ಕೊರೊನಾಗೆ ಲಾಕ್ ಡೌನ್ ಒಂದೇ ಉಪಾಯವಲ್ಲ : ಸಚಿವ ಬೈರತಿ ಬಸವರಾಜ್
ಬೆಂಗಳೂರು : ಕೊರೊನಾ ವೈರಸ್ ನಿಯಂತ್ರಣಕ್ಕೆ ಲಾಕ್ ಡೌನ್ ಒಂದೇ ಪರಿಹಾರವಲ್ಲ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಹೇಳಿದ್ದಾರೆ. ವಿಧಾನಸೌಧಲ್ಲಿ ಮಾತನಾಡಿದ ಅವರು, ಲಾಕ್ ಡೌನ್ ಒಂದೇ ಕೊರೊನಾ ನಿಯಂತ್ರಣಕ್ಕೆ ಪರಿಹಾರವಲ್ಲ. ಈಗಾಗಲೇ ಒಂದು ವಾರ ಕಾಲ ಲಾಕ್ಡೌನ್ ಮಾಡಿ ಆಗಿದೆ. ಕೊರೊನಾ ನಿಯಂತ್ರಿಸಲು ಹಲವು ಕ್ರಮಗಳನ್ನ ತೆಗೆದುಕೊಳ್ಳಲಾಗಿದೆ. ಲಾಕ್ಡೌನ್ ಆದೇಶ ಮುಂದುವರಿಕೆ ಮಾಡುವುದು ಬಿಡುವುದು ಸಿಎಂ ಯಡಿಯೂರಪ್ಪಗೆ ಬಿಟ್ಟಿರುವ ವಿಚಾರ. ಲಾಕ್ ಡೌನ್ ವಿಚಾರವಾಗಿ ಇಂದು ಸಂಜೆ 4 ಗಂಟೆಗೆ ಸಿಎಂ ನೇತೃತ್ವದಲ್ಲಿ ಸಭೆ ನಡೆಯಲಿದೆ. ಕೊರೊನಾ ಜೊತೆಗೆ ಜೀವನ ಮಾಡುವುದು ಈಗ ಅನಿವಾರ್ಯ ಎಂದು ಹೇಳಿದರು.
ಇದೇ ವೇಳೆ ದಾವಣಗೆರೆ ಜಿಲ್ಲಾ ಉಸ್ತುವಾರಿಯಾಗಿ ಜಿಲ್ಲೆಯ ಬಗ್ಗೆ ಮಾಹಿತಿ ನೀಡಿದ ಅವರು, ಇಂದು ಜಿಲ್ಲಾಧಿಕಾರಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ್ದೇನೆ. ಜಿಲ್ಲೆಯಲ್ಲಿ 162 ಕಂಟೈನ್ಮೆಂಟ್ ಜೋನ್ಗಳನ್ನು ಗುರುತಿಸಿದ್ದಾರೆ. ಇಡೀ ಜಿಲ್ಲೆಯಲ್ಲಿ ಎರಡು ಮೆಡಿಕಲ್ ಕಾಲೇಜುಗಳು ಇದೆ. ಇದರಲ್ಲಿ ಶೇ.50 ರಷ್ಟು ಬೆಡ್ಗಳನ್ನು ನೀಡಲು ಮುಂದಾಗಿದ್ದಾರೆ. ಇದರ ಪ್ರಕಾರ 1493 ಬೆಡ್ಗಳು ಸರ್ಕಾರಕ್ಕೆ ಸಿಗಲಿದೆ. ಇಲ್ಲಿಯ ತನಕ ಜಿಲ್ಲೆಯಲ್ಲಿ 35,452 ಪರೀಕ್ಷೆ ನಡೆಸಿದ್ದೇವೆ. ಮೂರು ಟೆಸ್ಟಿಂಗ್ ಲ್ಯಾಬ್ ಗಳನ್ನು ದಾವಣಗೆರೆಯಲ್ಲಿ ಮಾಡಿದ್ದೇವೆ. 640 ಟೆಸ್ಟ್ ಗಳನ್ನು ಪ್ರತಿದಿನ ಮಾಡುತ್ತಿದ್ದೇವೆ ಎಂದು ತಿಳಿಸಿದರು.