ಹಲ್ಲಿ ಬಿದ್ದ ಪೂರಿ ಬಾಜಿ ಕೊಟ್ಟ ಹೊಟೇಲ್ – 90 ಸಾವಿರ ಪರಿಹಾರ ಕೊಡಿಸಿದ ಗ್ರಾಹಕರ ಕೋರ್ಟ್
ಹುಬ್ಬಳ್ಳಿ(ಏ.12): ಹೋಟೆಲೊಂದರಲ್ಲಿ ಹಲ್ಲಿ ಬಿದ್ದ ಆಹಾರ ಸೇವಿಸಿ ಆಸ್ಪತ್ರೆ ಪಾಲಾದ ಗ್ರಾಹಕರಿಗೆ ಆಹಾರ ಪೂರೈಕೆ ಮಾಡಿದ ಹೋಟೆಲ್ನವರು ದೊಡ್ಡ ಮೊತ್ತದ ಪರಿಹಾರ ಕಟ್ಟಿಕೊಡುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.
2018 ರ ಸೆ.26 ರ ಬೆಳಗ್ಗೆ ಹುಬ್ಬಳ್ಳಿಯ ವರೂರಿನ ಕಾಮತ್ ಉಪಪಾರ ಹೋಟೆಲ್ನಲ್ಲಿ ಗ್ರಾಹಕರಾದ ವಿನಾಯಕ ಮತ್ತು ಸಹನಾ ಅವರು ಬೆಳಗಿನ ಉಪಹಾರಕ್ಕಾಗಿ ಪೂರಿ ಭಾಜಿ ತಿಂಡಿಗೆ ಆರ್ಡರ್ ಕೊಟ್ಟಿದ್ದರು.
ಆರ್ಡರ್ ತಂದು ಕೊಟ್ಟ ತಿಂಡಿಯಲ್ಲಿ ಹಲ್ಲಿ ಬಿದ್ದತ್ತು. ಇದನ್ನ ಗಮನಿಸಿದ ಇಬ್ಬರೂ ಗ್ರಾಹಕರು ಹೋಟೆಲ್ ಸಿಬ್ಬಂದಿಯ ಗಮನಕ್ಕೆ ತಂದರು. ಸಿಬ್ಬಂದಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ವಿಷಪೂರಿತ ಉಪಹಾರ ಸೇವಿಸಿದ್ದ ಗ್ರಾಹಕ ವಿನಾಯಕ ಅವರಿಗೆ ಹೊಟ್ಟೆನೋವು, ವಾಂತಿ ಕಾಣಿಸಿಕೊಂಡ ಕಾರಣ ಶಿಗ್ಗಾಂವ ಹಾಗೂ ಹುಬ್ಬಳ್ಳಿಯ ತತ್ವದರ್ಶ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಗ್ರಾಹಕರಿಕೆ ತಲಾ 45 ಸಾವಿರ ರೂಪಾಯಿಯಂತೆ ಒಟ್ಟು 90 ಸಾವಿರ ರೂ. ಗಳ ಪರಿಹಾರ ನೀಡಲು ಹೋಟೆಲಿನ ಮಾಲೀಕರಿಗೆ ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.
ಈ ಕುರಿತು ಧಾರವಾಡದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ವಿನಾಯಕ ಮತ್ತು ಸಹನ ದೂರು ದಾಖಲಿಸಿದರು. ದೂರಿನ ವಿಚಾರಣೆ ನಡೆಸಿದ ಆಯೋಗವು ಕಾಮತ್ ಉಪಚಾರ್ ಹೊಟೇಲ್ ನವರಿಂದ ಗ್ರಾಹಕರಿಗೆ ಸೇವಾ ನ್ಯೂನ್ಯತೆ ಆಗಿದೆ ಎಂದು ತೀರ್ಮಾನಿಸಿ, ಹೊಟೇಲ್ನವರು ಇಬ್ಬರೂ ಗ್ರಾಹಕರಿಗೆ ಒಟ್ಟು ರೂ. 90 ಸಾವಿರ ರೂಪಾಯಿ ಪರಿಹಾರ ನೀಡಬೇಕೆಂದು ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ ಹಾಗೂ ಸದಸ್ಯರಾದ ಪಿ.ಸಿ.ಹಿರೇಮಠ ಮತ್ತು ವಿ.ಎ. ಬೋಳಶೆಟ್ಟಿ ರವರು ತೀರ್ಪು ನೀಡಿ ಆದೇಶ ಹೊರಡಿಸಿದ್ದಾರೆ.








