ಪ್ರೀತಿಸಿದ್ರೂ ಮದುವೆಯಾಗಿಲ್ಲವೆಂದು ಪ್ರೇಮಿಗಳಿಬ್ಬರು ಆತ್ಮಹತ್ಯೆ
ರಾಯಚೂರು : ಪ್ರೀತಿ ಮಾಡಿದ್ದೇವೆ, ಆದರೆ ಮದುವೆಯಾಗಿಲ್ಲವೆಂದು ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಆರ್ಹೆಚ್ ಕ್ಯಾಂಪ್ 3ರಲ್ಲಿ ನಡೆದಿದೆ.
ಲವಕುಮಾರ್ ಸರ್ಕಾರ್(24) ಹಾಗೂ ಕರೀನಾ (18) ಎಂಬುವರು ಮೃತ ಪ್ರೇಮಿಗಳು. ಘಟನೆ ಸಂಬಂಧ ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಡೆದಿದ್ದೇನು?: ಲವಕುಮಾರ್ ಹಾಗೂ ಕರೀನಾ ಇಬ್ಬರು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ, ಕಳೆದ ಎರಡು ತಿಂಗಳ ಹಿಂದೆ ಲವಕುಮಾರ್ಗೆ ಕುಟುಂಬಸ್ಥರು ನೋಡಿದ ಬೇರೆ ಹುಡುಗಿಯೊಂದಿಗೆ ಮದುವೆ ಮಾಡಲಾಯಿತು.
ಪ್ರೀತಿಸಿದ ಪ್ರೇಯಸಿಯೊಂದಿಗೆ ಮದುವೆಯಾಗಲು ಆಗಲಿಲ್ಲ ಎಂದು ಮನನೊಂದು ಇಬ್ಬರು ಹೊಲದಲ್ಲಿ ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ.
ಘಟನಾ ಸ್ಥಳಕ್ಕೆ ಸಿಂಧನೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಳಿಕ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ನಡೆಸಿ ಪೋಷಕರಿಗೆ ಹಸ್ತಾಂತರಿಸಿದ್ದಾರೆ.