ಬೆಂಗಳೂರು: ಮದುವೆಗೆ ಸಾಲದ ಸುಳಿಗೆ ಸಿಕ್ಕವರನ್ನು ನಾವು ನೋಡಿದ್ದೇವೆ. ಆದರೆ, ಇಲ್ಲೊಂದು ಪ್ರಕರಣದಲ್ಲಿ ಮದುವೆಗಾಗಿ ಕಳ್ಳತನ ಮಾಡಿರುವ ಪ್ರೇಮಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಸದ್ಯ ಫ್ರಾಡ್ ಪ್ರೇಮಿಗಳನ್ನು ಆಡುಗೊಡಿ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನಲ್ಲಿ (Bengaluru) ಕಳ್ಳತನ ಮಾಡಿ ತಮಿಳುನಾಡಿನ ಚೆನೈನಲ್ಲಿ ಸೆಟಲ್ ಆಗಿದ್ದ ನಾರಾಯಣ ಸ್ವಾಮಿ, ನವೀನಾ ಎಂಬ ಫ್ರಾಡ್ ಪ್ರೇಮಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಐನಾತಿ ನಾರಾಯಣ ಸ್ವಾಮಿಗೆ ಈ ಹಿಂದೆ ಮದುವೆ ಆಗಿದ್ದು, ಮೊದಲ ಹೆಂಡತಿಗೆ ಪ್ಯಾರಲಿಸಿಸ್ ಆಗಿದೆ. ಹೀಗಾಗಿ ಎರಡನೇ ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದ.
ಇನ್ನೊಂದೆಡೆ ನವೀನಾ ಕೂಡ ಗಂಡನಿಗೆ ಪ್ಯಾರಲಿಸಿಸ್ ಆಗಿದ್ದರಿಂದ, ಜೋಡಿ ಆ್ಯಪ್ ನಲ್ಲಿ ಬೇರೊಬ್ಬನ ಹುಡುಕಾಟ ನಡೆಸುತ್ತಿದ್ದಳು. ಇಬ್ಬರ ಮಧ್ಯೆ ಪರಿಚಯವಾಗಿ ಪರಸ್ಪರ ಪ್ರೀತಿ ಮಾಡಿ ಮದುವೆ ಮಾಡಿಕೊಳ್ಳುವುದಕ್ಕೆ ತೀರ್ಮಾನಿಸಿದ್ದರು.
ಆದರೆ, ಮದುವೆಗೆ ಇಬ್ಬರಿಗೂ ಹಣಕಾಸಿನ ಸಮಸ್ಯೆ ಇದ್ದ ಕಾರಣ ಕಳ್ಳತನದ ಯೋಜನೆ ರೂಪಿಸಿದ್ದಾರೆ. ಆಗ ಆರೋಪಿ ನಾರಾಯಣ ಸ್ವಾಮಿ, ತನ್ನ ತಾಯಿ ಕೆಲಸಕ್ಕೆ ಹೋಗುತ್ತಿದ್ದ ಮನೆಗೆ ಹೋಗಿಬರುತ್ತಿದ್ದ. ಈತನು ಕೂಡ ಆಗಾಗ ಕೆಲಸಕ್ಕೆ ಹೋಗುತ್ತಿದ್ದ. ಅದನ್ನೇ ಬಂಡವಾಳ ಮಾಡಿಕೊಂಡ ನಾರಾಯಣ ಸ್ವಾಮಿ ತಾಯಿ ಕೆಲಸಕ್ಕೆ ಹೋಗುತ್ತಿದ್ದ ಮನೆಗೆ ನುಗ್ಗಿ 333 ಗ್ರಾಂ ಚಿನ್ನಾಭರಣ ಕದ್ದು ಮದುವೆ ಮಾಡಿಕೊಂಡು ಹೋಗಿ ತಮಿಳುನಾಡಿನ ಚೆನೈನಲ್ಲಿ ಸೆಟಲ್ ಆಗಿದ್ದ. ಮನೆಯವರು ದೂರು ನೀಡಿದ ನಂತರ ಪೊಲೀಸರು ಪ್ರಕರಣದ ತನಿಖೆ ನಡೆಸಿದ್ದರು. ಆ ನಂತರ ತನಿಖೆಯಲ್ಲಿ ವಿಷಯ ಬಹಿರಂಗವಾಗಿದೆ. ಈಗ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.