ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸದಾ ತಮ್ಮ ಸ್ಪೋಟಕ ಹೇಳಿಕೆಗಳಿಂದಲೇ ಸಂಚಲನ ಮೂಡಿಸುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಇದೀಗ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಕೋಗಿಲು ಲೇಔಟ್ನಲ್ಲಿ ಅಕ್ರಮ ನಿವಾಸಿಗಳಿಗೆ ಸರ್ಕಾರ ಮನೆ ಮಂಜೂರು ಮಾಡುತ್ತಿರುವ ವಿಚಾರವಾಗಿ ವಿಧಾನಸೌಧದಲ್ಲಿ ಕಿಡಿ ಕಾರಿರುವ ಯತ್ನಾಳ್, ಸಚಿವ ಜಮೀರ್ ಅಹ್ಮದ್ ಅವರಿಗೆ ದೇಶ ಮತ್ತು ರಾಜ್ಯದ ಹಿತಾಸಕ್ತಿಗಿಂತ ತಮ್ಮ ಸಮುದಾಯದ ಜನಸಂಖ್ಯೆ ಹೆಚ್ಚಿಸುವುದು ಮತ್ತು ಮತದಾರರ ಪಟ್ಟಿಯನ್ನು ಹಿಗ್ಗಿಸುವುದರಲ್ಲೇ ಹೆಚ್ಚಿನ ಆಸಕ್ತಿಯಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇಸ್ಲಾಮೀಕರಣದ ರಹಸ್ಯ ಅಜೆಂಡಾ
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಯತ್ನಾಳ್, ಜಮೀರ್ ಅಹ್ಮದ್ ಖಾನ್ ಅವರ ತಲೆಯಲ್ಲಿ ಕೇವಲ ಈ ದೇಶವನ್ನು ಆದಷ್ಟು ಬೇಗ ಇಸ್ಲಾಮೀಕರಣ ಮಾಡಬೇಕು ಎನ್ನುವ ಒಂದೇ ಒಂದು ಟಾರ್ಗೆಟ್ ಇದೆ. ಅದನ್ನು ಬಿಟ್ಟರೆ ಅವರಿಗೆ ಅಭಿವೃದ್ಧಿಯ ಬಗ್ಗೆ ಯಾವುದೇ ಚಿಂತನೆಯಿಲ್ಲ. ತಮ್ಮ ಸಮುದಾಯದ ಮತದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಸರ್ಕಾರಿ ಸೌಲಭ್ಯಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ನೇರ ಆರೋಪ ಮಾಡಿದರು.
ಮುಖ್ಯಮಂತ್ರಿಗಳ ವಿರುದ್ಧ ಓಲೈಕೆ ಆರೋಪ
ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧವೂ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಯತ್ನಾಳ್, ಸಿದ್ದರಾಮಯ್ಯನವರಿಗೆ ಜಾತ್ಯತೀತ ಎನ್ನುವ ಮುಖವಾಡವಷ್ಟೇ ಇದೆ. ಆದರೆ ಅವರ ನೈಜ ಉದ್ದೇಶ ಮುಸ್ಲಿಂ ತುಷ್ಟೀಕರಣವಾಗಿದೆ. ಅವರಿಗೆ ಬೇರೆ ಸಮುದಾಯದ ಬಡವರ ಕಷ್ಟಗಳು ಕಾಣುತ್ತಿಲ್ಲ. ದಶಕಗಳಿಂದ ಉತ್ತರ ಕರ್ನಾಟಕದ ಭಾಗದಿಂದ ಎಷ್ಟೋ ಬಡವರು ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ಬಂದು ಕೂಲಿ ನಾಲಿ ಮಾಡುತ್ತಾ ಜೀವನ ನಡೆಸುತ್ತಿದ್ದಾರೆ. ಅಂತಹ ನಿಜವಾದ ಕನ್ನಡಿಗರಿಗೆ ಮತ್ತು ಮಣ್ಣಿನ ಮಕ್ಕಳಿಗೆ ಪುನರ್ವಸತಿ ಕಲ್ಪಿಸಲು ಸರ್ಕಾರಕ್ಕೆ ಮನಸ್ಸಿಲ್ಲ. ಆದರೆ ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಅನ್ಯರಿಗೆ ಮನೆ ಕೊಡಲು ಮುಂದಾಗಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ವಸತಿ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಸಿಎಂ ಹಾಗೂ ಡಿಸಿಎಂ ಅವರಿಗೆ ಎಚ್ಚರಿಕೆ ನೀಡಿದೆ, ಹೀಗಾಗಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎಂದು ಯತ್ನಾಳ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಮನೆ ಪಡೆಯುತ್ತಿರುವವರ ಪಟ್ಟಿಯಲ್ಲಿ ಬಾಂಗ್ಲಾದೇಶದವರು ಮತ್ತು ರೋಹಿಂಗ್ಯಾಗಳಂತಹ ಅಕ್ರಮ ನುಸುಳುಕೋರರು ಇರುವ ಬಲವಾದ ಶಂಕೆ ಇದೆ. ಸರ್ಕಾರ ಕೇವಲ ಮತಗಳ ಆಸೆಗಾಗಿ ದೇಶದ ಭದ್ರತೆಯನ್ನು ಕಡೆಗಣಿಸಿ, ಇವರ ಪೂರ್ವಾಪರ ಅಥವಾ ಪೌರತ್ವವನ್ನು ತನಿಖೆ ಮಾಡದೆಯೇ ಮನೆಗಳನ್ನು ಮಂಜೂರು ಮಾಡುತ್ತಿದೆ. ಇದನ್ನು ಬಿಜೆಪಿ ತೀವ್ರವಾಗಿ ವಿರೋಧಿಸುತ್ತದೆ. ಮೊದಲು ಫಲಾನುಭವಿಗಳು ಯಾವ ದೇಶದವರು ಎಂದು ತನಿಖೆಯಾಗಲಿ, ಆ ನಂತರವಷ್ಟೇ ಪುನರ್ವಸತಿಯ ಬಗ್ಗೆ ಯೋಚಿಸಲಿ ಎಂದು ಆಗ್ರಹಿಸಿದರು.
ಕನ್ನಡಿಗರಿಗೆ ಮಾಡುತ್ತಿರುವ ಅಪಮಾನ
ಕಾಂಗ್ರೆಸ್ ಹೈಕಮಾಂಡ್ಗೆ ತಲೆಬಾಗಿ ರಾಜ್ಯ ಸರ್ಕಾರ ಕನ್ನಡಿಗರಿಗೆ ಅಪಮಾನ ಮಾಡುತ್ತಿದೆ. ಸ್ಥಳೀಯರಲ್ಲದವರಿಗೆ, ಅಕ್ರಮವಾಗಿ ನೆಲೆಸಿರುವವರಿಗೆ ಮನೆಗಳನ್ನು ಕೊಡುವ ಮೂಲಕ ನಿಜವಾದ ಬಡ ಕನ್ನಡಿಗರ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಸರ್ಕಾರದ ಈ ನಡೆ ಖಂಡನೀಯ ಎಂದು ಯತ್ನಾಳ್ ಗರಂ ಆಗಿ ಪ್ರತಿಕ್ರಿಯಿಸಿದರು.
ಇದೇ ಸಂದರ್ಭದಲ್ಲಿ ರಾಜಕೀಯ ವಿದ್ಯಮಾನಗಳ ಬಗ್ಗೆಯೂ ಮಾತನಾಡಿದ ಯತ್ನಾಳ್, 2026ರಲ್ಲಿ ಬಿಜೆಪಿಯಲ್ಲಿ ಮಹತ್ವದ ಬದಲಾವಣೆಗಳಾಗುವ ಸುಳಿವು ನೀಡಿದರು. ಬಿಜೆಪಿಗೆ ನಾನು ವಾಪಸ್ ಬರಬೇಕು ಮತ್ತು ಮುಂಚೂಣಿಯಲ್ಲಿ ನಿಲ್ಲಬೇಕು ಎಂಬುದು ಅನೇಕ ಶಾಸಕರ ಅಭಿಪ್ರಾಯವಾಗಿದೆ. ಬೆಳಗಾವಿ ಅಧಿವೇಶನದಲ್ಲೂ ಶಾಸಕರು ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಪ್ರಸ್ತುತ ಕೆಲ ನಾಯಕರು ಜನರನ್ನು ಸೇರಿಸಲು ಹಣ ಖರ್ಚು ಮಾಡಿ ಸುಸ್ತಾಗಿದ್ದಾರೆ. ಜನರನ್ನು ಆಕರ್ಷಿಸುವ ಶಕ್ತಿ ಇಲ್ಲದ ವ್ಯಕ್ತಿಗಳ ಮುಂದೆ ಜೋತು ಬೀಳಲು ಶಾಸಕರು ಇಷ್ಟಪಡುತ್ತಿಲ್ಲ. ನಾನು ಹೋದರೆ ಜನ ದುಡ್ಡು ಇಲ್ಲದೆಯೇ ಸ್ವಯಂಪ್ರೇರಿತರಾಗಿ ಸೇರುತ್ತಾರೆ. ಇದರಿಂದ ಶಾಸಕರಿಗೆ ಖರ್ಚು ಕಡಿಮೆಯಾಗುತ್ತದೆ. 2026ರಲ್ಲಿ ಯಾರಿಗೆ ಶುಭ ಸುದ್ದಿ ಸಿಗುತ್ತೋ, ಯಾರು ಮನೆಗೆ ಹೋಗುತ್ತಾರೋ ಅಥವಾ ಯಾರು ಮೇಲೆ ಹೋಗುತ್ತಾರೋ ಕಾದು ನೋಡಿ ಎಂದು ಮಾರ್ಮಿಕವಾಗಿ ನುಡಿದರು.








