ಹಿಂದಿ ದಿವಸ್ ಆಚರಣೆ ವಿರುದ್ಧ ಸಿಡಿದೆದ್ದ ಕನ್ನಡ ಸ್ಟಾರ್ ಗಳು , ಗಣ್ಯರು
ಇಂದು (ಸೆ.14) ದೇಶದ ಹಲವು ಭಾಗಗಳಲ್ಲಿ ಹಿಂದಿ ದಿವಸ್ ಆಚರಣೆ ಮಾಡಲಾಗ್ತಿದೆ. ಆದ್ರೆ ಈ ದಿನವನ್ನ ದಕ್ಷಿಣ ಭಾರತದಲ್ಲಿ ಕರಾಳ ದಿನವನ್ನಾಗಿ ಆಚರಣೆ ಮಾಡಲಾಗ್ತಿದ್ದು, ಗಣ್ಯರು , ರಾಜಕೀಯ ನಾಯಕರು , ಹೋರಾಟಗಾರರು ಕಲಾವಿಧರು ಟ್ವೀಟ್ ಗಳನ್ನ ಮಾಡುತ್ತಾ ಹಿಂದಿ ಹೇರಿಕೆ ವಿರುದ್ಧ ಆಕ್ರೋಶ ಹೊರಹಾಕ್ತಾಯಿದ್ದಾರೆ. ಅದ್ರಲ್ಲೂ ಕರ್ನಾಟಕದಲ್ಲಿ ಹಿಂದಿ ಹೇರಿಕೆ ವಿರುದ್ಧ ಸಾಕಷ್ಟು ಮಂದಿ ಆಕ್ರೋಶ ಹೊರಹಾಕಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ , ಸ್ಯಾಂಡಲ್ ವುಡ್ ಸ್ಟಾರ್ ಧನಂಜಯ್ ಸೇರಿದಂತೆ ಹಲವರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹಿಂದಿ ಏರಿಕೆ ವಿರುದ್ಧ ಅಭಿಯಾನ ಶುರುವಾಗಿದೆ. ಟ್ವಿಟ್ಟರ್ ನಲ್ಲಿ #stophindiImposition ಟ್ರೆಂಡ್ ಆಗ್ತಿದೆ.
ಡಾಲಿ ಧನಂಜಯ್
ಈ ಬಗ್ಗೆ ಟ್ವೀಟ್ ಮಾಡಿರುವ ಡಾಲಿ , ಕನ್ನಡ ಕನ್ನಡ ಕನ್ನಡವೆಂದುಲಿ ಕನ್ನಡ ನಾಡಿನ ಓ ಕಂದ ಕನ್ನಡ ನಾಡಿನ ಕೀರ್ತಿಯ ಹಬ್ಬಿಸು ಕನ್ನಡ ತಾಯಿಗೆ ಆನಂದ. (ಬಾಲ್ಯದಲ್ಲಿ ಓದಿದ ಪದ್ಯ) ಎಲ್ಲ ಭಾಷೆಯನ್ನು ಗೌರವಿಸುತ್ತೇವೆ. ಆದರೆ ಯಾವುದೇ ಹೇರಿಕೆ ಸಲ್ಲದು #stophindiImposition ಎಂದು ಬರೆದುಕೊಂಡಿದ್ದಾರೆ.
ಸಿಂಪಲ್ ಸುನಿ
ಈ ಬಗ್ಗೆ ಆಕ್ರೋಶ ಹೊರಹಾಕಿರುವ ನಿರ್ದೇಶಕ ಸಿಂಪಲ್ ಸುನಿ ಭಾರತದ ವೈಶಿಷ್ಟ್ಯತೆಯೇ ವಿವಿಧತೆಯಲ್ಲಿ ಏಕತೆ ಹಲವಾರು ವೇಶ.. ಭಾಷೆ ಭಕ್ಷ್ಯಭೋಜನ.. ಆಟನೋಟ.. ಸಂಸ್ಕೃತಿ.. ಸಂಪ್ರದಾಯ ಇದ್ದರೂ ಒಂದಾಗಿರುವ ಹೆಗ್ಗಳಿಕೆ ನಮ್ಮದು.. ಹೀಗಿರುವಾಗ ಒಂದೇ ಭಾಷೆಯನ್ನು ಹೇರುವುದು ತಪ್ಪು ಅಭಿಪ್ರಾಯ..ಅವರವರ ರಾಜ್ಯದಲ್ಲಿ ಆ ಮಣ್ಣಿನ ಮಾತೃಭಾಷೆಗೆ ಪ್ರಥಮ ಸ್ಥಾನವಿರಬೇಕು..#StopHindiImposition ಎಂದು ಬರೆದುಕೊಂಡಿದ್ದಾರೆ.
ಮಾಜಿ ಸಿಎಂ ಕುಮಾರಸ್ವಾಮಿ
ಹೆಚ್ ಡಿ ಕುಮಾರಸ್ವಾಮಿ ಅವರು ಈ ಬಗ್ಗೆ ಸರಣಿ ಟ್ವೀಟ್ ಮಾಡಿದ್ದು, ಭಾರತ ಒಕ್ಕೂಟರಾಷ್ಟ್ರ. ಬಹುಸಂಸ್ಕೃತಿ, ಬಹುಭಾಷೆ, ಬಹುಜನರ ಆಗರ. ಅನೇಕ ಭಾಷೆಗಳ ತೊಟ್ಟಿಲು. ಆದರೆ ಒಂದೇ ಭಾಷೆಯನ್ನು ವೈಭವೀಕರಿಸುವ, ಹೇರುವ ಹುಂಬ ಪ್ರಯತ್ನವೇಕೆ ? (1/4) #StopHindiImposition ಎಂದು ಟ್ವೀಟ್ ಮಾಡಿದ್ದಾರೆ.
ಹಿಂದಿ ಹೇರಿಕೆಯನ್ನು ಕನ್ನಡಿಗರು ಒಪ್ಪುವುದಿಲ್ಲ. ಹಿಂದಿ ದಿವಸ ಆಚರಣೆಯನ್ನೂ ಸಹಿಸುವುದಿಲ್ಲ. ಒಕ್ಕೂಟದ ಎಲ್ಲಾ ಭಾಷೆಗಳಂತೆ ಹಿಂದಿಯೂ ಒಂದು ಭಾಷೆಯಷ್ಟೇ. ಕೇಂದ್ರ ಸರಕಾರ ಹಿಂದಿಗೆ ʼಇಂದ್ರ ವೈಭೋಗʼ ನೀಡಿ ಅನ್ಯ ಭಾಷೆಗಳನ್ನು ಬೀದಿಪಾಲು ಮಾಡುವುದನ್ನು ಸಹಿಸಲಾಗದು.(2/4)
ಹಿಂದಿ ಹೇರುವವರಿಗೆ ತಿಳಿದಿರಲಿ. ನಮ್ಮ ಕನ್ನಡ ಅಭಿಜಾತ ಭಾಷೆ. ನಮ್ಮ ಕನ್ನಡ ಸಾವಿರಾರು ವರ್ಷಗಳ ಘನ ಚರಿತ್ರೆಯುಳ್ಳ ಭಾಷೆ. ನಮ್ಮ ಕನ್ನಡ 6.4 ಕೋಟಿ ಜನರ ಹೃದಯಮಿಡಿತ. ನಮ್ಮ ಪಾಲಿನ ಮಾತೃಸ್ವರೂಪಿಣಿ. (3/4)
ನಮ್ಮ ನೆಲದಲ್ಲಿ ನಮ್ಮ ಕನ್ನಡ ಭಾಷೆಯೇ ಮೊದಲು. ಹಿಂದಿ ದಿವಸ ಆಚರಣೆ ಅಸಮರ್ಪಕ ಮತ್ತು ಅನಗತ್ಯ. ಹಿಂದಿ ಹೇರಿಕೆಯಿಂದ ಬಹುಭಾಷೆಯ ಭಾರತದ ನೆಮ್ಮದಿ ಕದಡುವುದು ಬೇಡ. (4/4) ಎಂದು ಹಿಂದಿ ಹೇರಿಕೆ ಖಂಡಿಸಿದ್ದಾರೆ.
ಅಹಿಂಸಾ ಚೇತನ್
ನಟ ಅಹಿಂಸಾ ಚೇತನ್ ಸಹ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದು, ಇಂದು, ಸೆಪ್ಟೆಂಬರ್ 14ನೇ ತಾರೀಖನ್ನು ಹಿಂದಿ ದಿವಸವೆಂದು ನಮ್ಮ ಸಂವಿಧಾನದ 343ನೇ ಆರ್ಟಿಕಲ್ನ ಪ್ರಕಾರ ಗುರುತಿಸಲಾಗಿದ್ದು, ಇದು ಹಿಂದಿಯನ್ನು ನಮ್ಮ ರಾಷ್ಟ್ರದ ಅಧಿಕೃತ ಭಾಷೆಯೆಂದು ಪರಿಗಣಿಸುತ್ತದೆ. ಇಂತಹ ಭಾಷಾ ತಾರತಮ್ಯವನ್ನು ನಾವು ವಿರೋಧಿಸುತ್ತೇವೆ. ಹಿಂದಿ ಪ್ರಾಮುಖ್ಯತೆಯನ್ನು ನಿಲ್ಲಿಸಿ, 8ನೇ ವೇಳಾಪಟ್ಟಿಯಲ್ಲಿರುವ ಎಲ್ಲಾ 22 ಭಾಷೆಗಳನ್ನೂ ಕೂಡ ಅಧಿಕೃತ ಭಾಷೆಯೆಂದು ಗುರುತಿಸಬೇಕು ಎಂದಿದ್ದಾರೆ.
ಸ್ಕ್ರ್ಯಾಪ್ ವಸ್ತುಗಳ ಬಳಕೆಯಿಂದ 14 ಅಡಿ ಮೋದಿ ಪ್ರತಿಮೆ..!