ತೀರ್ಥ ಸೇವನೆ ವೇಳೆ ಕೃಷ್ಣ ವಿಗ್ರಹವನ್ನೆ ನುಂಗಿದ ವ್ಯಕ್ತಿ, ಶಸ್ತ್ರ ಚಿಕಿತ್ಸೆ ಮೂಲಕ ಹೊರತೆಗೆದ ವೈದ್ಯರು
ಪೂಜೆ ಬಳಿಕ ತೀರ್ಥ ಸೇವನೆ ವೇಳೆ ವ್ಯಕ್ತಿಯೊಬ್ಬರು ಬಾಲಕೃಷ್ಣನ ಲೋಹದ ಮೂರ್ತಿಯನ್ನ ನುಂಗಿರುವ ವಿಲಕ್ಷಣ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ದೇವರಿಗೆ ಪೂಜೆ ಮಾಡಿ ಅಂಗೈನಲ್ಲಿ ಬಾಲಕೃಷ್ಣನ ಮೂರ್ತಿ ಇಟ್ಟುಕೊಂಡಿದ್ದ 45 ವರ್ಷದ ವ್ಯಕ್ತಿ ಎಂದಿನಂತೆ ತೀರ್ಥ ಸೇವೆನೆ ವೇಳೆ ಆಕಸ್ಮಿಕವಾಗಿ ಕೃಷ್ಣನ ಮೂರ್ತಿಯನ್ನು ನುಂಗಿದ್ದಾರೆ. ಇವರು ಪ್ರತಿ ದಿನ ದೇವರ ಪೂಜೆ ಮಾಡಿದ ಬಳಿಕ ತೀರ್ಥ ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡಿದ್ದರು.
ಬಳಿಕ ವ್ಯಕ್ತಿಗೆ ಗಂಟಲು ನೋವು ಶುರುವಾಗಿದ್ದು ಗಂಟಲು ಊತ ಕಾಣಿಸಿಕೊಂಡಿದೆ. ಕೂಡಲೇ ಸ್ಥಳೀಯ ವೈದ್ಯರನ್ನು ಆತ ಸಂಪರ್ಕಿಸಿದ್ದಾರೆ.
ವ್ಯಕ್ತಿಯನ್ನು ಪರಿಶೀಲಿಸಿದ ವೈದರು ಎಕ್ಸ್ರೇ ಮಾಡಿಸಲು ಸೂಚಿಸಿದ್ದಾರೆ. ಎಕ್ಸ್ರೇ ವರದಿಯಲ್ಲಿ ಬಾಲಕೃಷ್ಣನ ವಿಗ್ರಹ ಗಂಟಲಿನಲ್ಲಿ ಇರುವುದು ಪತ್ತೆಯಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಎಂಡೋಸ್ಕೋಪ್ ಮಾಡಿರುವ ವೈದ್ಯರು ಬಾಲಕೃಷ್ಣನ ಮೂರ್ತಿಯ ವ್ಯಕ್ತಿಯ ಆಹಾರ ನಾಳದಲ್ಲಿ ಸಿಲುಕಿಕೊಂಡಿರುವುದನ್ನು ಪತ್ತೆ ಮಾಡಿದ್ದಾರೆ. ನಂತರ ಇಎನ್ಟಿ ವಿಭಾಗದ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿ ಗಂಟಲಿನಲ್ಲಿ ಸಿಲುಕಿದ್ದ ಕೃಷ್ಣನ ವಿಗ್ರಹವನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ.