ಯಡಿಯೂರಪ್ಪ ಸಿಡಿ ಬಗ್ಗೆ ಚರ್ಚೆಯಾಗಲಿ : ವಾಟಾಳ್ ನಾಗರಾಜ್
ಚಾಮರಾಜನಗರ : ಸಿಎಂ ಬಿ.ಎಸ್.ಯಡಿಯೂರಪ್ಪ ಸಿಡಿಯ ಬಗ್ಗೆಯೂ ಚರ್ಚೆಯಾಗಲಿ. ಸದನದಲ್ಲಿ ಈ ಬಗ್ಗೆ ಚರ್ಚೆಯಾಗಬೇಕಿತ್ತು ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಸಿಡಿ ಬಗ್ಗೆ ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್, ರಮೇಶ್ ಜಾರಕಿಹೊಳಿ ಸಿಡಿ ಜೊತೆ ಸಿಎಂ ಬಿ.ಎಸ್.ಯಡಿಯೂರಪ್ಪ ಸಿಡಿಯ ಬಗ್ಗೆಯೂ ಚರ್ಚೆಯಾಗಲಿ.
ಸದನದಲ್ಲಿ ಈ ಬಗ್ಗೆ ಚರ್ಚೆಯಾಗಬೇಕಿತ್ತು. ರಮೇಶ್ ಜಾರಕಿಹೊಳಿ ಕನ್ನಡ ವಿರೋಧಿ. ಕನ್ನಡಿಗರನ್ನ ಬೈದಿದ್ದಾರೆ. ಅವನೊಬ್ಬ ಮರಾಠಿ ಏಜೆಂಟ್ ಎಂದು ವಾಗ್ದಾಳಿ ನಡೆಸಿದರು.
ಇನ್ನು ಆರು ಮಂದಿ ಮಂತ್ರಿಗಳು ಕೋರ್ಟ್ ಹೋಗಿದ್ದಾರೆ. ಅದರಲ್ಲಿ ಒಬ್ಬ ಮಂತ್ರಿ ಸಿಡಿ ಬಂದಿದೆ ಎಂದು ಹೊಸ ಬಾಂಬ್ ಸಿಡಿಸಿದ ವಾಟಾಳ್ ನಾಗರಾಜ್, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ರಬ್ಬರ್ ಸ್ಟ್ಯಾಂಪ್ ಆಗಿದ್ದಾರೆ. ಕಾಗೇರಿ ಅವರಿಗೆ ಆ ಸ್ಥಾನದಲ್ಲಿ ಮುಂದುವರೆಯಲು ಯೋಗ್ಯತೆ ಇಲ್ಲ ಎಂದು ಟೀಕಿಸಿದ್ರು.
ಯಡಿಯೂರಪ್ಪ ಸಿಕ್ಕ ಸಿಕ್ಕ ಜಾತಿಗೆಲ್ಲಾ ಪ್ರಾಧಿಕಾರ ರಚಿಸಿ ಹಣ ಕೊಡುತ್ತಾ ಸಂವಿಧಾನಕ್ಕೆ ಅಪಚಾರ ಎಸಗುತ್ತಿದ್ದಾರೆ. ಯಡಿಯೂರಪ್ಪ ಸರ್ವಾಧಿಕಾರಿ ಆಗಿದ್ದಾರೆ.
ಅಧಿಕಾರ ಹಿಡಿದು ದೌಲತ್ತು ಪ್ರದರ್ಶನ ಮಾಡುತ್ತಿದ್ದಾರೆ. ಮಂತ್ರಿಗಳು ಗುಲಾಮರಂತೆ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದ್ರು.