ಬನ್ನೇರುಘಟ್ಟ ಉದ್ಯಾನವನದಲ್ಲಿ ಚಿರತೆ ಸಫಾರಿ, ರಾಜ್ಯದಲ್ಲೇ ಮೊದಲ ಪ್ರಯೋಗ
ಇದೇ ಮೊದಲ ಭಾರಿಗೆ ರಾಜ್ಯದಲ್ಲಿ ಚಿರತೆ ಸಫಾರಿ ಆರಂಭಿಸಲು ತಯಾರಿ ನಡೆಸಲಾಗುತ್ತಿದ್ದು, ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಚಿರತೆ ಸಫಾರಿ ಪ್ರಾಯೋಗಿಕವಾಗಿ ಪ್ರಾರಂಭವಾಗುತ್ತಿದೆ.
50 ಎಕರೆ ಜಾಗದಲ್ಲಿ ‘ಡೇ ಕ್ರಾಲ್’ ನಿರ್ಮಿಸಿ, ಚಿರತೆ ಸಫಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಈಗಾಗಲೇ ಆನೆ, ಹುಲಿ, ಸಿಂಹ, ಕರಡಿ ಸಫಾರಿಗಳು ಜನರನ್ನ ಹೆಚ್ಚು ಸೆಳೆದ ಬೆನ್ನಲ್ಲೇ ಚಿರತೆ ಸಫಾರಿ ಪ್ರಾಣಿ ಪ್ರಿಯರಿಗೆ ಇನ್ನಷ್ಟು ಕಾತರ ಮೂಡಿಸಿದೆ.
ಬನ್ನೇರುಘಟ್ಟ ಜೈವಿಕ ಉದ್ಯಾನವನದ ಅಧಿಕಾರಿಗಳು ಮೂರ್ನಾಲ್ಕು ವರ್ಷಗಳಿಂದ ನಿರಂತರವಾಗಿ ಸಿದ್ಧತೆ ಮಾಡಿಕೊಂಡಿದ್ದರೂ ಮಂದಗತಿಯಲ್ಲಿ ಕಾರ್ಯ ಸಾಗಿತ್ತು. ಈಗ ಉದ್ಯಾನವನದ ಸುತ್ತ ಬೇಲಿ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಬನ್ನೇರುಘಟ್ಟದಲ್ಲಿಯೇ ಹುಟ್ಟಿ ಬೆಳೆದ ಚಿರತೆಗಳಾದ ಅಶೋಕ, ಲೋಕೇಶ್ ಮತ್ತು ಸಾನ್ವಿ ಹೆಸರಿನ ಚಿರತೆಗಳನ್ನು ಪ್ರಯೋಗಿಕವಾಗಿ ಚಿರತೆ ಸಫಾರಿಯ ಡೇ ಕ್ರಾಲ್ನಲ್ಲಿ ಬಿಡಲಾಗಿದೆ.
ಚಿರತೆಗಳಿಗೆ ಪ್ರತಿದಿನ ಆಹಾರ ನೀಡಲು 6 ಕಡೆ ಹೋಲ್ಡಿಂಗ್ ಹೌಸ್ ನಿರ್ಮಾಣ ಮಾಡಲಾಗಿದೆ. ಒಂದು ಭಾಗದಲ್ಲಿ ಪ್ರಾಯೋಗಿಕವಾಗಿ ಬಿಡಲಾಗಿರುವ ಮೂರು ಚಿರತೆಗಳನ್ನು ಪ್ರತ್ಯೇಕವಾಗಿ ಮೂರು ಕೋಣೆಗಳಲ್ಲಿ ಇರಿಸಲಾಗುತ್ತಿದೆ. ಚಿರತೆ ಹೊರಹೋಗದಂತೆ 20 ಅಡಿಗೂ ಎತ್ತರದ ಕಬ್ಬಿಣದ ಮಶ್ ಅಳವಡಿಸಿ ಮೇಲೆ ಶೀಟ ಹಾಕಲಾಗಿದೆ.
ಬನ್ನೇರುಘಟ್ಟ ಉದ್ಯಾನದಲ್ಲಿ ಈವರೆಗೆ ವ್ಯವಸ್ಥೆ ಮಾಡಿರುವ ಎಲ್ಲ ಸಫಾರಿಗಳು ಯಶಸ್ವಿಯಾಗಿವೆ. ಆದ್ದರಿಂದ ರಾಜ್ಯದಲ್ಲೇ ಮೊದಲ ಬಾರಿಗೆ ಚಿರತೆ ಸಫಾರಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ಸುರಕ್ಷತೆಗೆ ಅಗತ್ಯವಾದ ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಪ್ರಾಯೋಗಿಕವಾಗಿ ಮೂರು ಚಿರತೆಗಳನ್ನು ಗುರುವಾರದಿಂದ ಡೇ ಕ್ರಾಲ್ಗೆ ಬಿಡಲಾಗಿದೆ. ಅವುಗಳು ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಎಲ್ಲ ವ್ಯವಸ್ಥೆಗಳನ್ನೂ ಮಾಡಲಾಗಿದೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನದ ವೈದ್ಯಾಧಿಕಾರಿ ಡಾ. ಉಮಾಶಂಕರ್ ತಿಳಿಸಿದ್ದಾರೆ.