಕಾರಿಗಳು.. ಶೋಷಿತ ಸಮುದಾಯವನ್ನ ಬಲಿ ಪಶು ಮಾಡಿ ಬಳಿಕ ಬಣ್ಣ ಬಯಲಾದಾಗ ಹಣದ ಆಮಿಷ ಒಡ್ಡುವುದು, ಈಗಲೂ ಪ್ರಸ್ತುತ. ಇದೆಲ್ಲದರ ನಡುವೆ ತಣ್ಣಗೆ ನಮ್ಮನ್ನ ಹಿಡಿದಿಟ್ಟುಕೊಳ್ಳುವ ಪ್ರೀತಿ, ಮನಸ್ಸಿಗೆ ಮುದ ನೀಡುತ್ತೆ. ಇದರ ಜೊತೆ ಕ್ಯಾಮರಾ ವರ್ಕಿಂಗ್, ಬ್ಯಾಕ್ರೌಂಡ್ ಮ್ಯೂಸಿಕ್ ಸನಿಮಾವನ್ನ ಕೊನೆವರೆಗೆ ನೋಡುವಂತೆ ಹಿಡಿದಿಟ್ಟುಕೊಳ್ಳುತ್ತೆ. ಕೇಸ್ ಗೆಲ್ಲಲು ಇನ್ನಾವ ಸಾಕ್ಷಿ ಇದೆ ಅಂತಾ ನಮಗೆ ಗೊತ್ತಿಲ್ಲದಂತೆ ನಾವೇ ಪ್ರಶ್ನಿಸಿಕೊಳ್ಳುತ್ತೇನೆ. ಸಾಕ್ಷಿಯನ್ನ ನಾವೇ ಹುಡುಕುತ್ತಿರುತ್ತೇವೆ. ಇದು ನಿರ್ದೇಶಕರ ಕೈಚಳಕ ಅಲ್ಲದೆ ಮತ್ತೇನು ಅಲ್ಲ.
ಈ ಸಿನಿಮಾದ ಕುರಿತು ಕೆಲವರ ಪ್ರತಿಕ್ರಿಯೆಗಳನ್ನ ನೋಡಿದಾಗ, ಕೆಲ ಸಭ್ಯ ಮನಸ್ಥಿತಿ ಉಳ್ಳವರು, ಇದು ಪ್ರಸ್ತುತ ಕಾಲದಲ್ಲಿ ಇಲ್ಲ ಎಂಬ ದೊಡ್ಡ ದೊಡ್ಡ ಪೋಸ್ಟ್ಗಳನ್ನ ಹಾಕಿಕೊಂಡಿದ್ದಾರೆ. ಅದು ಯಾಕೆ ಅಂತಾ ಪ್ರಶ್ನೆ ಮಾಡಿದಾಗ ಇಂತ ಸಿನಿಮಾಗಳನ್ನ ಅವರಿಗೆ ಹರಗಿಸಿಕೊಳ್ಳಲು ಆಗಲ್ಲ ಎಂಬುದು ಸಾಬೀತಾಗುತ್ತೆ. ಅದಕ್ಕೆ ವಿಶ್ಲೇಷಣೆ ಮಾಡುತ್ತಾ ಹೋದ್ರೆ ಪುಟಗಳೂ ಮೀರುತ್ತೆ. ಆದ್ರೆ ಈ ಸಿನಿಮಾವನ್ನ 90 ದಶಕದ ಸುಮಾರಿಗೆ ನಡೆದ ಘಟನೆ ಅಂತಾ ತೋರಿಸುತ್ತಲೇ ವಿವರಿಸಿದ್ದಾರೆ. ಆದ್ರೆ ಪ್ರಸ್ತುತ ಇರೋ ವ್ಯವಸ್ಥೆ ಕೂಡ ಅದೇ ಇದೆ. ಇಲ್ಲಿ ಪ್ರತಿಯೊಬ್ಬರ ನಟನೆ ನ್ಯಾಚುರಲ್ ಆಗಿದೆ. ಯಾವುದೇ ಆಡಂಬರ ಇಲ್ಲ.. ಕತ್ತಿ, ಲಾಂಗ್ ಸದ್ದಿಲ್ಲ. ಬಣ್ಣ ಬಣ್ಣದ ಮೇಕಪ್ ಮಾಡಿ, ತಳುಕು-ಬಳುಕು ತೋರಿಸಿಲ್ಲ. ಸಾಹಿತ್ಯ ಸಂವೇಧನೆ ಇಲ್ಲದ ಹಾಡುಗಳಿಲ್ಲ. ಒಟ್ಟಾರೆ ನೋಡೊದಾದ್ರೆ, ಸಿನಿಮಾಕ್ಕೆ ಸಂಪೂರ್ಣ ಮಾಕ್ಸ್ ಕೊಡಲು ಹೆಮ್ಮೆ ಎನ್ನಿಸುತ್ತೆ. ಇದರ ನೈಜ ತುಷ್ಟೀಕರಣವನ್ನಅನುಭವಿಸಲು, ಅಮೆಜಾನ್ ಪ್ರೈಮ್ನಲ್ಲೇ ಸಿನಿಮಾ ನೋಡಬೇಕಾಗುತ್ತೆ.